ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರ ಹೊರ ವಲಯದ ಚೊಕ್ಕಹಳ್ಳಿ ಬಳಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕಂದಾಯ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ “ಕಂದಾಯ ಸೇವೆಗಳ ಸಮರ್ಪಣಾ ಸಮಾವೇಶ ಹಾಗೂ ವಿಶೇಷ ಕಂದಾಯ ಗ್ರಾಮ ಅಭಿಯಾನ 2.O ಕಾರ್ಯಕ್ರಮಕ್ಕೆ ಚಾಲನೆ ನೀಡಿವುದರ ಜೊತೆಗೆ 25 ಸಾವಿರ ಫಲಾನುಭವಿಗಳಿಗೆ ಕಂದಾಯ ಇಲಾಖೆಯ ವಿವಿಧ ಸೌಲಭ್ಯಗಳನ್ನು ವಿತರಿಸಿ ಮಾತನಾಡಿದರು. ಪ್ರಸ್ತುತದ ಸರ್ಕಾರ ಅಧಿಕಾರಕ್ಕೆ ಬಂದ 1,000 ಸಾವಿರ ದಿನಗಳಲ್ಲಿ ಕಂದಾಯ ಇಲಾಖೆಯಲ್ಲಿ ಕೈಗೊಂಡ ಕ್ರಮಗಳ ಫಲವಾಗಿ ಹತ್ತು ಹಲವು ಕ್ರಾಂತಿಕಾರಕ ಸುಧಾರಣೆಗಳಾಗಿದ್ದು, ಅದರ ಪ್ರತಿಫಲವೇ ಇಂದು ರಾಜ್ಯದಲ್ಲಿ ಸಾವಿರಾರು ರೈತರು ದರಕಾಸ್ತು ಪೋಡಿ ವಿಶೇಷ ಅಭಿಯಾನದಡಿ ತಮ್ಮ ಸಾಗುವಳಿ ಜಮೀನಿಗೆ ನೈಜ ವಾರಸುದಾರರಾಗಿ ಅಧಿಕೃತ ಹಕ್ಕು ದಾಖಲೆ ಪತ್ರಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಹಲವು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಕಂದಾಯ ಇಲಾಖೆಯಲ್ಲಿನ ಹತ್ತು ಹಲವು ಸಮಸ್ಯೆಗಳಿಗೆ ಮುಕ್ತಿ ಕಾಣಿಸುವ ಮೂಲಕ ಜನರಿಗೆ ನೆಮ್ಮದಿ ನೀಡಲಾಗುತ್ತಿದೆ ಎಂದರು.
ಸಾಗುವಳಿ ಜಮೀನುಗಳಿಗೆ ನಕಲಿ ಮಾಡಲು ಆಗದೇ ಇರುವ ವ್ಯವಸ್ಥೆಯಡಿ ಶಾಶ್ವತ ಹಕ್ಕು ಪತ್ರ ನೀಡಲಾಗಿದೆ. ಖುದ್ದು ತಹಸೀಲ್ದಾರರೇ ಫಲಾನುಭವಿಗಳನ್ನು ಸಬ್ ರಿಜಿಸ್ಟ್ರಾರ್ ಕಚೇರಿಗೆ ಕರೆದುಕೊಂಡು ಹೋಗಿ ಸರ್ಕಾರಿ ಜಮೀನಿನ ಕ್ರಯಪತ್ರ ಮಾಡಿಕೊಟ್ಟು ಬಡ ಸಾಗುವಳಿದಾರರನ್ನು ಜಮೀನಿನ ಮಾಲೀಕರನ್ನಾಗಿ ಮಾಡುವ ಪಾರದರ್ಶಕ ವ್ಯವಸ್ಥೆ ಮಾಡಲಾಗಿದೆ. ತಮ್ಮ ಜಮೀನಿನ ಹಕ್ಕು ದಾಖಲೆಗಾಗಿ ಪದೇ ಪದೇ ತಾಲ್ಲೂಕು ಕಚೇರಿಗೆ ಅಲೆದು ಸೊರಗಿ ಸುಸ್ತಾಗಿದ್ದ ರೈತರ ಸಮಸ್ಯೆಗೆ ಅದೇ ತಾಲೂಕು ಕಚೇರಿಯ ಮೂಲಕವೇ ಮುಕ್ತಿ ಕಾಣಿಸಿ ಅವರ ಮುಖದಲ್ಲಿ ಭೂ ಮಾಲೀಕತ್ವದ ಸಂತಸದ ಮಂದಹಾಸ ಮೂಡಿಸುವ ಕೆಲಸವನ್ನು ಕಂದಾಯ ಇಲಾಖೆ ಇಂದು ಮಾಡುತ್ತಿದೆ ಎಂದರು.ಕಂದಾಯ ಗ್ರಾಮಗಳ ಮೂಲಕ ಹಕ್ಕು ಪತ್ರ ಪಡೆದುಕೊಂಡವರು ಎಂದಿಗೂ ಯಾವ ಕಚೇರಿಗೂ ಮತ್ತೆ ಅಲೆಯಬಾರದು ಎಂಬ ದೃಷ್ಟಿಯಿಂದ ಅವರಿಗೆ ಸರ್ಕಾರವೇ ಮನೆಯ ಇ ಸ್ವತ್ತು ನೀಡಲಿದ್ದು, ಅವರೆಂದೂ ತಮ್ಮ ಮಾಲೀಕತ್ವದ ವಿಚಾರದಲ್ಲಿ ಯಾವ ಇಲಾಖೆಯ ಕಡೆಗೂ ತಿರುಗಿ ನೋಡದೆ ನೆಮ್ಮದಿ ಕಾಣುವಂತ ಭೂ ಗ್ಯಾರಂಟಿ ಯೋಜನೆಯನ್ನು ನೀಡಲಾಗುತ್ತಿದೆ. ಸರ್ಕಾರ ಕಳೆದ 1000 ದಿನಗಳಲ್ಲಿ 18,50,000 ಪೌತಿ ಖಾತೆಗಳನ್ನು ಮಾಡಿ ರೈತರ ಮನೆ ಬಾಗಿಲಿಗೆ ತಲುಪಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.