ಕನಕಪುರ: ರೈತರಿಗೆ ಮರಣ ಶಾಸನವಾಗಿರುವ ಕೇಂದ್ರ ಸರ್ಕಾರದ ಸ್ಯಾಟಲೈಟ್ ರಿಂಗ್ ರಸ್ತೆ ನಿರ್ಮಾಣ ಯೋಜನೆ ಕೈ ಬಿಡುವರೆಗೂ ಹೋರಾಟ ಮಾಡುವುದಾಗಿ ತೀರ್ಮಾನಿಸಿದ್ದೇವೆ ಎಂದು ರೈತ ಭರತ್ ಗೌಡ ಹೇಳಿದರು. ಸ್ಯಾಟಲೈಟ್ ರಿಂಗ್ ರಸ್ತೆ ಯೋಜನೆಯ ಭೂಸ್ವಾಧೀನ ರೈತರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ 6 ವರ್ಷಗಳ ಹಿಂದೆ ಆರಂಭವಾದ ಈ ರಸ್ತೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಈ ಕಡೆ ಭೂಮಿಯೂ ಇಲ್ಲ, ಆ ಕಡೆ ಪರಿಹಾರ ಹಣವೂ ಇಲ್ಲದೇ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಅಳಲು ತೋಡಿಕೊಂಡರು.
ಯೋಜನೆಯ ಸ್ವರೂಪ:
ಕನಕಪುರ, ರಾಮನಗರ, ಮಾಗಡಿ, ಸೂಲಿಬಲೆ, ದಾಬಸ್ಪೇಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ಆನೇಕಲ್ ಸೇರಿದಂತೆ ತಮಿಳುನಾಡಿನ ಹೊಸೂರು ವ್ಯಾಪ್ತಿಯ ಕೆಲ ಪ್ರದೇಶ ಒಳಗೊಂಡಂತೆ ನೀಲನಕ್ಷೆ ಸಿದ್ದಪಡಿಸಿ, ಕೇಂದ್ರ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು ಸುಮಾರು 370 ಹೆಕ್ಟೇರ್ ಪ್ರದೇಶವನ್ನೂ ಗುರುತಿಸಿ, ರೈತರಿಗೆ ಭೂ ಸ್ವಾಧೀನದ ನೋಟಿಸ್ ನೀಡಿ ರೈತರಿಂದ ಜಮೀನು ವಶಪಡಿಸಿಕೊಂಡಿದ್ದಾರೆ. ಕೋಲಾರ ಜಿಲ್ಲಾ ವ್ಯಾಪ್ತಿಯಿಂದ ದಾಬಸ್ ಪೇಟೆವರಗಿನ ಸುಮಾರು 120 ಕೀ.ಮಿ ಈಗಾಗಲೇ ರಸ್ತೆ ನಿರ್ಮಾಣ ಮಾಡಲಾಗಿದೆ. ಇನ್ನೂ168 ಕಿಲೋ ಮೀಟರ್ ರಸ್ತೆ ಕಾಮಗಾರಿ ಬಾಕಿಯಿದೆ. ಆದರೆ ಭಾರತ ಮಾಲಾದವರು ಯೋಜನೆಯಿಂದ ಹಿಂದೆ ಸರಿದ ಪರಿಣಾಮ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಇದರ ಹೊಣೆ ಹೊರಿಸಿ 4 ವರ್ಷ ಕಳೆದರೂ ಯಾವುದೇ ಪ್ರಗತಿ ಕಾಣದೆ ರೈತರು ಕಂಗಾಲಾಗಿದ್ದಾರೆಂದು ದೂರಿದರು.ಹಣವೂ ಇಲ್ಲ, ಜಮೀನು ಇಲ್ಲ: ಯೋಜನೆ ಅನುಷ್ಠಾನಕ್ಕೆ ತಮ್ಮ ಜೀವನೋಪಾಯವಾಗಿದ್ದ ಜಮೀನುಗಳನ್ನು ಬಿಟ್ಟು ಕೊಟ್ಟ ರೈತರಿಗೆ ಕೇಂದ್ರ ಸರ್ಕಾರ ಪರಿಹಾರದ ಹಣವೂ ನೀಡದೇ ಜಮೀನೂ ವಶಪಡಿಸಿಕೊಂಡಿದ್ದು, ಅದನ್ನು ಮಾರಲಾಗದೆ ಸಮಸ್ಯೆ ಎದುರಿಸುವಂತಾಗಿದೆ. 10 ವರ್ಷಗಳ ಹಿಂದೆ ನಿಗದಿಪಡಿಸಿದ ಹಣವನ್ನು ಜಮೀನು ಹಾಗೂ ಮರಗಳಿಗೆ ನೀಡುತ್ತಿದ್ದು ರೈತರಿಗೆ ನಷ್ಟವಾಗುತ್ತಿದೆ. ಸರ್ಕಾರ ಕೊಡುವ ಹಣದಲ್ಲಿ ಈ ಭಾಗದಲ್ಲಿ ಒಂದು ಕುಂಟೆ ಭೂಮಿ ತೆಗೆದುಕೊಳ್ಳಲು ಆಗುವುದಿಲ್ಲ. ಯೋಜನೆಯ ಶೇಕಡ 16ರಷ್ಟು ಹಣ ಮಾತ್ರ ರೈತರಿಗೆ ಬಂದಿದ್ದು ಉಳಿದ ಶೇ. 84ರಷ್ಟು ರೈತರಿಗೆ ಇನ್ನೂ ಒಂದೇ ಒಂದು ರೂಪಾಯಿ ಪರಿಹಾರ ಹಣ ಬಂದಿಲ್ಲವೆಂದು ಸಭೆಯಲ್ಲಿದ್ದ ರೈತರು ಅಳಲು ತೋಡಿಕೊಂಡರು.
ಸಭೆಯಲ್ಲಿ ನಾರಾಯಣಗೌಡ, ಪುಟ್ಟಸ್ವಾಮಿ, ಶ್ರೀಧರ್, ಮನ ಮೋಹನ್, ಜಿ.ಎಸ್.ವೆಂಕಟೇಶ್, ಗೋಪಾಲ್ ಗೌಡ, ಶಿವಲಿಂಗಯ್ಯ ಇತರರು ಭಾಗವಹಿಸಿದ್ದರು.
ಕೇಂದ್ರ ಸರ್ಕಾರದ ಸ್ಯಾಟಲೈಟ್ ರಿಂಗ್ ರಸ್ತೆ ನಿರ್ಮಾಣ ವಿರೋಧಿಸಿ ಕನಕಪುರ ಭಾಗದ ರೈತರು ಹೋರಾಟ ರೂಪಿಸಲು ಸಭೆ ನಡೆಸಿದರು.