ಕನ್ನಡಪ್ರಭ ವಾರ್ತೆ ಸಕಲೇಶಪುರ
ಕಲ್ಯಾಣಿ: ರಾಕ್ಷಸನ ಸಂಹಾರದ ನಂತರ ದಾಹದಿಂದ ಬಳಲಿದ ದೇವಿ ತನ್ನ ಮೊಣಕೈಯಿಂದ ನೆಲವನ್ನು ಗುದ್ದಿ ಕಲ್ಯಾಣಿ ಸೃಷ್ಟಿಸಿದ್ದು ಇಂದಿಗೂ ತ್ರಿಭುಜಾಕಾರದ ಕಲ್ಯಾಣಿ ಇದೆ. ಕಲ್ಯಾಣಿ ಇರುವ ಪ್ರದೇಶದಲ್ಲಿ ದೇವಿಯ ಪಾದ ಸೇರಿದಂತೆ ಹಲವು ಕುರುಹುಗಳನ್ನು ಕಾಣಬಹುದಾಗಿದೆ. ರಾಕ್ಷಸನ ಸಂಹಾರದ ಪ್ರಾಯಶ್ಚಿತವಾಗಿ ದೇವಿ ಅಗ್ನಿಪ್ರವೇಶ ಮಾಡುತ್ತಾರೆ ಎಂಬ ಪ್ರತೀತಿ ಇದ್ದು ಇದಕ್ಕಾಗಿ ನವಂಬರ್ ತಿಂಗಳಿನಲ್ಲಿ ಕೆಂಡೋತ್ಸವದೊಂದಿಗೆ ಒಂದು ದಿನದ ಜಾತ್ರೆ ನಡೆಯುತ್ತದೆ.
ರಾಕ್ಷಸನ ಸಂಹಾರದ ನಂತರ ಬ್ರಹ್ಮಿಣಿ ದೇವಿ ಕೆಂಚಾಂಬ ದೇವಿಯಾಗಿ ಸುತ್ತಲಿನ ೪೮ ಹಳ್ಳಿಗಳಲ್ಲಿ ಪ್ರಸಿದ್ಧಿ ಪಡೆಯುತ್ತಾರೆ. ಉಳಿದ ಆರು ದೇವಿಯರು ಮುಂದೆ ಪ್ರಯಾಣ ಬೆಳೆಸಿ ಹಾಸನದ ದೇವಿಗೆರೆಯ ಮೂರು ಕೊಳದಲ್ಲಿ ಮೂವರು ಹಾಗೂ ಕೊಳದ ಅನತಿ ದೂರದಲ್ಲಿದ್ದ ಅರಳಿ ಮರದ ಸಮೀಪ ಮೂವರು ನೆಲೆ ನಿಲ್ಲುವ ಮೂಲಕ ಮುಂದೆ ಹಾಸನಾಂಬೆಯಾರಾಗಿ ಜನಪ್ರಿಯಗೊಳ್ಳುತ್ತಾರೆ. ಅಂದಿನಿಂದ ವರ್ಷಕ್ಕೊಮ್ಮೆ ಅಕ್ಕತಂಗಿಯರು ಜಾತ್ರೆ ಸಂದರ್ಭದಲ್ಲಿ ಸಂಧಿಸುತ್ತಾರೆಂಬ ಐತಿಹಾಸಿಕ ಹಿನ್ನೆಲೆಯಿದೆ.ಜಾತ್ರೆ: ಕಾರ್ತಿಕ ಮಾಸದ (ನವಂಬರ್ ತಿಂಗಳ) ಬುಧವಾರದಂದು ಹರಿಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಕೆಂಚಾಂಬ ದೇವಸ್ಥಾನದಲ್ಲಿ ಜಾತ್ರೆ ನಡೆಯುತ್ತಿದ್ದರೆ ಮಂಗಳವಾರ ಮೂಲ ಸನ್ನಿಧಾನದಲ್ಲಿ ಸಪ್ತಮಾತೃಕೆಯರಿಗೆ ಆಲಂಕಾರ ಮಾಡಲಾಗುತ್ತದೆ. ವೈಶಾಖ ಮಾಸದ (ಮೇ ತಿಂಗಳು) ಮೊದಲ ಭಾನುವಾರ ೪೮ ಗ್ರಾಮಗಳಲ್ಲಿ ಸಾರು(ಕೂಗು) ಹಾಕುವ ಮೂಲಕ ಜಾತ್ರೆಗೆ ಚಾಲನೆ ನೀಡಲಾಗುತ್ತಿದ್ದು, ೪೮ ಗ್ರಾಮಗಳಲ್ಲೂ ದೇವಿಯ ಮುಖವಾಡದೊಂದಿಗೆ ಸುಗ್ಗಿ ನಡೆಯುತ್ತದೆ. ಅಂದು ಹರಿಹಳ್ಳಿ ಗ್ರಾಮದ ಮೂಲ ಸನ್ನಿಧಾನದಲ್ಲಿ ಸಪ್ತಮಾತೃಕೆಯರು ಯುದ್ಧಕ್ಕೆ ಸಿದ್ಧರಾಗಿರುವಂತೆ ಅಲಂಕಾರ ಮಾಡಲಾದರೆ, ಕೆಂಚಾಂಬ ದೇವಿಯ ದೇವಸ್ಥಾನದಲ್ಲಿ ಯುದ್ಧ ಮುಗಿದ ನಂತರ ಶಾಂತಿಯ ಭಂಗಿಯಲ್ಲಿರುವ ಅಲಂಕಾರ ಮಾಡಲಾಗುತ್ತಿದೆ. ಒಟ್ಟಾರೆ ವರ್ಷಕ್ಕೆ ಎರಡು ಬಾರಿ ನಡೆಯುವ ದೇವಿಯ ಜಾತ್ರೆ ಹಲವು ವಿಶೇಷಗಳಿಂದ ಕೂಡಿದ್ದು ಹಾಸನಾಂಬೆಯಷ್ಟೆ ಐತಿಹಾಸಿಕ ಹಿನ್ನೆಲೆ ಹೊಂದಿದೆ.
ಶ್ರೇಷ್ಠ: ದೇವಿ ರಾಕ್ಷಸನ ವಧೆಮಾಡಿದ ಪ್ರದೇಶದ ಮಣ್ಣು ಹಾಗೂ ವಧೆ ನಂತರ ದೇವಿ ಸೃಷ್ಟಿಸಿದ ಕಲ್ಯಾಣಿಯ ನೀರು ಅತ್ಯಂತ ಶ್ರೇಷ್ಟ ಎಂಬ ನಂಬಿಕೆ ಇದೆ.ದೇವಿಯ ಬಗ್ಗೆ ಹಲವು ಕಥೆ: ಹಾಸನಾಂಬ ದೇವಿ ಉತ್ಸವದ ನಂತರ ಆರಂಭವಾಗುವ ಕೆಂಚಾಂಬ ದೇವಿಯ ಜಾತ್ರೆಯ ವೇಳೆಗೆ ಆರು ಸಹೋದರಿಯರು ಕೆಂಚಾಂಬ ದೇವಿಯ ಸನ್ನಿಧಾನಕ್ಕೆ ಬಂದು ರಾತ್ರಿವೇಳೆ ವಿಹಾರ ನಡೆಸುತ್ತಾರೆಂಬ ಪ್ರತೀತಿ ಇದ್ದು, ಜಾತ್ರೆ ನಂತರದ ದಿನಗಳಲ್ಲಿ ರಾತ್ರಿ ವೇಳೆ ದೇವಸ್ಥಾನದ ಸಮೀಪ ಯಾರು ಸಂಚರಿಸುವುದಿಲ್ಲ. ಆದರೆ, ಇದರ ಬಗ್ಗೆ ಅರಿವಿಲ್ಲದ ಜಾತ್ರೆಗೆ ಬಂದಿದ್ದ ಬಳೆಗಾರ ವ್ಯಾಪಾರಮಾಡಿದ ಸಂತಸದಲ್ಲಿ ದೇವಸ್ಥಾನದಲ್ಲೆ ನಿದ್ರೆಗೆ ಜಾರಿರುತ್ತಾನೆ. ಆದರೆ, ಮಧ್ಯರಾತ್ರಿ ವಿಹಾರಕ್ಕೆ ಬಂದ ಕೆಂಚಾಂಬ ದೇವಿ ಬಳೆಗಾರನನ್ನು ನಿದ್ರೆಯಿಂದ ಎಚ್ಚರಿಸಿ ಇಲ್ಲಿ ಮಲಗದಂತೆ ತಿಳಿಸಿ ಇಲ್ಲಿಂದ ಹೋಗುವಂತೆ ನಿರ್ದೇಶಿಸುತ್ತಾಳೆ. ಆದರೆ ಕೆಲವು ದೂರ ತೆರಳಿದ ಬಳೆಗಾರನನ್ನು ವಾಪಸ್ ಕರೆದು ತನ್ನ ಎರಡು ಕೈಗಳಿಗೆ ಬಳೆ ತೊಡಿಸಿಕೊಂಡು ತನ್ನ ನಿಜ ದರ್ಶನ ನೀಡಿ ಹಿಂದಿರುಗಿ ನೋಡದೆ ತನ್ನ ಊರಿಗೆ ತೆರಳುವಂತೆ ಹೇಳುತ್ತಾರೆ. ಆದರೆ, ಸಾಕಷ್ಟು ದೂರ ತೆರಳಿದ ಬಳೆಗಾರ ಹಿಂಬಂದಿಯಿಂದ ಬರುತ್ತಿದ್ದ ಗೆಜ್ಜೆಸದ್ದಿನಿಂದ ಬೆದರಿ ಹಿಂದುರುಗಿ ನೋಡುತ್ತಾನೆ. ಹೀಗೆ ಹಿಂದುರುಗಿ ನೋಡಿದ ಪ್ರದೇಶದಲ್ಲೆ ಬಳೆಗಾರ ಕಲ್ಲಾಗುತ್ತಾನೆ ಎಂಬ ಐತಿಹಾಸಿಕ ಪ್ರತೀತಿ ಇದ್ದು, ಹರಿಹಳ್ಳಿ ಗ್ರಾಮದಲ್ಲಿರುವ ಈ ಕಲ್ಲನ್ನು ಗ್ರಾಮಸ್ಥರು ಬಳೆಗಾರನ ಕಲ್ಲು ಎಂದು ಕರೆಯುತ್ತಾರೆ.
ಸಂಹಾರದ ವೇಳೆ ಕಾವಲು: ಮಾಯಾವಿಯಾದ ರಕ್ತಬೀಜಾಸುರನ ಕಾಟ ಅತಿಯಾದ್ದರಿಂದ ಬೇಸತ್ತ ದೇವಾನುದೇವತೆಗಳು ರಾಕ್ಷಸನ ವಧೆಗೆ ತೀರ್ಮಾನಿಸಿ ಬ್ರಹ್ಮಿಣಿದೇವಿಗೆ ತಮ್ಮ ಶಕ್ತಿತುಂಬಿ ಮಾಯಾವಿ ರಾಕ್ಷಸ ಬೇರೆಡೆ ತೆರಳದಂತೆ ನಾಲ್ಕು ದಿಕ್ಕಿನಲ್ಲೂ ಕಾವಲಿಗೆ ನಿಲ್ಲುತ್ತಾರೆ ಎಂಬ ಪುರಾಣವಿದೆ. ಈ ದೇವಾನುದೇವತೆ ಕಾವಲು ನಿಂತ ಸ್ಥಳಗಳಾದ ಕೂಡಗಿನ ಗಡಿಯಲ್ಲಿರುವ ಗೋಪಾಲಪುರದಲ್ಲಿ ಗೋಪಾಲಸ್ವಾಮಿ ದೇವಸ್ಥಾನ, ಸಕಲೇಶಪುರ ತಾಲೂಕಿನ ಶುಕ್ರವಾರಸಂತೆ ಗ್ರಾಮ ಸನಿಹದ ಶಟ್ಟಿಹಳ್ಳಿ ಗ್ರಾಮದಲ್ಲಿ ತೀರ ಅಪರೂಪದ ಬ್ರಹ್ಮ ದೇವಸ್ಥಾನ ಆಲೂರು ತಾಲೂಕಿನ ಪಾರ್ವತಮ್ಮನ ಬೆಟ್ಟದಲ್ಲಿ ಪಾರ್ವತಮ್ಮ ದೇವಿಯರ ದೇವಸ್ಥಾನವಿದ್ದರೆ ಆಲೂರು ತಾಲೂಕು ಗಂಜಿಗೆರೆ ಗ್ರಾಮದಲ್ಲಿ ವೆಂಕಟರಮಣ ದೇವಸ್ಥಾನವಿದ್ದು, ಈ ನಾಲ್ಕು ದೇವಸ್ಥಾನದಲ್ಲಿ ಜಾತ್ರೆವೇಳೆ ವಿವಿಧ ಪೂಜೆಗಳು ನಡೆಯುವುದು ವಿಶೇಷವಾಗಿದೆ. ಹರಿಹಳ್ಳಿ ಗ್ರಾಮಕ್ಕೆ ಸುಮಾರು ೧೪ ಕಿ.