ಕುಷ್ಟಗಿಯ ಹೈಟೆಕ್‌ ಬಸ್‌ ನಿಲ್ದಾಣದಲ್ಲಿ ಸೌಲಭ್ಯ ಮರೀಚಿಕೆ

KannadaprabhaNewsNetwork | Published : May 28, 2025 12:01 AM
ಪ್ರಯಾಣಿಕರಿಗೆ ಅಗತ್ಯವಿರುವಷ್ಟು ಆಸನಗಳ ವ್ಯವಸ್ಥೆಯಲ್ಲಿ ನಿಲ್ದಾಣದಲ್ಲಿ ಮಾಡಿಲ್ಲ. ಕೇವಲ ಸಿಮೆಂಟ್‌ ಬೆಂಚ್‌ ಹಾಕಲಾಗಿದೆ. ಇದರಿಂದ ಗರ್ಭಿಣಿಯರು, ಅಂಗವಿಕಲರು ಕುಳಿಕುಕೊಳ್ಳಲು ತೀವ್ರ ಸಮಸ್ಯೆಯಾಗಿದೆ.

ಪರಶಿವಮೂರ್ತಿ ದೋಟಿಹಾಳ

ಕುಷ್ಟಗಿ:

ಕೋಟ್ಯಂತರ ರುಪಾಯಿ ವ್ಯಯಿಸಿ ನಿರ್ಮಿಸಿರುವ ಪಟ್ಟಣದ ಹೈಟೆಕ್ ಬಸ್ ನಿಲ್ದಾಣವೂ ಸ್ವಚ್ಛತೆ, ಕುಳಿತುಕೊಳ್ಳಲು ಆಸನ ಸೇರಿದಂತೆ ಅನೇಕ ಸೌಕರ್ಯಗಳಿಂದ ವಂಚಿತವಾಗಿದೆ.

ತಾಲೂಕು ಕೇಂದ್ರಸ್ಥಾನದಲ್ಲಿರುವ ಇಲ್ಲಿನ ಬಸ್ ನಿಲ್ದಾಣದಿಂದ ನೂರಾರು ಬಸ್‌ಗಳು ನಿತ್ಯ ಕಾರ್ಯಾಚರಣೆ ನಡೆಸುತ್ತವೆ. ಸಾವಿರಾರು ಪ್ರಯಾಣಿಕರು ತಮ್ಮ ಗಮ್ಯ ಸ್ಥಳಗಳಿಗೆ ಪ್ರಯಾಣಿಸುತ್ತಾರೆ. ಆದರೆ, ಅವರಿಗೆ ಬೇಕಾದ ಅಗತ್ಯ ಮೂಲಭೂತ ಸೌಲಭ್ಯಗಳು ಇಲ್ಲದೆ ಸಂಕಷ್ಟ ಅನುಭವಿಸುವಂತೆ ಆಗಿದೆ.

₹ 4 ಕೋಟಿ ವೆಚ್ಚ:

ಕಳೆದ ಎರಡು ವರ್ಷಗಳ ಹಿಂದಷ್ಟೆ ಅಂದಾಜು ₹ 4 ಕೋಟಿ ವೆಚ್ಚದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಿದ್ದು ಇಲ್ಲಿ ಗಾಳಿ, ಬೆಳಕಿಗೆ ಕೊರತೆಯಿಲ್ಲ. ಆದರೆ, ಸರಿಯಾಗಿ ಮೇಲ್ಚಾವಣಿ ಇರದ ಹಿನ್ನೆಲೆ ಮಳೆ, ಬಿಸಿಲಿನಲ್ಲಿ ಪ್ರಯಾಣಿಕರು ನಿಂತುಕೊಳ್ಳಬೇಕಾದ ದುಸ್ಥಿತಿ ಇದೆ. ಇದೀಗ ಮಳೆ ಶುರುವಾಗಿದ್ದ ಮಳೆಯಿಂದ ತಪ್ಪಿಸಿಕೊಳ್ಳಲು ಪ್ರಯಾಣಿಕರು ಸುರಕ್ಷಿತ ಸ್ಥಳದತ್ತ ತೆರಳಬೇಕಿದೆ.ನೆಲುವೆ ಆಸನ:

ಪ್ರಯಾಣಿಕರಿಗೆ ಅಗತ್ಯವಿರುವಷ್ಟು ಆಸನಗಳ ವ್ಯವಸ್ಥೆಯಲ್ಲಿ ನಿಲ್ದಾಣದಲ್ಲಿ ಮಾಡಿಲ್ಲ. ಕೇವಲ ಸಿಮೆಂಟ್‌ ಬೆಂಚ್‌ ಹಾಕಲಾಗಿದೆ. ಇದರಿಂದ ಗರ್ಭಿಣಿಯರು, ಅಂಗವಿಕಲರು ಕುಳಿಕುಕೊಳ್ಳಲು ತೀವ್ರ ಸಮಸ್ಯೆಯಾಗಿದೆ. ಹೀಗಾಗಿ ನೆಲದ ಮೇಲೆ ಕುಳಿತುಕೊಳ್ಳಬೇಕಾಗಿದೆ. ಹೊಸ ಶೌಚಾಲಯ ನಿರ್ಮಿಸುವ ಬದಲು ಹಳೆಯ ಶೌಚಾಲಯಗಳನ್ನೆ ದುರಸ್ತಿಗೊಳಿಸಿದ್ದು ನಿರ್ವಹಣೆ ಕೊರತೆಯಿಂದ ನಲುಗಿವೆ. ಜತೆಗೆ ದುರ್ವಾಸನೆ ಬೀರುತ್ತಿದ್ದು ಅತ್ತ ಯಾರೊಬ್ಬರು ಹೋಗುತ್ತಿಲ್ಲ. ಪ್ರಯಾಣಿಕರು ಸೇರಿದಂತೆ ಸಾರಿಗೆ ಸಿಬ್ಬಂದಿ ಸಹ ತಮ್ಮ ದೇಹಬಾಧೆ ತೀರಿಸಿಕೊಳ್ಳಲು ಬಯಲನ್ನೇ ಆಶ್ರಯಿಸಬೇಕಿದೆ.

