ಚಳ್ಳಕೆರೆ: ಕೇಂದ್ರ ಚುನಾವಣಾ ಆಯೋಗ 18 ವರ್ಷ ಮೇಲ್ಪಟ್ಟ ಯುವಕರಿಗೆ ಮತದಾನದ ಹಕ್ಕನ್ನು ನೀಡುವ ಮೂಲಕ ಅವರೂ ಸಹ ರಾಷ್ಟ್ರದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾಗವಹಿಸುವಂತೆ ಮಾಡಲಾಗಿದೆ ಎಂದು ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಎಂ.ರವೀಶ್ ತಿಳಿಸಿದರು.
ಕೇಂದ್ರ ಚುನಾವಣಾ ಆಯೋಗ, ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದ್ದು, ಮತದಾನದ ಹಕ್ಕು ಪಡೆದವರು ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಮತದಾರರ ದಿನಾಚರಣೆ ಪ್ರತಿಜ್ಞಾವಿಧಿ ಬೋಧಿಸಿದ ರಾಜ್ಯಶಾಸ್ತ್ರ ಉಪನ್ಯಾಸಕ ಜಬೀವುಲ್ಲಾ, ಕೇಂದ್ರ ಚುನಾವಣಾ ಆಯೋಗದ ಸೂಚನೆಯಂತೆ ಈ ಕಾರ್ಯಕ್ರಮ ಆಯೋಜಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಜನಪ್ರತಿನಿಧಿಯನ್ನು ನಾವೇ ಪವಿತ್ರವಾದ ಮತದಾನದ ಮೂಲಕ ಆಯ್ಕೆ ಮಾಡಬಹುದಾಗಿದೆ. ಇದು ನಮ್ಮ ರಾಷ್ಟ್ರದ ಸಂವಿಧಾನ ನಮಗೆ ನೀಡಿದ ಕೊಡುಗೆ. ಎಲ್ಲಾ ವಿದ್ಯಾರ್ಥಿಗಳು ಮತದಾರರ ಪಟ್ಟಿಯಲ್ಲಿ ನೊಂದಾವಣೆಯಾಗಬೇಕಲ್ಲದೆ, ಸ್ನೇಹಿತರು, ಬಂಧುಗಳಲ್ಲಿ 18 ವರ್ಷ ವಯಸ್ಸಿನ ಯಾರೇ ಆದರೂ ಮತದಾರರ ಪಟ್ಟಿಗೆ ಸೇರ್ಪಡೆಯಾಗುವಂತೆ ಜಾಗೃತಿವಹಿಸಬೇಕು ಎಂದರು.ಎನ್ನೆಎಸ್ಸೆಸ್ ಅಧಿಕಾರಿ ಬಿ.ಶಾಂತಕುಮಾರಿ, ಉಪನ್ಯಾಸಕ ವಸಂತ ಕುಮಾರ್, ಹಬೀಬುಲ್ಲಾ, ಚಂದ್ರಶೇಖರ್, ಕುಮಾರಸ್ವಾಮಿ, ಹೀನಾಕೌಸರ್, ಜಾನಕಮ್ಮ, ಈರಣ್ಣ, ನಾಗರಾಜು ಬೆಳಗಟ್ಟ, ವಾಹಿದ್ ಇಮ್ರಾನ್, ರಾಮಾಂಜನೇಯ, ನಾಗಣಭೂಷಣ್ ಸ್ವಾಮಿ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.