ದಾಖಲೆಯ ಮಳೆ, ಬಿತ್ತನೆ ಕಾರ್ಯ ಮಾತ್ರ ಇಲ್ಲ: ಪೂರ್ವ ಮುಂಗಾರು ಬಿತ್ತನೆಗೆ ರೈತರ ಹಿಂದೇಟು

KannadaprabhaNewsNetwork |  
Published : May 28, 2025, 12:01 AM IST
27ಕೆಆರ್ ಎಂಎನ್ 1.ಜೆಪಿಜಿಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕಿ ಅಂಬಿಕಾರವರು ಕೃಷಿ ಚಟುವಟಿಕೆ ಬಗ್ಗೆ ರೈತರೊಂದಿಗೆ ಚರ್ಚೆ ನಡೆಸುತ್ತಿರುವುದು. | Kannada Prabha

ಸಾರಾಂಶ

ಕಳೆದ ವರ್ಷವೂ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ ಜೂನ್ ತಿಂಗಳ ವೇಳೆಗೆ ಶೇಕಡ 82.87ರಷ್ಟು ಬಿತ್ತನೆ ಮಾಡಿದ್ದರು. ಈ ಬಾರಿ ಮೇ ತಿಂಗಳಲ್ಲಿ ಪೂರ್ವ ಮುಂಗಾರು ಪ್ರಾರಂಭವಾಗಿದ್ದರೂ ಈವರೆಗೆ ಶೇಕಡ 33ರಷ್ಟು ಬಿತ್ತನೆ ಕಾರ್ಯ ಮಾತ್ರ ನಡೆದಿದೆ.

ಎಂ.ಅಫ್ರೋಜ್ ಖಾನ್

ಕನ್ನಡಪ್ರಭ ವಾರ್ತೆ ರಾಮನಗರ

ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ದಾಖಲೆಯ ಮಳೆಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಆದರೆ, ರೈತರು ಮಾತ್ರ ಕೃಷಿ ಚಟುವಟಿಕೆ ನಡೆಸಲು ಹಿಂದೇಟು ಹಾಕುತ್ತಿದ್ದಾರೆ.

ಕಳೆದ ವರ್ಷವೂ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ ಜೂನ್ ತಿಂಗಳ ವೇಳೆಗೆ ಶೇಕಡ 82.87ರಷ್ಟು ಬಿತ್ತನೆ ಮಾಡಿದ್ದರು. ಈ ಬಾರಿ ಮೇ ತಿಂಗಳಲ್ಲಿ ಪೂರ್ವ ಮುಂಗಾರು ಪ್ರಾರಂಭವಾಗಿದ್ದರೂ ಈವರೆಗೆ ಶೇಕಡ 33ರಷ್ಟು ಬಿತ್ತನೆ ಕಾರ್ಯ ಮಾತ್ರ ನಡೆದಿದೆ.

