ಕನ್ನಡಪ್ರಭ ವಾರ್ತೆ ಬೈಲಹೊಂಗಲ ತಾಲೂಕಿನ ದೊಡವಾಡ, ನನಗುಂಡಿಕೊಪ್ಪ, ಗುಡಿಕಟ್ಟಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ನೀರಾವರಿ ಪಂಪಸೆಟ್ಗಳಿಗೆ ಅಸಮರ್ಪಕ ವಿದ್ಯುತ್ ಪೂರೈಕೆ ಖಂಡಿಸಿ, ಮಲ್ಲಮ್ಮನ ಬೆಳವಡಿಯಲ್ಲಿನ ಹೆಸ್ಕಾಂ ಶಾಖಾ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಮಧ್ಯರಾತ್ರಿ ವಿದ್ಯುತ್ ಪೂರೈಸುತ್ತಿದ್ದಾರೆ. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ದಿನಕ್ಕೆ 5 ತಾಸು ತ್ರೀಫೇಸ್ ವಿದ್ಯುತ್ ಪೂರೈಕೆಯ ಸರ್ಕಾರದ ಆದೇಶ ಅಧಿಕಾರಿಗಳು ಪಾಲಿಸುತ್ತಿಲ್ಲ. ಹೆಸ್ಕಾಂ ಬೈಲಹೊಂಗಲ ತಾಲೂಕು ಮತ್ತು ಬೆಳವಡಿ ಶಾಖಾಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಅ.24 ರವರೆಗೆ ಗಡುವು ನೀಡುತ್ತಿದ್ದೇವೆ. ಅಷ್ಟರೊಳಗಾಗಿ ಹಗಲು ವೇಳೆ 5 ಗಂಟೆ ತ್ರೀಫೇಸ್ ವಿದ್ಯುತ್ ಪೂರೈಸದಿದ್ದರೆ, ಸಾವಿರಾರು ರೈತರು ಟ್ರ್ಯಾಕ್ಟರ್ಗಳ ಮೂಲಕ ಮಲ್ಲಮ್ಮನ ಬೆಳವಡಿ ವೃತ್ತದಲ್ಲಿ ರಸ್ತೆ ರೋಖೋ ನಡೆಸುತ್ತೇವೆ ಎಂದು ಎಚ್ಚರಕೆ ನೀಡಿದರು. ಗದಿಗೆಪ್ಪ ಅರಳಿಮರದ, ಅನಿಲ ಬಶೆಟ್ಟಿ, ನಿಂಗಪ್ಪ ಚೌಡಣ್ಣವರ, ಅಡಿವೆಪ್ಪ ಗುಂಡ್ಲೂರ, ಹನಮಂತ ಚಂದರಗಿ, ಸಂಗಪ್ಪ ಮಾಡಲಗಿ, ಕಿಟ್ಟು ಚರಂತಿಮಠ ಹಾಗೂ ದೊಡವಾಡ, ನನಗುಂಡಿಕೊಪ್ಪ, ಗುಡಿಕಟ್ಟಿ ಗ್ರಾಮಗಳ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.