ಕನ್ನಡಪ್ರಭ ವಾರ್ತೆ ಹನೂರು
ಕಾಡುಪ್ರಾಣಿಗಳು ರೈತರ ಜಮೀನಿಗೆ ಬರದಂತೆ ಕ್ರಮ ಕೈಗೊಳ್ಳಲು ಒತ್ತಾಯಿಸಿ ಪಟ್ಟಣದ ಅರಣ್ಯ ಇಲಾಖೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಗೌಡಳ್ಳಿ ಸೋಮಣ್ಣ ಮಾತನಾಡಿ, ಕಾಡು ಪ್ರಾಣಿಗಳ ಹಾವಳಿಯಿಂದ ರೈತರ ಜಮೀನುಗಳಲ್ಲಿ ಫಸಲು ನಾಶ ಜೊತೆಗೆ ಕ್ರೂರ ಪ್ರಾಣಿಗಳು ಸಾಕು ಪ್ರಾಣಿಗಳನ್ನು ಕೊಂದು ತಿನ್ನುತ್ತಿರುವುದನ್ನು ತಡೆಗಟ್ಟಲು ವಿಫಲರಾಗಿರುವ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ತಾಲೂಕಿನ ಮಲ್ಲಯ್ಯನಪುರ ಸತ್ತರ್ ಮೇಡ್ ಹಾಗೂ ಸುತ್ತಲಿನ ಜಮೀನುಗಳಲ್ಲಿ ರಾತ್ರಿ ವೇಳೆ ಕಾಡಾನೆಗಳ ಹಿಂಡು ಕಳೆದ ನಾಲ್ಕು ತಿಂಗಳಿನಿಂದ ರೈತರ ಜಮೀನುಗಳಲ್ಲಿ ಫಸಲು ತಿಂದು ಕೃಷಿ ಚಟುವಟಿಕೆಯ ಪರಿಕರಗಳು ಪಂಪ್ ಸೆಟ್ ಮತ್ತು ಇತರ ಪರಿಕರಗಳನ್ನು ಹಾಳು ಮಾಡುತ್ತಿದೆ. ಇದರ ಬಗ್ಗೆ ಹಲವು ಬಾರಿ ಅರಣ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು ಕಾಡುಪ್ರಾಣಿಗಳು ರೈತರ ಜಮೀನಿಗೆ ಬರದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ನೀಡಿದ ಮನವಿಗೆ ಸ್ಪಂದಿಸದೆ ಇರುವುದರಿಂದ ಅರಣ್ಯಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಅಜ್ಜಿಪುರ ಸಫಾರಿ ಕೇಂದ್ರ ತೆರೆದು ಅರಣ್ಯ ಇಲಾಖೆಯ ಅಧಿಕಾರಿಗಳು ಇಲ್ಲಿ ಹುಲಿ ಮತ್ತೆ ಚಿರತೆ ಇನ್ನಿತರ ಕ್ರೂರ ಪ್ರಾಣಿಗಳನ್ನು ತಂದು ಅರಣ್ಯಕ್ಕೆ ಬಿಟ್ಟಿರುವುದರಿಂದ ಈ ಭಾಗದಲ್ಲಿ ದಿನನಿತ್ಯ ಅರಣ್ಯದಿಂದ ರೈತರ ಜಮೀನುಗಳಿಗೆ ಕ್ರೂರ ಪ್ರಾಣಿಗಳು ಬಂದು ಸಾಕು ಪ್ರಾಣಿಗಳಾದ ಮೇಕೆ, ಕುರಿ, ನಾಯಿ ಇನ್ನಿತರ ಪ್ರಾಣಿಗಳನ್ನು ಕೊಂದು ತಿನ್ನುತ್ತಿವೆ ಜೊತೆಗೆ ರೈತರ ಜಮೀನುಗಳಿಗೆ ರಾತ್ರಿ ವೇಳೆ ಕಾಡಾನೆಗಳು ದಾಳಿ ನಡೆಸಿ ಜಮೀನುಗಳಲ್ಲಿ ಫಸಲು ನಷ್ಟ ಉಂಟು ಮಾಡಿದೆ. ರೈತರು ಜೀವ ಭಯದಲ್ಲೇ ಜಮೀನುಗಳಲ್ಲಿ ವಾಸ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.ಸಂಬಂಧಪಟ್ಟ ವಿಭಾಗದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಾದ ಡಿಸಿಎಫ್ ಹಾಗೂ ಎಸಿಎಫ್ ಸ್ಥಳಕ್ಕೆ ಆಗಮಿಸಿ ಸೂಕ್ತ ಭರವಸೆ ನೀಡಿ ರೈತರಿಗೆ ಪರಿಹಾರ ನೀಡಬೇಕು ಜೊತೆಗೆ ರೈತರ ಜಮೀನಿಗೆ ಕಾಡು ಪ್ರಾಣಿಗಳು ಬರದಂತೆ ಶಾಶ್ವತ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಪಟ್ಟುಹಿಡಿದರು. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಬರದೇ ಇರುವುದರಿಂದ ಜೂ.6 ರಂದು ಅರಣ್ಯ ಇಲಾಖೆ ಕಚೇರಿ ಮುಂಭಾಗ ಅನಿರ್ದಿಷ್ಟ ಅವಧಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಹನೂರು ತಾಲೂಕು ಅಧ್ಯಕ್ಷ ಚಿಕ್ ರಾಜು, ಕಾರ್ಯದರ್ಶಿ ಸೋಮಣ್ಣ ಬಸವರಾಜು, ಪವನ್ ಕುಮಾರ್, ಪ್ರಭುಸ್ವಾಮಿ ಹಾಗೂ ಇನ್ನಿತರ ರೈತ ಮುಖಂಡರು ಉಪಸ್ಥಿತರಿದ್ದರು.ರೈತರಿಗೆ ಬೇಕಾದ ರಸಗೊಬ್ಬರ ನೀಡಿ: ರಂಗಸ್ವಾಮಿ
