- ಕಡೂರಿನಲ್ಲಿ ಮಾದಿಗ ಮುನ್ನಡೆ ಸಮಾವೇಶ ।
ಕನ್ನಡಪ್ರಭ ವಾರ್ತೆ, ಕಡೂರುಜನವರಿ 17ರಂ ಮೀಸಲಾತಿ ಕುರಿತ ತೀರ್ಪು ನಮ್ಮ ಮಾದಿಗ ಸಮಾಜದ ಪರವಾಗಿ ಬರುವ ನಿರೀಕ್ಷೆ ಇದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ. ನಾರಾಯಣಸ್ವಾಮಿ ಹೇಳಿದರು.
ಕಡೂರಿನ ಮಚ್ಚೇರಿಯ ಶ್ರೀ ಬೆಂಕಿ ಲಕ್ಷ್ಮಯ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ಮಾದಿಗ ಮುನ್ನಡೆ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಮಾದಿಗ ಸಮುದಾಯದ ಜೊತೆ ನಾವಿದ್ದೇವೆ ಎಂದು ಮೋದಿಯವರು ಮತ್ತು ಅಮಿತ್ ಶಾ ಹೇಳಿರುವ ಕಾರಣ ಇಡೀ ದೇಶದ ಮಾದಿಗ ಸಮಾಜ ಜಾಗೃತವಾಗಬೇಕು ಎಂದರು.ಈ ಸಮಾವೇಶಕ್ಕೆ ಹೆಚ್ಚಿನ ಸಹಕಾರ ನೀಡಿರುವ ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಅವರಿಗೆ ಮಾದಿಗ ಸಮಾಜದ ಪರವಾಗಿ ಕೃತಜ್ಞತೆ ಅರ್ಪಿಸುತ್ತೇನೆ. ಈಗಾಗಲೇ ರಾಜ್ಯದ 26 ಕಡೆ ಮಾದಿಗ ಮುನ್ನಡೆ ಸಮಾವೇಶ ಯಶಸ್ವಿಯಾಗಿ ನಡೆದಿದ್ದು, ಇಲ್ಲೂ ಯಶಸ್ವಿಯಾಗಿ ನಡೆಯುತ್ತಿದೆ. ತುಳಿತಕ್ಕೆ ಒಳಗಾದ ಸಮಾಜಗಳಿಗೆ ಧ್ವನಿ ಕೊಟ್ಟ ಅಂಬೇಡ್ಕರ್ ದೇಶಕ್ಕೆ ನೀಡಿದ ಮೀಸಲಾತಿ ಮತ್ತು ಅಭಿವೃದ್ಧಿ ಕುರಿತು ಚರ್ಚೆ ನಡೆಯುತ್ತಿದೆ. ದಕ್ಷಿಣ ಭಾರತದ ಆಂಧ್ರ , ತಮಿಳುನಾಡು, ಮಹಾರಾಷ್ಟ್ರ, ಕೇರಳ, ಕರ್ನಾಟಕದಲ್ಲಿರುವ ಮೀಸಲಾತಿ ವಂಚಿತ ಮಾದಿಗ ಸಮಾಜದ ಮೀಸಲಾತಿ ಯಾರಿಗೆ ಬಂತು ಎಲ್ಲಿಗೆ ಬಂತು ಎಂಬಂತಾಗಿ ರುವುದು ವಿಪರ್ಯಾಸ ಎಂದರು.
