ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ತಾಲೂಕಿನ ದೊಡ್ಡಿಂದುವಾಡಿ ಗ್ರಾಮದ ಚೆಸ್ಕಾಂ ಕಚೇರಿಯ ಮುಂಭಾಗದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕದವರು ಪ್ರತಿಭಟನೆ ನಡೆಸಿದರು.ದೊಡ್ಡಿಂದುವಾಡಿ ಗ್ರಾಮದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಸೇರಿದ ನೂರಾರು ಪ್ರತಿಭಟನಾಕಾರರು ಚೆಸ್ಕಾಂ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗುವ ಮೂಲಕ ಪ್ರತಿಭಟಿಸಿದರು.ಗ್ರಾಮಾಂತರ ಪ್ರದೇಶದ ತೋಟದ ಮನೆಗಳಿಗೆ ಸಂಜೆ 6 ರಿಂದ ಬೆಳಗಿನ ಜಾವ 6 ಗಂಟೆಯವರೆಗೆ ನೀಡುತ್ತಿರುವ ವಿದ್ಯುತ್ ಪೂರೈಕೆಯಲ್ಲಿ ಕಡಿತ ಮಾಡುವುದನ್ನು ನಿಲ್ಲಿಸಬೇಕು. ನಿರಂತರ ವಿದ್ಯುತ್ ಪೂರೈಕೆ ನೀಡಬೇಕು. ಅಕ್ರಮ ಸಕ್ರಮ ಯೋಜನೆಯನ್ನು ಹಿಂದಿನ ರೀತಿಯಲ್ಲಿ ಮುಂದುವರಿಸಬೇಕು. ಕಬ್ಬಿಣದ ಕಂಬಗಳ ಬದಲಿಗೆ ಸಿಮೆಂಟ್ ಕಂಬಗಳನ್ನು ಸ್ಥಾಪಿಸಬೇಕು. ಜೋತು ಬಿದ್ದಿರುವ ಲೈನ್ಗಳನ್ನು ಸರಿಪಡಿಸಬೇಕು. ಸರಿಪಡಿಸದಿದ್ದರೆ ಸಂಬಂಧಪಟ್ಟವರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಎಚ್ಚರಿಸಿದರು. ಗ್ರಾಹಕರ ಕರೆ ಸ್ವೀಕರಿಸದ ಚೆಸ್ಕಾಂ ಸಿಬ್ಬಂದಿ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು. ರೈತರಿಂದ ಪರಿಕರಗಳನ್ನು ಸಾಗಿಸುವಾಗ, ಅವುಗಳಿಗೆ ಸಂಪೂರ್ಣ ವೆಚ್ಚವನ್ನು ರೈತರಿಂದಲೇ ವಸೂಲಿ ಮಾಡುವುದನ್ನು ನಿಲ್ಲಿಸಬೇಕು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ್ದ ಚೆಸ್ಕಾಂ ಇಇ ತಬುಸಮ್ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ತೋಟದ ಮನೆಗಳಿಗೆ ನೀಡುತ್ತಿರುವ ವಿದ್ಯುತ್ ಸರಬರಾಜನ್ನು ಕಡಿತ ಮಾಡದೇ ಸಮಪರ್ಕವಾಗಿ ಸಂಜೆ ೬ ಗಂಟೆ ಬೆಳಗಿನ ಜಾವ ೬ ಗಂಟೆವರೆಗೆ ನೀಡಲಾಗುವುದು. ದೊಡ್ಡಿಂದುವಾಡಿ ಚೆಸ್ಕಾಂ ವ್ಯಾಪ್ತಿಯಲ್ಲಿ ಜೋತು ಬಿದ್ದಿರುವ ವಿದ್ಯುತ್ ತಂತಿಗಳನ್ನು ತುರ್ತಾಗಿ ಸರಿಡಿಸಿಕೊಡಲಾಗುವುದು. ಅಕ್ರಮ ಸಕ್ರಮ ಯೋಜನೆ ಈ ಹಿಂದೆ ಪಾವತಿಸುತ್ತಿದ್ದ ಶುಲ್ಕವನ್ನು ರದ್ದು ಪಡಿಸಿ ಒಂದು ಎಚ್.ಪಿಗೆ ಶುಲ್ಕ ಪಾವತಿ ಮಾಡಲಾಗುವುದು.ಕಬ್ಬಿಣದ ವಿದ್ಯುತ್ ಕಂಬಗಳನ್ನು ಬದಲಾವಣೆ ಸೇರಿದಂತೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು. ಈ ವೇಳೆ ಚೆಸ್ಕಾಂ ಎಇಇ ರಾಜು, ಕೆಪಿಟಿಸಿಎಲ್ ಎಇಇ ಸುಜಾತ, ದೊಡ್ಡಿಂದುವಾಡಿ ಜೆಇ ರವಿಕುಮಾರ್, ಎಇ ವೆಂಕಟೇಶ್ ಇದ್ದರು.ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶೈಲೇಂದ್ರ, ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ, ಜಿಲ್ಲಾ ಪ್ರ.ಕಾರ್ಯದರ್ಶಿ ಭಾಸ್ಕರ್, ಜಿಲ್ಲಾ ಕಾಯಂ ಸದಸ್ಯ ರವಿನಾಯ್ಡು, ತಾಲೂಕು ಕಾರ್ಯಾಧ್ಯಕ್ಷ ಪೊನ್ನಸ್ವಾಮಿ, ತಾಲೂಕು ಪ್ರಭಾರ ಅಧ್ಯಕ್ಷ ಚಾರ್ಲಿ, ಪ್ರ.ಕಾರ್ಯದರ್ಶಿ ಪೆರಿಯಾನಾಯಗಂ, ದೊಡ್ಡಿಂದುವಾಡಿ ಗ್ರಾಮ ಘಟಕ ಅಧ್ಯಕ್ಷ ವಸಂತಕುಮಾರ್, ಸಿಂಗಾನಲ್ಲೂರು ಗ್ರಾಮ ಘಟಕ ಅಧ್ಯಕ್ಷ ಬೆಟ್ಟೇಗೌಡ, ಮೊಳಗನ ಕಟ್ಟೆ ಗ್ರಾಮ ಘಟಕ ಅಧ್ಯಕ್ಷ ಅಪ್ಪುಸ್ವಾಮಿ, ಹೊಸ ಅಣಗಳ್ಳಿ ಗ್ರಾಮ ಘಟಕ ಕಾರ್ಯದರ್ಶಿ ಕೀರ್ತಿ ರಾಜ್, ಸತ್ತೇಗಾಲ ಗ್ರಾಮ ಘಟಕ ಅಧ್ಯಕ್ಷರು ಕಚೇರಿ ಮಹದೇವ ಸೇರಿದಂತೆ ಎಲ್ಲ ರೈತ ಮುಖಂಡರು ಹಾಗೂ ಸದಸ್ಯರು ಹಾಜರಿದ್ದರು.
ಕೊಳ್ಳೇಗಾಲ ತಾಲೂಕಿನ ದೊಡ್ಡಿಂದುವಾಡಿ ಗ್ರಾಮದ ಚೆಸ್ಕಾಂ ಕಚೇರಿಯ ಮುಂಭಾಗದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಘಟಕದವರು ಪ್ರತಿಭಟನೆ ನಡೆಸಿದರು.