ಬಳ್ಳಾರಿ: ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಹೊರಗುತ್ತಿಗೆ ಸಿಬ್ಬಂದಿಯಿಬ್ಬರು ವಿದ್ಯಾರ್ಥಿಗಳಿಗೆ ನೀಡಿದ್ದಾರೆ ಎನ್ನಲಾದ ಘಟಿಕೋತ್ಸವ ನಕಲಿ ಪ್ರಮಾಣಪತ್ರ ಪ್ರಕರಣದ ತನಿಖೆ ಚುರುಕುಗೊಂಡಿದ್ದು 15 ಸಾವಿರಕ್ಕೂ ಹೆಚ್ಚು ಪ್ರಮಾಣಪತ್ರಗಳ ಪರಿಶೀಲನೆ ಕಾರ್ಯ ನಡೆದಿದೆ.
ತನಿಖೆ ವೇಳೆ ಸಿಬ್ಬಂದಿಯೊಬ್ಬ ತನ್ನ ಖಾತೆಗೆ ₹20 ಲಕ್ಷಕ್ಕೂ ಹೆಚ್ಚು ಹಣ ವರ್ಗಾವಣೆ ಮಾಡಿಕೊಂಡಿರುವ ವಿಷಯ ದೃಢಪಟ್ಟಿದೆಯಲ್ಲದೆ, 1 ಸಾವಿರಕ್ಕೂ ಹೆಚ್ಚು ಪ್ರಮಾಣಪತ್ರಗಳು ನಕಲಿ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇಡೀ ಪ್ರಕರಣದಲ್ಲಿ ₹1 ಕೋಟಿಗಳಷ್ಟು ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದೆ.ಘಟನೆ ವಿವರ: 13 ದಿನಗಳ ಹಿಂದೆ ಬಳ್ಳಾರಿ ವಿವಿಯ ಕುಲಪತಿ ಸೇರಿದಂತೆ ಇತರರ ಸಹಿ ನಕಲು ಮಾಡಿ ಸಿಬ್ಬಂದಿಯೊಬ್ಬ ವಿದ್ಯಾರ್ಥಿಗಳಿಗೆ ಘಟಿಕೋತ್ಸವ ಪ್ರಮಾಣಪತ್ರ ನೀಡಿದ್ದಾರೆ ಎಂಬುದು ಗೊತ್ತಾಗುತ್ತಿದ್ದಂತೆಯೇ ಫೆ. 22ರಂದು ಹಣಕಾಸು ಅಧಿಕಾರಿ, ಆಡಳಿತ ಕುಲಸಚಿವರು ಸೇರಿದಂತೆ 9 ಜನರ ತನಿಖಾ ತಂಡ ರಚಿಸಲಾಗಿತ್ತು. ತನಿಖಾ ತಂಡವು ವಿವಿಯಿಂದ 2021-22ರಿಂದ ವಿತರಣೆ ಮಾಡಿರುವ ಘಟಿಕೋತ್ಸವ ಪ್ರಮಾಣಪತ್ರಗಳ ಪರಿಶೀಲನೆ ಕಾರ್ಯ ನಡೆಸಿದೆಯಲ್ಲದೆ, ಆರೋಪಿಯ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದೆ. ಇದೇ ವೇಳೆ ಸಿಬ್ಬಂದಿಯ ಬ್ಯಾಂಕ್ ಖಾತೆಯಲ್ಲಿ ₹20 ಲಕ್ಷ ಹಾಗೂ ಕುಟುಂಬ ಸದಸ್ಯರ ಹೆಸರಿನಲ್ಲಿ ₹10ರಿಂದ ₹12 ಲಕ್ಷ ವ್ಯವಹಾರ ಮಾಡಿರುವುದು ಬೆಳಕಿಗೆ ಬಂದಿದೆ. ಅದರ ಪರಿಶೀಲನೆ ಕಾರ್ಯ ಮುಂದುವರಿದಿದೆ. ಪ್ರಕರಣ ಕುರಿತು ಸಿಎಂ ಕಚೇರಿ, ಉನ್ನತ ಶಿಕ್ಷಣ ಸಚಿವರಿಗೆ ವರದಿ ಸಲ್ಲಿಸಲಾಗಿದೆ.
ವಿವಿಯ ಗುತ್ತಿಗೆ ನೌಕರನೊಬ್ಬ ವಿದ್ಯಾರ್ಥಿನಿಯೊಬ್ಬರಿಂದ ಹಣ ಪಡೆದು ನಕಲಿ ಸಹಿ ಬಳಸಿ ಘಟಿಕೋತ್ಸವ ಪ್ರಮಾಣಪತ್ರ ವಿತರಣೆ ಮಾಡಿದ್ದ. ಘಟಿಕೋತ್ಸವ ಪ್ರಮಾಣಪತ್ರ ಪಡೆದ ಬಳಿಕ ಶುಲ್ಕ ಪಾವತಿಯ ರಶೀದಿ ನೀಡಿರಲಿಲ್ಲ. ಇದರಿಂದ ಅನುಮಾನಗೊಂಡ ವಿದ್ಯಾರ್ಥಿನಿ ವಿಶ್ವವಿದ್ಯಾಲಯಕ್ಕೆ ಆಗಮಿಸಿ ವಿಚಾರಿಸಿದಾಗ ಪ್ರಕರಣ ಹೊರಬಿದ್ದಿತ್ತು. ಕೂಡಲೇ ಎಚ್ಚೆತ್ತ ಕುಲಪತಿಗಳು 9 ಜನರ ತನಿಖಾ ತಂಡವನ್ನು ರಚಿಸಿ, ವರದಿ ನೀಡುವಂತೆ ಸೂಚಿಸಿದ್ದರು.2022ರಿಂದ ಈ ವರೆಗೆ 24 ಸಾವಿರಕ್ಕೂ ಹೆಚ್ಚು ಘಟಿಕೋತ್ಸವ ಪ್ರಮಾಣಪತ್ರಗಳನ್ನು ವಿತರಿಸಲಾಗಿದ್ದು, ಎಲ್ಲ ಪ್ರಮಾಣಪತ್ರಗಳ ನೈಜತೆ ಪರಿಶೀಲಿಸಲಾಗುತ್ತಿದೆ. ಫೆ. 23ರಂದು ಕನ್ನಡಪ್ರಭ "ಘಟಿಕೋತ್ಸವ ಸರ್ಟಿಫಿಕೆಟೇ ನಕಲಿ " ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.
ಈ ವರೆಗೆ ಘಟಿಕೋತ್ಸವ ಪ್ರಮಾಣಪತ್ರ ಪಡೆದ ವಿದ್ಯಾರ್ಥಿಗಳು ಪರಿಶೀಲನೆ ಮಾಡಿಸಿಕೊಂಡು ಹೋಗುವಂತೆ ನೋಟಿಫಿಕೇಶನ್ ಮಾಡಲಾಗುವುದು. ಎಲ್ಲವೂ ಪರಿಶೀಲನೆಗೆ ಒಳಪಡಿಸಲಾಗುವುದು. ತಪ್ಪಿತಸ್ಥರು ಯಾರೇ ಇರಲಿ; ಕಾನೂನು ಕ್ರಮ ವಹಿಸಲಾಗುವುದು. ಶೀಘ್ರವೇ ಆರೋಪಿ ವಿರುದ್ಧ ಎಫ್ಐಆರ್ ದಾಖಲಾಗಿಸುವುದು ಎಂದು ಬಳ್ಳಾರಿ ವಿಎಸ್ಕೆವಿವಿ ಕುಲಪತಿ ಪ್ರೊ. ಮುನಿರಾಜು ಹೇಳಿದರು.