ಮೀ. ದೂರದಲ್ಲಿರುವ ಗಂಜಿಗೆರೆ ಗ್ರಾಮದ ವೆಂಕಟರಮಣ ದೇವಸ್ಥಾನದಿಂದ ಮೂರು ವರ್ಷಕ್ಕೂಮ್ಮೆ ಕಳಸ ಹೊತ್ತು ಕೆಂಚಾಂಬ ದೇವಿಯ ದರ್ಶನಕ್ಕೆ ಓಡಿ ಬರುವುದು ಇಂದಿಗೂ ನಡೆಯುತ್ತಿದ್ದು ಪವಾಡದಂತಿದೆ. ಇದಕ್ಕೆ ಹೊರ ಊರ ಒಕ್ಕೂಟ ಸೇವೆ ಎಂದೆ ಕರೆಸಿಕೊಳ್ಳುತ್ತಿದೆ.ಸುಗ್ಗಿ ಜಾತ್ರೆ ಆರಂಭ ಅಂತ್ಯ: ಕೆಂಚಾಂಬ ದೇವಿಗೆ ನಂವಂಬರ್ ತಿಂಗಳಿನಲ್ಲಿ ನಡೆಯುವ ಜಾತ್ರೆ ಸಕಲೇಶಪುರ ಹಾಗೂ ಆಲೂರು ತಾಲೂಕಿನಲ್ಲಿ ನಡೆಯುವ ಸುಗ್ಗಿ ಜಾತ್ರೆಗಳ ಆರಂಭಕ್ಕೆ ಬುನಾದಿಯಾದರೆ ಮೇ ತಿಂಗಳಿನಲ್ಲಿ ನಡೆಯುವ ಜಾತ್ರೆ ಸುಗ್ಗಿ ಜಾತ್ರೆಗಳ ಅಂತಿಮವಾಗಿದ್ದು ತದನಂತರ ಯಾವುದೆ ಜಾತ್ರೆಗಳು ಜರುಗದಿರುವುದು ವಿಶೇಷವಾಗಿದೆ. *ಹೇಳಿಕೆ1
ಹಾಸನಾಂಬೆಯಷ್ಟೆ ಕೆಂಚಾಂಬ ದೇವಿಗೂ ಐತಿಹಾಸಿಕ ಹಿನ್ನೆಲೆಯಿದ್ದು, ಎರಡೂ ಧಾರ್ಮಿಕ ಸ್ಥಳಗಳಿಗೂ ನಂಟಿದೆ. ಅಪಾರ ಶಕ್ತಿಹೊಂದಿರುವ ದೇವಿಯ ದರ್ಶನ ಪಡೆಯುವುದು ಒಂದು ಪುಣ್ಯದ ಕೆಲಸ.ರವಿ ಜೋಯಿಷ್. *ಹೇಳಿಕೆ 2
- ಕೆಂಚಾಂಬ ದೇವಿಯ ಉತ್ಸವ ಮೇ ತಿಂಗಳಿನಲ್ಲಿ ೪೮ ಗ್ರಾಮಗಳಲ್ಲಿ ನಡೆಯಲಿದೆ. ನವಂಬರ್ ತಿಂಗಳಿನಲ್ಲಿ ನಡೆಯುವ ಉತ್ಸವ ಹಾಸನಾಂಬೆಯರು ಹಿರಿಯಕ್ಕನ ದರ್ಶನಕ್ಕೆ ಬರುತ್ತಾರೆಂಬ ಪ್ರತೀತಿಯಲ್ಲಿ ನಡೆಸಲಾಗುತ್ತಿದೆ.ಶಾಂತಮಲ್ಲಪ್ಪ,ನಿವೃತ್ತ ಶಿಕ್ಷಕ ಕಾಡ್ಲೂರು ಕೊಪ್ಪಲು ------------------------------------------------------------