ರೈತರಿಗೆ ಅಂಗಡಿಗಳಲ್ಲಿ ಅವರಿಗೆ ಬೇಕಾದ ರಸಗೊಬ್ಬರ ನೀಡಬೇಕು ಅದಕ್ಕೆ ಪೂರಕವಾಗಿ ರೈತರಿಗೆ ಸ್ಪಂದಿಸಲು ಸೂಚನೆ ನೀಡಲಾಗಿದೆ ಎಂದು ಕೊಳ್ಳೇಗಾಲ ತಾಲೂಕು ಕೃಷಿ ಸಹಾಯಕ ನಿರ್ದೇಶಕ ರಂಗಸ್ವಾಮಿ ತಿಳಿಸಿದರು. ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆಆಗಮಿಸಿದ ಸಂದರ್ಭದಲ್ಲಿ ಕೃಷಿ ಇಲಾಖೆಯಲ್ಲಿ ರೈತರಿಗೆ ಸಿಗಬೇಕಾದ ಮಿನಿ ಕಿಟ್, ಧಾನ್ಯಗಳ ಸಹ ನೀಡದೆ ಅಕ್ರಮ ಎಸಗಿದ್ದಾರೆ. ಹೀಗಾಗಿ ರೈತರಿಗೆ ಕೃಷಿ ಇಲಾಖೆಯಲ್ಲಿ ಸಿಗುವ ಪ್ರತಿಯೊಂದು ಸವಲತ್ತು ನೇರವಾಗಿ ರೈತರಿಗೆ ಸಿಗಬೇಕು ಎಂದು ರೈತರು ಮನವಿ ಮಾಡಿದ ಹಿನ್ನಲೆ ರೈತರಿಗೆ ಮಾಹಿತಿ ನೀಡಿದರು.ಜಲಜೀವನ್ ಮಿಷನ್ ಅಧಿಕಾರಿಗೆ ಮನವಿ:
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಕಾಮಗಾರಿ ಪೂರ್ಣಗೊಂಡಿಲ್ಲ, ಕೇಂದ್ರ ಸರ್ಕಾರದ ಮನೆಮನೆಗೂ ಗಂಗೆ ಯೋಜನೆಯಲ್ಲಿ ಜಲಜೀವನ್ ಮಿಷನ್ ಅವೈಜ್ಞಾನಿಕವಾಗಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಪೂರ್ಣ ಪ್ರಮಾಣದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸ್ಥಳದಲ್ಲಿದ್ದ ಜಲಜೀವನ್ ಮಿಷನ್ ಅಧಿಕಾರಿ ಪೂರ್ಣಿಮಾರಿಗೆ ರೈತರು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.ಇಒಗೆ ಮನವಿ:
ಪಿಜಿ ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಕಡೆ ಸಿಸಿ ರಸ್ತೆ ಇಲ್ಲ, ಚರಂಡಿ ಸ್ವಚ್ಛತೆ ಕೂಡ ಮಾಡಿಲ್ಲ, ಕುಡಿಯುವ ನೀರಿನ ಪೂರೈಕೆ ಮಾಡುತ್ತಿಲ್ಲ, ತಾಲೂಕಿನಲ್ಲಿ ಇರುವ ಹಲವಡೆ ಮಿನಿ ತೊಂಬೆಗಳು ಅಶುಚಿತ್ವದಿಂದ ಕೂಡಿದೆ. ಕುಡಿಯುವ ನೀರಿನ ಸಮಸ್ಯೆ ಸಹ ತಾಲೂಕಿನಲ್ಲಿ ತಲೆದೋರಿದೆ ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಾಲೂಕು ಕಾರ್ಯನಿರ್ವಹಣಾಧಿಕಾರಿ ಉಮೇಶ್ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವಿಕರಿಸಿದ ತಾಪಂ ಇಒ ಉಮೇಶ್ ಮಾತನಾಡಿ, ಗ್ರಾಮಗಳಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲು ಸಂಬಂಧಪಟ್ಟ ಪಿಡಿಒ ಮತ್ತು ಕಾರ್ಯದರ್ಶಿಗಳಿಗೆ ಸೂಚನೆ ನೀಡಿ ಸಮಸ್ಯೆಯನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.