ಈಗಾಗಲೇ ಮೈಕ್ರೋ ಫೈನಾನ್ಸ್ಗಳ ಹಾವಳಿಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಸಮಯದಲ್ಲಿ ಬ್ಯಾಂಕ್ ಸಿಬ್ಬಂದಿ ರೈತನ ಮೇಲೆ ದೌರ್ಜನ್ಯ ನಡೆಸಿ ಟ್ರ್ಯಾಕ್ಟರನ್ನು ವಶಕ್ಕೆ ಪಡೆದಿರುವುದು ಎಷ್ಟರಮಟ್ಟಿಗೆ ಸರಿ.
ಕನ್ನಡಪ್ರಭ ವಾರ್ತೆ ಮಂಡ್ಯ
ರೈತನಿಲ್ಲದ ಸಮಯದಲ್ಲಿ ಮನೆಗೆ ತೆರಳಿದ ಬ್ಯಾಂಕ್ ಸಿಬ್ಬಂದಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿ, ಟ್ರ್ಯಾಕ್ಟರ್ ವಶಕ್ಕೆ ಪಡೆದಿರುವುದನ್ನು ಖಂಡಿಸಿ ರೈತರು ಕೋಟಕ್ ಮಹೀಂದ್ರಾ ಬ್ಯಾಂಕ್ಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ನಗರದ ಆರ್.ಪಿ.ರಸ್ತೆಯಲ್ಲಿರುವ ಕೋಟಕ್ ಮಹೀಂದ್ರಾ ಬ್ಯಾಂಕ್ ಬಳಿ ಸೇರಿದ ರೈತರು, ಅಧಿಕಾರಿಗಳು ಹಾಗೂ ಮೈಕ್ರೋ ಫೈನಾನ್ಸ್ ಸಿಬ್ಬಂದಿ ವಿರುದ್ಧ ಘೋಷಣೆ ಕೂಗಿದರು.
ರೈತನಿಲ್ಲದ ಸಮಯದಲ್ಲಿ ಆತನ ಮನೆಗೆ ತೆರಳಿದ ಮೈಕ್ರೋ ಫೈನಾನ್ಸ್ ಕಾರ್ಯಕರ್ತರು, ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ್ದೂ ಅಲ್ಲದೇ, ಯಾವುದೇ ನೋಟಿಸ್ ನೀಡದೆ ಟ್ರ್ಯಾಕ್ಟರ್ನ್ನು ವಶಕ್ಕೆ ಪಡೆದು ಕೊಂಡೊಯ್ದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಮೈಕ್ರೋ ಫೈನಾನ್ಸ್ಗಳ ಹಾವಳಿಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಸಮಯದಲ್ಲಿ ಬ್ಯಾಂಕ್ ಸಿಬ್ಬಂದಿ ರೈತನ ಮೇಲೆ ದೌರ್ಜನ್ಯ ನಡೆಸಿ ಟ್ರ್ಯಾಕ್ಟರನ್ನು ವಶಕ್ಕೆ ಪಡೆದಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ನಿಯಮಾನುಸಾರ ರೈತನಿಗೆ ನೋಟಿಸ್ ನೀಡಬೇಕು. ನಂತರ ಅದಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಳ್ಳಬೇಕು. ಅದು ಬಿಟ್ಟು ಏಕಾಏಕಿ ದೌರ್ಜನ್ಯ ನಡೆಸಿ ಟ್ರ್ಯಾಕ್ಟರನ್ನು ವಶಪಡಿಸಿಕೊಂಡಿದ್ದಾರೆ ಎಂದು ಕಿಡಿಕಾರಿದರು.
ರೈತರ ಟ್ರ್ಯಾಕ್ಟರ್ ವಶಪಡಿಸಿಕೊಂಡಿದ್ದರೂ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ. ತಕ್ಷಣವೇ ದೌರ್ಜನ್ಯ ನಡೆಸಿರುವ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ರೈತನಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಬ್ಯಾಂಕ್ನ ವ್ಯವಸ್ಥಾಪಕರು ಪ್ರತಿಭಟನಾಕಾರರ ಮನವಿ ಆಲಿಸಿ ಮನವೊಲಿಸಿದ ನಂತರ ರೈತರು ಪ್ರತಿಭಟನೆ ವಾಪಸ್ ಪಡೆದರು. ರೈತ ಸಂಘದ ಹರೀಶ್ ಹಲ್ಲೆಗೆರೆ, ರಾಮಲಿಂಗಣ್ಣ, ಹಂಪಾಪುರ ಮಂಜೇಶ್, ಗಾಣದಾಳು ನಾಗರಾಜು, ಶಿವಳ್ಳಿ ಚಂದ್ರು ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.