ಮಂಜುನಾಥ ಕೆ.ಎಂ. ಬಳ್ಳಾರಿ
ಮಳೆಯ ಅಭಾವದಿಂದ ಮುಂಗಾರು ಹಂಗಾಮಿನ ಹಲವು ಬೆಳೆ ಸಂಕಷ್ಟಕ್ಕೆ ಸಿಲುಕಿರುವ ಬೆನ್ನಲ್ಲೇ ಲಭ್ಯವಿರುವ ಅಲ್ಪ ತೇವಾಂಶ ಬಳಸಿಕೊಂಡು ಭತ್ತ ಬೆಳೆಯಲು ರೈತರು ಕೂರಿಗೆ ಬಿತ್ತನೆ ಪದ್ಧತಿಯತ್ತ ಮುಖ ಮಾಡಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜಿಲ್ಲೆಯಲ್ಲಿ ಭತ್ತದ ಕೂರಿಗೆ ಬಿತ್ತನೆ ಪ್ರದೇಶದಲ್ಲಿ ಗಣನೀಯ ಏರಿಕೆಯಾಗಿದೆ. 2025ರ ಮುಂಗಾರು ಹಂಗಾಮಿನಲ್ಲಿ 2,458 ಹೆಕ್ಟೇರ್ ಪ್ರದೇಶದಲ್ಲಿ ಕೂರಿಗೆ ಬಿತ್ತನೆ ಮಾಡಲಾಗಿತ್ತು. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 4,526 ಹೆಕ್ಟೇರ್ ಪ್ರದೇಶದಲ್ಲಿ ಕೂರಿಗೆ ಬಿತ್ತನೆಯಾಗಿದ್ದು, ಕಳೆದ ವರ್ಷಕ್ಕಿಂತ ಸುಮಾರು 2,068 ಹೆಕ್ಟೇರ್ ಹೆಚ್ಚಳವಾಗಿದೆ. ಅಂದರೆ, ಕೂರಿಗೆ ಬಿತ್ತನೆ ಪ್ರಮಾಣ ಸುಮಾರು ದುಪ್ಪಟ್ಟಾಗಿದೆ. ಹೆಚ್ಚಿನ ನೀರಾವರಿ ಪ್ರದೇಶ ಹೊಂದಿರುವ ಬಳ್ಳಾರಿ, ಸಿರುಗುಪ್ಪ, ಕಂಪ್ಲಿ ಹಾಗೂ ಕುರುಗೋಡು ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಕಂಡು ಬಂದಿದೆ.ಪರ್ಯಾಯ ದಾರಿ:
ಬಿತ್ತನೆ ಮಾಡಿದ ಬಳಿಕ ಸಮರ್ಪಕ ಮಳೆ ಬಾರದಿರುವುದು ಬೆಳೆಗಳ ಬೆಳವಣಿಗೆ ಮೇಲೂ ಪರಿಣಾಮ ಬೀರಿದೆ. ಇಂತಹ ಸಂದರ್ಭದಲ್ಲಿ ಕೈಯಲ್ಲಿರುವ ಅಲ್ಪ ಪ್ರಮಾಣದ ನೀರು ಮತ್ತು ಮಣ್ಣಿನಲ್ಲಿರುವ ತೇವಾಂಶ ಸಮರ್ಪಕವಾಗಿ ಬಳಸಿಕೊಳ್ಳುವುದು ರೈತರ ಮುಂದಿರುವ ಅನಿವಾರ್ಯತೆಯಾಗಿದೆ. ಹೀಗಾಗಿ ಮಳೆಯಾಶ್ರಿತ ಜಮೀನುಗಳ ಜತೆಗೆ ಬೋರ್ವೆಲ್ ಸೌಲಭ್ಯ ಹೊಂದಿರುವ ರೈತರೂ ಭತ್ತದ ಕೂರಿಗೆ ಬಿತ್ತನೆಯ ಪದ್ಧತಿಗೆ ಹೆಚ್ಚಿನ ಆಸಕ್ತಿ ತೋರಿದ್ದಾರೆ.
ಸಹಜವಾಗಿ ಭತ್ತ ಬೆಳೆಗಾರರು ಭತ್ತದ ಸಸಿಗಳನ್ನು ಬೆಳೆಸಿ ಬಳಿಕ ಸಸಿಗಳನ್ನು ನೆಡುತ್ತಿದ್ದರು. ಆದರೆ, ಈ ಬಾರಿ ಮಳೆಯ ಅಭಾವದಿಂದ ಎಲ್ಲೂ ಭತ್ತದ ಸಸಿಗಳಿಗಾಗುವಷ್ಟು ನೀರಿನ ಲಭ್ಯತೆ ಇರದ ಕಾರಣ ಕೂರಿಗೆ ಬಿತ್ತನೆಗೆ ಮುಂದಾಗಿದ್ದಾರೆ. ಕೂರಿಗೆ ಬಿತ್ತನೆ ಪದ್ಧತಿಯಲ್ಲಿ ಮಣ್ಣಿನಲ್ಲಿರುವ ತೇವಾಂಶ ಬಳಸಿಕೊಂಡು ಬಿತ್ತನೆ ಮಾಡಬಹುದಾಗಿದ್ದು ಬೆಳೆಗಳು ಸಹ ಸಮೃದ್ಧವಾಗಿ ಬೆಳೆಯುತ್ತಿದ್ದು ರೈತರಲ್ಲಿ ನೆಮ್ಮದಿ ಮೂಡಿಸಿದೆ. ಕೃಷಿ ಇಲಾಖೆಯ ಪ್ರಕಾರ ಕೂರಿಗೆ ಬಿತ್ತನೆ ಮೂಲಕ ಸಾಂಪ್ರದಾಯಿಕ ಬಿತ್ತನೆಗೆ ಹೋಲಿಸಿದರೆ ಸುಮಾರು ಶೇ. 65ರಷ್ಟು ನೀರನ್ನು ಉಳಿಸಬಹುದಾಗಿದೆ. ನೀರಿನ ಲಭ್ಯತೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಈ ಉಳಿತಾಯ ರೈತರ ಪಾಲಿಗೆ ಮಹತ್ವದ್ದಾಗಿದೆ.
ಮಳೆಯ ಅಭಾವದಿಂದ ಈ ಬಾರಿ ಭತ್ತ ಬೆಳೆಯುವ ರೈತರು ಅನಿವಾರ್ಯವಾಗಿ ಕೂರಿಗೆ ಬಿತ್ತನೆಗೆ ಮುಂದಾಗಿದ್ದಾರೆ. ಸಂಡೂರು ಹೊರತುಪಡಿಸಿದರೆ ಜಿಲ್ಲೆಯ ಎಲ್ಲ ಭಾಗಗಳಲ್ಲಿ ಭತ್ತದ ಕೂರಿಗೆ ಬಿತ್ತನೆ ಕಂಡು ಬಂದಿದೆ ಎಂದು ಬಳ್ಳಾರಿ ತುಂಗಭದ್ರಾ ರೈತ ಸಂಘ ಅಧ್ಯಕ್ಷ ಪುರುಷೋತ್ತಮಗೌಡ ತಿಳಿಸಿದ್ದಾರೆ.