ಮೀಸಲಾತಿಗಾಗಿ ಆಂಧ್ರದಲ್ಲಿ 35 , ಕರ್ನಾಟಕದಲ್ಲಿ 28 ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಆದರೆ ಶಕ್ತಿಹೀನರಿಗೆ ಮೀಸಲಾತಿ ಸಿಗುತ್ತಿಲ್ಲ. ಸರ್ಕಾರದ ನೂರಾರು ಯೋಜನೆಗಳಲ್ಲಿ, ಸರ್ಕಾರದ ನಿಗಮಗಳಲ್ಲಿ , ಶಿಕ್ಷಣ ಮತ್ತು ಬೇರೆ ಕ್ಷೇತ್ರಗಳಲ್ಲಿ ಪ್ರತ್ಯೇಕ ಮೀಸಲಾತಿ ಕೊಡಿ ಎಂಬ ಹೋರಾಟ ಇಂದಿನದಲ್ಲ. ಮಾದಿಗ ಸಮುದಾಯಕ್ಕೆ ನ್ಯಾಯ ಕೊಡಿಸಬೇಕೆಂಬ ನಮ್ಮ ಹೋರಾಟ ನೋಡಿ ಸಂಘ ಪರಿವಾರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಎಸ್ಸಿಗೆ 15ರಿಂದ 17, ಎಸ್ಟಿಗೆ 3 ರಿಂದ 7 ಪರ್ಸೆಂಟ್ ಒಳ ಮೀಸಲಾತಿಗೆ ಶಿಫಾರಸು ಮಾಡಿತು. ಆದರೆ 60 ವರ್ಷ ರಾಷ್ಟ್ರ ಆಳಿದ ಕಾಂಗ್ರೆಸ್ಸಿಗರಿಗೆ ನಮ್ಮ ಸಮಾಜದ ಬುದ್ದಿ ವಂತರ, ಸಮಾಜದ ವಕೀಲರಾಗಲಿ ಯಾರೊಬ್ಬರೂ ಚಕಾರ ಎತ್ತಲಿಲ್ಲ. ರಾಮಚಂದ್ರ ರಾವ್ ಆಯೋಗ ದಕ್ಷಿಣ ಭಾರತದ ಐದು ರಾಜ್ಯಗಳಲ್ಲಿ ಮಾದಿಗ ಸಮಾಜಕ್ಕೆ ನ್ಯಾಯಯುತ ಮೀಸಲಾತಿ ಸಿಕ್ಕಿಲ್ಲ ಎಂದರು.ದಕ್ಷಿಣ ಭಾರತದ ಮಾದಿಗರ ಪರವಾಗಿರುವ ಎಲ್ಲ ರಾಜ್ಯಗಳ ಜಡ್ಜ್ ಗಳು ನೀಡಿದ ತೀರ್ಪುಗಳು ಸದನದಲ್ಲಿ, ಸಂಸತ್ತಲ್ಲಿ ಕೂಡ ಚರ್ಚೆಯಾಗಲಿಲ್ಲ. ಜನವರಿ 17ರಂದು ಮೀಸಲಾತಿ ಕುರಿತ ತೀರ್ಪು ನಮ್ಮ ಮಾದಿಗ ಸಮಾಜದ ಪರವಾಗಿ ಬರುವ ನಿರೀಕ್ಷೆಯಿದ್ದು, ದೇಶದ ಮಾದಿಗ ಸಮಾಜ ಜಾಗೃತವಾಗಬೇಕು ಎಂದರು.
ಮಾದಿಗ ಮತ್ತು ಇದರಲ್ಲಿರುವ 101 ಜಾತಿಯ ನಮ್ಮ ಮಕ್ಕಳು ಕಲಿಯಬೇಕು. ಅಂಬೇಡ್ಕರ್ ಹೇಳಿದಂತೆ ಉನ್ನತ ಶಿಕ್ಷಣ ಕೊಡುವುದರಲ್ಲಿ ವಿಫಲರಾಗಿದ್ದೇವೆ. ಈ ಮಾದಿಗ ಮುನ್ನಡೆ ಸಮಾವೇಶವು ಜಾಗೃತಿ ಸಮಾವೇಶವಾಗಿ ಹೊರಹೊಮ್ಮಿದೆ ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.ಮಾಜಿ ಸಚಿವ ಸಿ ಟಿ ರವಿ ಮಾತನಾಡಿ, ಸರ್ವೋದಯ ಮತ್ತು ಅಂತ್ಯೋದಯ ಕಡೆಗೆ ಎಂದರೆ ಸರ್ವರ ಅಭಿವೃದ್ಧಿ ಮತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ ತಲುಪುವ ಆಶಯ ಬಿಜೆಪಿಯದ್ದಾಗಿದೆ. ಒಟ್ಟಾಗಿ ಬಾಳುವ ತತ್ವದ ಮೋದಿ ಯೋಜನೆಗಳು ಯಾವುದೇ ಜಾತಿ ಮೇಲೆ ಆಧಾರಿತವಾಗಿ ರೂಪಿತವಾಗಿಲ್ಲ. ಒಳ ಮೀಸಲಾತಿ ಜಾರಿಗೆ ತರುವ ಉದ್ದೇಶದಿಂದ ಸತ್ಯ ತಿಳಿಸಲಾಗುತ್ತಿದೆ. ಆದರೆ ಸತ್ಯ ಹೊಸಲು ದಾಟುವ ಮುನ್ನ ಸುಳ್ಳು ಊರನ್ನೆಲ್ಲ ಸುತ್ತಾಡಿ ಬರುತ್ತದೆ ಎಂಬಂತೆ ಕಾಂಗ್ರೆಸ್ಸಿಗರ ಮನಸ್ಥಿತಿ ಆಗಿದೆ ಎಂದು ಟೀಕಿಸಿದರು.