ಖಾಸಗಿ ವಾಹನಗಳ ದರ್ಬಾರ:

ಸಾರಿಗೆ ಸಂಸ್ಥೆಯ ನಿಲ್ದಾಣದೊಳಗೆ ಖಾಸಗಿ ವಾಹನಗಳಿಗೆ ಪ್ರವೇಶವಿಲ್ಲ. ಪ್ರವೇಶಿಸಿದರೆ ದಂಡ ವಿಧಿಸಲಾಗುವುದು ಎಂದು ಸಿಬ್ಬಂದಿ ಹೇಳುತ್ತಾರೆ. ಆದರೆ, ಸಾರಿಗೆ ಸಂಸ್ಥೆಯ ಬಸ್‌ಗಳಿಂತ ಖಾಸಗಿ ವಾಹನಗಳ ಓಡಾಟವೇ ಹೆಚ್ಚಾಗಿದೆ. ಇವುಗಳಿಗೆ ಬ್ರೇಕ್‌ ಹಾಕಬೇಕಿದ್ದ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಹೀಗಾಗಿ ಪ್ರಯಾಣಿಕರಿಗೆ ಹಲವು ಬಾರಿ ಸಣ್ಣ ಪುಟ್ಟ ಅಪಘಾತವೂ ಆಗಿದೆ.

ಒಟ್ಟಿನಲ್ಲಿ ಹೈಟೆಕ್‌ ಬಸ್‌ ನಿಲ್ದಾಣವೆಂದು ಕರೆಸಿಕೊಳ್ಳುವ ಕುಷ್ಟಗಿ ನಿಲ್ದಾಣದಲ್ಲಿ ಸಮಸ್ಯೆಗಳೇ ಎದ್ದು ಕಾಣುತ್ತಿವೆ. ಇನ್ನಾದರೂ ಅಧಿಕಾರಿಗಳು ಪ್ರಯಾಣಿಕರು ಸೌಲಭ್ಯ ಕಲ್ಪಿಸುವ ಜತೆಗೆ ಖಾಸಗಿ ವಾಹನಗಳ ದರ್ಬಾರಗೆ ಕಡಿವಾಣ ಹಾಕಬೇಕಿದೆ. ಅವೈಜ್ಞಾನಿಕ ಕಾಮಗಾರಿಯಿಂದ ಪ್ರಯಾಣಿಕರು ಬೇಸಿಗೆ ಹಾಗೂ ಮಳೆಯಿಂದ ರಕ್ಷಿಸಿಕೊಳ್ಳಲು ಪರದಾಡುತ್ತಿದ್ದಾರೆ. ಶೌಚಾಲಯ, ಮೂತ್ರಾಲಯ, ಆಸನಗಳಿಲ್ಲದೆ ಮತ್ತು ವಾಹನಗಳ ನಿಲುಗಡೆಗೆ ಸಮರ್ಪಕ ಸ್ಥಳಾವಕಾಶವಿಲ್ಲ. ತಕ್ಷಣ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.

ಬಸವರಾಜ ಗಾಣಿಗೇರ ಸಾಮಾಜಿಕ ಹೋರಾಟಗಾರ ಕುಷ್ಟಗಿಶೌಚಾಲಯಗಳ ಸಂಖ್ಯೆ ಹೆಚ್ಚಿಸಬೇಕು. ಕುಡಿಯುವ ನೀರಿನ ಘಟಕ ದೂರದಲ್ಲಿದ್ದು ಪರ್ಯಾಯ ವ್ಯವಸ್ಥೆ ಮಾಡಬೇಕು. ನಿಲ್ದಾಣದ ಸ್ವಚ್ಛತೆಗೆ ಅಧಿಕಾರಿಗಳು ಆದ್ಯತೆ ನೀಡಬೇಕಿದೆ.

ಅಂಬಿಕಾ ಬೇವೂರು ಪ್ರಯಾಣಿಕ ಮಹಿಳೆಕುಷ್ಟಗಿ ಬಸ್ ನಿಲ್ದಾಣದಲ್ಲಿ ಹೆಚ್ಚಿನ ಆಸನ ಹಾಗೂ ಪ್ಯಾನ್‌ ಅಳವಡಿಸುವ ಕೆಲಸ ಪ್ರಗತಿಯಲ್ಲಿದ್ದು ಒಂದೆರೆಡು ವಾರದಲ್ಲಿ ಮುಗಿಯಲಿದೆ. ನಿಲ್ದಾಣದಲ್ಲಿ ಪ್ರವೇಶಿಸುವ ಖಾಸಗಿ ವಾಹನಗಳ ತಡೆಗೆ ಭದ್ರತಾ ಸಿಬ್ಬಂದಿ ಕೊಡುವುದಾಗಿ ಮೇಲಾಧಿಕಾರಿಗಳು ಭರವಸೆ ನೀಡಿದ್ದಾರೆ. ಶೀಘ್ರವೇ ಪ್ರಯಾಣಿಕರಿಗೆ ಎಲ್ಲ ಸೌಲಭ್ಯ ಕಲ್ಪಿಸಲಾಗುವುದು.

ಸುಂದರಗೌಡ ಪಾಟೀಲ ಡಿಪೋ ಮ್ಯಾನೇಜರ ಕುಷ್ಟಗಿ