- ರೈಲು, ಬಸ್ ನಿಲ್ದಾಣ, ಸಾರ್ವಜನಿಕ ಸ್ಥಳದಲ್ಲಿ ಎಎಸ್ಸಿ ತಂಡ, ಶ್ವಾನದಳ ತಪಾಸಣೆ - - -
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಬಲ ಬಾಂಬ್ ಸ್ಫೋಟ ಸಂಭವಿಸಿದ ಬೆನ್ನಲ್ಲೇ ದಾವಣಗೆರೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಹೈಅಲರ್ಟ್ ಆಗಿದ್ದು, ನಗರದ ಜನಸಂದಣಿ ಪ್ರದೇಶ, ರೈಲ್ವೆ, ಬಸ್ ನಿಲ್ದಾಣ, ಇತರೆ ಸ್ಥಳಗಳಲ್ಲಿ ಸಾರ್ವಜನಿಕರ ಭದ್ರತೆ ಹಾಗೂ ಸುರಕ್ಷತೆಗೆ ಎಎಸ್ಸಿ (anti-sabotage check) ತಂಡಗಳು ಹಾಗೂ ಶ್ವಾನದಳ ತಂಡಗಳು ಸೋಮವಾರ ರಾತ್ರಿಯಿಂದಲೇ ಭದ್ರತಾ ತಪಾಸಣೆಗೆ ಇಳಿದಿವೆ.
ಜನದಟ್ಟಣೆಯ ಸರ್ಕಾರಿ, ಖಾಸಗಿ ಬಸ್ಗಳು, ಪ್ರಯಾಣಿಕರ ಬ್ಯಾಗ್, ಸೂಟ್ ಕೇಸ್, ಕಸದ ಬಾಕ್ಸ್, ಶೌಚಾಲಯ, ರಸ್ತೆ ಬದಿ ನಿಲ್ಲಿಸಿದ್ದ ಅನ್ಯ ಜಿಲ್ಲೆ, ರಾಜ್ಯಗಳ ನೋಂದಣಿಯ ವಾಹನಗಳು, ಸ್ಥಳೀಯ ನೋಂದಣಿಯ ನಿರ್ಜನ ಪ್ರದೇಶದಲ್ಲಿದ್ದ ವಾಹನಗಳಲ್ಲಿ ತಪಾಸಣೆ ಕೈಗೊಳ್ಳಲಾಯಿತು.ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಸೂಚನೆಯಂತೆ ಎಎಸ್ಸಿ ತಂಡವು ದಿಢೀರನೇ ತಪಾಸಣೆ ಕಾರ್ಯಕ್ಕೆ ಮುಂದಾಗಿದ್ದು, ಸಹಜವಾಗಿಯೇ ಜನರೂ ಒಂದುಕ್ಷಣ ಆತಂಕಕ್ಕೊಳಗಾಗಿದ್ದರು. ಆದರೆ, ದೆಹಲಿಯ ಕೆಂಪು ಕೋಟೆ ಬಳಿ ಕಾರು ಸ್ಫೋಟದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪರಿಶೀಲನಾ ಕಾರ್ಯವನ್ನು ಜಿಲ್ಲಾ ಪೊಲೀಸ್ ಇಲಾಖೆ ಕೈಗೊಂಡಿದೆಯೆಂಬ ವಿಷಯ ತಿಳಿದ ನಂತರವಷ್ಟೇ ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರುಬಿಟ್ಟರು.
- - -
-10ಕೆಡಿವಿಜಿ7, 8, 9, 10:ದೆಹಲಿ ಸ್ಪೋಟದ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ದಾವಣಗೆರೆ ರೈಲ್ವೆ ನಿಲ್ದಾಣ, ಬಸ್ಸು ನಿಲ್ದಾಣ, ಸಾರ್ವಜನಿಕ ಸ್ಥಳಗಳಲ್ಲಿ ಎಎಸ್ಸಿ ತಂಡ, ಶ್ವಾನದಳ ತಪಾಸಣೆ ಕೈಗೊಳ್ಳಲಾಯಿತು.