ಮಳೆಯಾಶ್ರಿತ ಪ್ರದೇಶವಾಗಿರುವ ಕಾರಣ ರೈತರು ಪೂರ್ವ ಮುಂಗಾರು ಬಿತ್ತನೆ ಕೊಂಚ ತಡ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಏಪ್ರಿಲ್ ತಿಂಗಳಲ್ಲಿಯೇ ಬಿತ್ತನೆ ಪೂರ್ಣಗೊಳ್ಳಬೇಕಾಗಿತ್ತು. ಆದರೆ, ಮೇ ತಿಂಗಳ ಕೊನೆ ವಾರದಲ್ಲಿ ಉತ್ತಮ ಮಳೆಯಾಗಿರುವ ಕಾರಣ ಬೆಳೆ ಹಿಂದೆ ಬೀಳುವ ಸಾಧ್ಯತೆ ಇದೆ. ಈಗ ದ್ವಿದಳ ಧಾನ್ಯಗಳ ಬಿತ್ತನೆ ಮಾಡಿದರೆ ಆಗಸ್ಟ್ ವೇಳೆಗೆ ಬೆಳೆ ಬರುತ್ತದೆ. ಇದರಿಂದ ಮುಂಗಾರು ಬಿತ್ತನೆಗೆ ತೊಂದರೆ ಉಂಟಾಗುತ್ತದೆ ಎಂಬ ಕಾರಣದಿಂದಾಗಿ ಬಹುತೇಕ ರೈತರು ಪೂರ್ವ ಮುಂಗಾರು ಬಿತ್ತನೆಯಿಂದ ದೂರ ಉಳಿದಿದ್ದಾರೆ. ಆದರೂ ಕೆಲವರು ಜೋಳ ಸೇರಿದಂತೆ ಮೇವಿನ ಬೆಳೆಗಳ ಬಿತ್ತನೆ ಮಾಡುತ್ತಿದ್ದಾರೆ. ಈಗಷ್ಟೇ ಬಿತ್ತನೆ ಆರಂಭವಾಗಿದ್ದು, ಒಟ್ಟಾರೆ ಗುರಿಯಲ್ಲಿ ಕಡಿಮೆ ಬಿತ್ತನೆ ಮಾತ್ರ ನಡೆದಿದೆ. 1800 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇಟ್ಟುಕೊಳ್ಳಲಾಗಿದ್ದು, ಇಲ್ಲಿವರೆಗೆ 585 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿ ಶೇ.33ರಷ್ಟು ಗುರಿ ಸಾಧಿಸಲಾಗಿದೆ.

ಜಿಲ್ಲೆಯಲ್ಲಿ 500 ಹೆಕ್ಟೇರ್ ಎಳ್ಳು ಗುರಿ ಹೊಂದಿದ್ದು, 495 ಹೆಕ್ಟೇರ್ ನಲ್ಲಿ ಬಿತ್ತನೆ (ಶೇ. 99) ಮಾಡಲಾಗಿದೆ. 300 ಹೆಕ್ಟೇರ್ ಅಲಸಂಧೆ ಗುರಿ ಇಟ್ಟು ಕೊಳ್ಳಲಾಗಿದ್ದು, 70 ಹೆಕ್ಟೇರ್ ಪ್ರದೇಶದಲ್ಲಿ (ಶೇ.23) ಬಿತ್ತನೆ ನಡೆದಿದೆ. ಇನ್ನು 1000 ಹೆಕ್ಟೇರ್ ಪೈಕಿ ಕೇವಲ 20 ಹೆಕ್ಟೇರ್ ತೊಗರಿ ಬಿತ್ತನೆ (ಶೇ.2) ಮಾಡಲಾಗಿದೆ.

ಶೇ.108ರಷ್ಟು ಹೆಚ್ಚುವರಿ ಮಳೆ:

ಜಿಲ್ಲೆಯಲ್ಲಿ ತಿಂಗಳವಾರು ಮಳೆಯ ಪ್ರಮಾಣವನ್ನು ಗಮನಿಸಿದಾಗ ಫೆಬ್ರವರಿ ಹೊರತುಪಡಿಸಿ ಇನ್ನುಳಿದ ತಿಂಗಳುಗಳಲ್ಲಿ ಸಾಧಾರಣ ಮಳೆಯಾಗಿದೆ. ಜನವರಿ ತಿಂಗಳಲ್ಲಿ ವಾಡಿಕೆ 1.8 ಮಿ.ಮೀ ಇದ್ದು, 2.4 ಮಿ.ಮೀ ಮಳೆಯಾದರೆ, ಫೆಬ್ರವರಿ ತಿಂಗಳಲ್ಲಿ ವರುಣ ಕೃಪೆಯನ್ನೇ ತೋರಿಲ್ಲ. ಇನ್ನು ಮಾರ್ಚ್ ತಿಂಗಳಲ್ಲಿ 14.2 ಮಿ.ಮೀ ಪೈಕಿ 42.1 ಮಿ.ಮೀ ಮಳೆಯಾಗಿದ್ದು, ಶೇ. 196ರಷ್ಟು ಹೆಚ್ಚುವರಿ ಮಳೆ ಸುರಿದಿದೆ. ಏಪ್ರಿಲ್ ನಲ್ಲಿ 47.3 ಮಿ.ಮೀ ಪೈಕಿ 73.7 ಮಿ.ಮೀ ಮಳೆಯಾಗಿ (ಶೇ.56) ಹಾಗೂ ಮೇ ತಿಂಗಳ 27ರವರೆಗೆ 91.5 .ಮೀ ಪೈಕಿ 214.3 ಮಿ.ಮೀ (ಶೇ.134) ಹೆಚ್ಚುವರಿ ಮಳೆಯಾಗಿದೆ.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಪೂರ್ವ ಮುಂಗಾರಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಬೆಳೆ ರೈತರ ಕೈ ಹಿಡಿಯುವ ಭರವಸೆ ಮೂಡಿದೆ.