ಮೋಸಗಾರರು ಗೆದ್ದ್ರು ನಾವು ವನವಾಸ ಅನುಭವಿಸುತ್ತಿದ್ದೇನೆ. ಮುಂದೆ ಕುರುಕ್ಷೇತ್ರದ ಯುದ್ಧ ನಡೆಯಲಿದೆ ಪಾಂಡವರಿಗೆ ವನವಾಸದ ನಂತರ ಗೆಲುವಾಗಲಿದೆ. ಮೋಸ ವಂಚನೆ ಅಳವಡಿಸಿಕೊಂಡವರೇ ಸತ್ಯ ಹರಿಶ್ಚಂದ್ರನ ರೀತಿ ಪೋಸ್ ಕೊಡುತ್ತಿದ್ದಾರೆ. ಸತ್ಯಕ್ಕೆ ಈ ಮಾದಿಗ ಸಮಾವೇಶ ಸಾಕ್ಷಿ ಆಗಲಿದೆ ಎಂದರು. ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ವರ್ಗದ ಬಂಧುಗಳು ಸ್ವಾವಲಂಬಿಯಾಗಿ ಬೆಳೆಯಲು ಅಡ್ಡಲಾಗಿ ಲಂಬಾಣಿ, ಭೋವಿ ಸಮಾಜವನ್ನು ಎತ್ತಿ ಕಟ್ಟಿದರು ಮಾದಿಗ ಸಮುದಾಯದ ನಡುವೆ ಅಪನಂಬಿಕೆ ಸೃಷ್ಟಿ ಮಾಡಿದರು. ಮೋಸಗಾರರ ಮುಖವಾಡ ಕಳಚಬೇಕಾದರೆ ನಾವು ಒಗ್ಗಟ್ಟಾಗಿ ಉತ್ತರ ನೀಡಬೇಕು ಎಂದು ಕರೆ ನೀಡಿದರು.ಮಾದಿಗ ಸಮಾಜದ ಮುಖಂಡ ಶೂದ್ರ ಶ್ರೀನಿವಾಸ್ ಮಾತನಾಡಿ, ರಾಜ್ಯದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಮಾದಿಗ ಸಮಾಜಕ್ಕೆ ಆಗುತ್ತಿರುವ ಅನ್ಯಾಯ ತಿಳಿಸುವ ಮೂಲಕ ನಮಗೆ ಸಿಗಬೇಕಿರುವ ಹಕ್ಕುಗಳಿಗೆ, ಹೋರಾಟಕ್ಕ್ಕಕೈಜೋಡಿಸಬೇಕು ಎಂದರು.
ಸಮಾವೇಶದಲ್ಲಿ ಮುಖಂಡರಾದ ದೀಪಕ್ ದೊಡ್ಡಯ್ಯ, ಜಗದೀಶ್ ಬೆಟ್ಟಹಳ್ಳಿ, ಶಿವಾನಂದ ಟವಳಿ, ಟಿ.ಮಂಜುನಾಥ್ ಆನೇಕಲ್ , ಹಂಸವೇಣಿ, ಶೂದ್ರ ಶ್ರೀನಿವಾಸ್ , ರಾಜಪ್ಪ, ಮಂಜುನಾಥ ಕೊಂಡಪಲ್ಲಿ, ಹುಲ್ಲೇಹಳ್ಳಿ ಲಕ್ಷ್ಮಣ್, ಮಹೇಶ್ ಒಡೆಯರ್, ಮಲ್ಲಿಕಾರ್ಜುನ್ ( ಮಲ್ಲು) ಸಿದ್ದಪ್ಪ ಸೇರಿದಂತೆ ಮತ್ತಿತರರು ಇದ್ದರು.--- ಬಾಕ್ಸ್---ಮುಖ್ಯಮಂತ್ರಿ ಸಿದ್ದರಾಮಯ್ಯ ನಾಟಕ ಮಂಡಳಿಯಿಂದ ಜಾತಿ ಸಮಾವೇಶ ನಡೆಯುತ್ತಿದೆ. ಮುಖ್ಯಮಂತ್ರಿ ಯಾದವರು ಜಾತಿ ಸಮಾವೇಶ ಮಾಡಿಸಬಹುದೇ ಈ ಬಗ್ಗೆ ಚರ್ಚೆ ನಡೆಯಬೇಕು ಇದರಿಂದ ಒಳ ಮೀಸಲಾತಿಗೆ ಅನ್ಯಾಯವಾಗುತ್ತದೆ ಎಂದು ಹೇಳಿದರೂ ಕೂಡ ಸಮಾವೇಶಕ್ಕೆ ನಡೆಸಲು ಮುಂದಾಗಿದ್ದಾರೆ ಎಂದು ದೂರಿದರು.