ಕನ್ನಡಪ್ರಭ ವಾರ್ತೆ ತುರುವೇಕೆರೆ
ಇಂದು ಜಿಲ್ಲಾ ಕೃಷಿ ಇಲಾಖಾ ವತಿಯಿಂದ ಆಗಮಿಸಿದ್ದ ಕೃಷಿ ಅಧಿಕಾರಿಗಳು ಪಟ್ಟಣದ ವಿವಿಧ ಗೊಬ್ಬರದ ಅಂಗಡಿಗಳಿಗೆ ಭೇಟಿ ನೀಡಿ ಯೂರಿಯಾ ಗೊಬ್ಬರದ ವಿತರಣೆ ಸಂಬಂಧ ಅಂಗಡಿಯ ಮಾಲೀಕರೊಂದಿಗೆ ಚರ್ಚೆ ನಡೆಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ತಾಲೂಕು ತೆಂಗು ಮತ್ತು ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಎನ್. ಆರ್.ಜಯರಾಮ್, ಕಾರ್ಯದರ್ಶಿ ಲೋಕಮ್ಮನಹಳ್ಳಿ ಕಾಂತರಾಜು, ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷ ಟಿ.ಎನ್.ಶಶಿಶೇಖರ್, ಕನ್ನಡ ರಕ್ಷಾಣಾ ವೇದಿಕೆಯ ಅಧ್ಯಕ್ಷ ಗವಿರಂಗಪ್ಪ ಮತ್ತು ಚೌಡೇನಹಳ್ಳಿಯ ಗಂಗಾಧರ ಸ್ವಾಮಿ ಸೇರಿದಂತೆ ಹಲವರು ಜಿಲ್ಲಾ ಕೃಷಿ ನಿರ್ದೇಶಕರ ಕಛೇರಿಯಿಂದ ಆಗಮಿಸಿದ್ದ ಕೃಷಿ ಅಧಿಕಾರಿ ಅಶ್ವತ್ಧ್ ನಾರಾಯಣ್ ಹಾಗೂ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕಿ ಬಿ. ಪೂಜಾ ರವರನ್ನು ಭೇಟಿ ಮಾಡಿ ತಾಲೂಕಿನಲ್ಲಿ ಯೂರಿಯಾ ಗೊಬ್ಬರದ ಕೊರತೆ ಇದೆ. ಇದರಿಂದಾಗಿ ರೈತಾಪಿಗಳಿಗೆ ತೊಂದರೆಯಾಗುತ್ತಿದೆ. ಕೂಡಲೇ ಯೂರಿಯಾವನ್ನು ತಾಲೂಕಿನ ಎಲ್ಲಾ ಗೊಬ್ಬರದ ಅಂಗಡಿಗಳು ಮತು ಸಹಕಾರ ಸಂಘಗಳಿಗೆ ಸರಬರಾಜು ಮಾಡಿಸುವ ಮೂಲಕ ಸಮಸ್ಯೆಯನ್ನು ಬಗೆಹರಿಸಬೇಕೆಂದು ಆಗ್ರಹಿಸಿದರು. ಕೆಲವು ಗೊಬ್ಬರದ ಅಂಗಡಿಗಳಲ್ಲಿ ಯೂರಿಯಾ ಜೊತೆಗೆ ಲಿಂಕ್ ಎಂದು ವಿವಿಧ ರಾಸಾಯನಿಕ ದ್ರವ್ಯಗಳನ್ನು ನೀಡಲಾಗುತ್ತಿದೆ. ಇದು ರೈತಾಪಿಗಳಿಗೆ ಹೊರೆಯಾಗುತ್ತದೆ. ಈ ರೀತಿ ಮಾಡದೇ ರೈತರು ಕೇಳುವ ವಸ್ತುಗಳನ್ನು ಮಾತ್ರ ನೀಡಬೇಕೆಂದು ಆಗ್ರಹಿಸಿದರು. ಈ ಕುರಿತು ಮಾತನಾಡಿದ ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಬಿ.ಪೂಜಾ ಇನ್ನು ಒಂದೆರೆಡು ದಿನಗಳಲ್ಲಿ ಯೂರಿಯಾ ಗೊಬ್ಬರ ತಾಲೂಕಿಗೆ ಸರಬರಾಗಲಿದೆ. ಯಾವುದೇ ತೊಂದರೆಯಾಗದು. ರೈತಾಪಿಗಳು ತಮಗೆ ಸಮೀಪವಿರುವ ಗೊಬ್ಬರದ ಅಂಗಡಿಗಳಲ್ಲಿ ಅಥವಾ ಸಹಕಾರ ಸಂಘಗಳಲ್ಲಿ ಕೊಂಡುಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.