ಜನವರಿ 1 ರಿಂದ ಮೇ 27ರವರೆಗಿನ ಮಳೆ ವಿವರ (ಮಿ.ಮೀ)

ತಾಲೂಕು, ವಾಡಿಕೆ ಮಳೆ, ಆಗಿರುವ ಮಳೆ, ಶೇಕಡವಾರು

ಚನ್ನಪಟ್ಟಣ, 167.9, 301.6, 80

ಕನಕಪುರ, 172.5, 328.9, 91

ಮಾಗಡಿ, 181.6, 337.3, 86

ರಾಮನಗರ, 164.0, 345.9, 111

ಹಾರೋಹಳ್ಳಿ, 155.6, 348.3, 124

-----------------------------------

ಒಟ್ಟು 160.1 332.5 108

ಪೂರ್ವ ಮುಂಗಾರು ಬಿತ್ತನೆ ವಿವರ (ಹೆಕ್ಟೇರ್ ಗಳಲ್ಲಿ)

ಬೆಳೆಗಳು, ರಾಮನಗರ, ಚನ್ನಪಟ್ಟಣ, ಕನಕಪುರ, ಹಾರೋಹಳ್ಳಿ, ಮಾಗಡಿ, ಒಟ್ಟು

ಎಳ್ಳು, 00, 00, 480, 15, 00, 495

ಅಲಸಂಧೆ, 50, 05, 05, 00, 10, 70

ತೊಗರಿ 10, 05, 05, 00, 00, 20

--------------------------------------

ಒಟ್ಟು 60, 10, 490, 15, 10, 585

‘ಕಳೆದ 2 ವಾರದಿಂದ ಸತತವಾಗಿ ಮಳೆಯಾಗುತ್ತಿದ್ದು, ಬಿತ್ತನೆ ಕಾರ್ಯ ಅಲ್ಪ ಪ್ರಮಾಣದಲ್ಲಿ ಕುಂಠಿತಗೊಂಡಿದೆ. ರೈತರು ಎಳ್ಳು, ಅಲಸಂಧೆ ಹಾಗೂ ತೊಗರಿ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. 2024- 25ರ ಮೇ27ಕ್ಕೆ ಬಿತ್ತನೆ ಕಾರ್ಯ ಶೇಕಡಾ 37ರಷ್ಟು ನಡೆದಿತ್ತು. ಈ ವರ್ಷ ಶೇಕಡ 33ರಷ್ಟು ಆಗಿದೆ.’

- ಅಂಬಿಕಾ, ಜಂಟಿ ಕೃಷಿ ನಿರ್ದೇಶಕರು, ಕೃಷಿ ಇಲಾಖೆ , ರಾಮನಗರ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆ.ಎಸ್.ಪುಟ್ಟಣ್ಣಯ್ಯ ಆದರ್ಶ ಎಲ್ಲಾ ಕಾಲಕ್ಕೂ ಮಾದರಿ, ಅನುಸರಣೀಯ: ನಾಗತಿಹಳ್ಳಿ ಚಂದ್ರಶೇಖರ್
ಮೇಲುಕೋಟೆ: ಶ್ರೀದೇವಿ ಭೂದೇವಿಯರಿಗೆ ನೂರ್ ತಡಾ ಉತ್ಸವ