ವಿಂಡ್ ಪವರ್ ಯೋಜನೆಗಳಲ್ಲಿ ರೈತರಿಗೆ ಆದ್ಯತೆ: ಕೆ.ಜೆ. ಜಾರ್ಜ್

KannadaprabhaNewsNetwork |  
Published : Mar 17, 2026, 02:15 AM IST
ಕಾರ್ಯಕ್ರಮದಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್ ಮಾತನಾಡಿದರು. | Kannada Prabha

ಸಾರಾಂಶ

ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಈಗಾಗಲೇ ಸುಮಾರು 2500 ಮೆಗಾವಾಟ್ ವಿಂಡ್ ಪವರ್ ಉತ್ಪಾದನೆಗಾಗಿ ಟೆಂಡರ್ ನೀಡಲಾಗಿದೆ.

ಗದಗ: ವಿಂಡ್ ಪವರ್ ಯೋಜನೆಗಳಲ್ಲಿ ಸ್ಥಳೀಯ ಭೂಮಾಲೀಕರಿಗೆ ಹಾಗೂ ರೈತರಿಗೆ ಆದ್ಯತೆ ನೀಡುವ ಕುರಿತು ಹಾಗೂ ಪಾಲುದಾರರಾಗುವ ಕುರಿತು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.

ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಸೋಮವಾರ ಕೆ.ಎಚ್. ಪಾಟೀಲ ಅವರ 101ನೇ ಜಯಂತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ ವಿಂಡ್ ಪವರ್ ಅತ್ಯಧಿಕ ಉತ್ಪಾದನೆ ಆಗುತ್ತಿದ್ದು, ಉತ್ಪಾದನೆಯಲ್ಲಿ ಭೂಮಾಲೀಕರಾದ ರೈತರಿಗೂ ಪಾಲು ಸಿಗಬೇಕು ಎಂದು ಸಚಿವ ಎಚ್.ಕೆ. ಪಾಟೀಲ ಅವರು ಜಾರ್ಜ್ ಅವರಿಗೆ ವೇದಿಕೆಯಲ್ಲೇ ಮನವಿ ಮಾಡಿದ್ದರು. ಮನವಿಗೆ ವೇದಿಕೆಯಲ್ಲೇ ಪ್ರತಿಕ್ರಿಯೆ ನೀಡಿದ ಅವರು, ವಿಂಡ್ ಮಿಲ್ ಸ್ಥಾಪನೆಗೆ ಸಂಬಂಧಿಸಿದಂತೆ ಸ್ಥಳೀಯ ರೈತರು ಮತ್ತು ಭೂಮಾಲೀಕರು ಪಾಲುದಾರರಾಗುವಂತೆ ನೀತಿ ರೂಪಿಸುವ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ನಡೆಸಲಾಗುತ್ತದೆ ಎಂದರು.

ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಈಗಾಗಲೇ ಸುಮಾರು 2500 ಮೆಗಾವಾಟ್ ವಿಂಡ್ ಪವರ್ ಉತ್ಪಾದನೆಗಾಗಿ ಟೆಂಡರ್ ನೀಡಲಾಗಿದೆ. ಇದರಿಂದ ಸುಮಾರು ₹10 ಸಾವಿರ ಕೋಟಿ ಹೂಡಿಕೆ ರಾಜ್ಯಕ್ಕೆ ಬರಲಿದ್ದು, ವಿದ್ಯುತ್ ಉತ್ಪಾದನೆ ಹೆಚ್ಚುವ ಜತೆಗೆ ರೈತರಿಗೆ ಸಹ ಲಾಭವಾಗಲಿದೆ ಎಂದರು.

ರಾಜ್ಯ ಸರ್ಕಾರ ರೈತರಿಗೆ ವಿದ್ಯುತ್ ಸಬ್ಸಿಡಿ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ನೆರವು ನೀಡುತ್ತಿವೆ. ಗೃಹಜ್ಯೋತಿ ಸೇರಿದಂತೆ ಉಚಿತ ವಿದ್ಯುತ್ ಯೋಜನೆಗಳಿಗೆ ವರ್ಷಕ್ಕೆ ಸುಮಾರು ₹33 ಸಾವಿರ ಕೋಟಿ ವೆಚ್ಚವಾಗುತ್ತಿದೆ ಎಂದರು. ರೈತರಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡುವ ಮೂಲಕ ಕೃಷಿ ಉತ್ಪಾದನೆ ಹೆಚ್ಚಿಸುವುದು ಸರ್ಕಾರದ ಉದ್ದೇಶವಾಗಿದೆ. ರೈತರು ಉತ್ಪಾದನೆ ಹೆಚ್ಚಿಸಿದಷ್ಟು ರಾಜ್ಯದ ಆರ್ಥಿಕತೆಗೂ ಬಲ ಸಿಗುತ್ತದೆ ಎಂದರು.

ಇದೇ ವೇಳೆ ದಿ. ಕೆ.ಎಚ್. ಪಾಟೀಲ್ ಅವರ ಸೇವೆಯನ್ನು ಅವರೊಂದಿಗಿನ ಒಡನಾಟವನ್ನು ಸ್ಮರಿಸಿದ ಅವರು, ಅವರ ತತ್ವಗಳು ಹಾಗೂ ಜನಪರ ರಾಜಕೀಯ ಎಲ್ಲರಿಗೂ ಮಾದರಿಯಾಗಿದೆ ಎಂದರು. ಪವನ ವಿದ್ಯುತ್ ಉತ್ಪಾದನೆಯ ಲಾಭ ರೈತರಿಗೆ ಸಿಗಲಿ: ಎಚ್.ಕೆ. ಪಾಟೀಲಗದಗ: ಗಾಳಿಯಿಂದ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆಗಳಿಂದ ಖಾಸಗಿ ಕಂಪನಿಗಳು ಸಾಕಷ್ಟು ಲಾಭವನ್ನು ಪಡೆಯುತ್ತಿದ್ದಾರೆ. ಈ ಲಾಭದಲ್ಲಿ ರೈತರ ಪಾಲುದಾರಿಕೆ ಸಿಗಬೇಕು. ಆ ರೀತಿಯ ಕಾನೂನು ಜಾರಿಗೆ ತಂದರೆ ಜಿಲ್ಲೆಯ ರೈತರಿಗೆ ದೊಡ್ಡ ಅನುಕೂಲವಾಗಲಿದೆ ಹಾಗೂ ರೈತರ ಆರ್ಥಿಕ ಸಬಲೀಕರಣ ಸಾಧ್ಯವಾಗಲಿದೆ ಎಂದು ಎಚ್.ಕೆ. ಪಾಟೀಲ ತಿಳಿಸಿದರು.

ಸೋಮವಾರ ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಆಯೋಜಿಸಿದ್ದ ದಿ. ಕೆ.ಎಚ್. ಪಾಟೀಲರ 101ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ರೈತರ ಹೊಲಗಳಲ್ಲಿ ಬೀಸುವ ಗಾಳಿಯಲ್ಲಿಯೂ ರೈತರ ಹಕ್ಕಿರುತ್ತದೆ. ರೈತರ ಜಮೀನುಗಳಲ್ಲಿ ಸಿಗುವ ಖನಿಜ ಸಂಪತ್ತಿಗೆ ಹೇಗೆ ಬೆಲೆ ನೀಡಲಾಗುತ್ತದೆಯೋ ಹಾಗೆಯೇ ರೈತರ ಜಮೀನುಗಳಲ್ಲಿ ಬೀಸುವ ಗಾಳಿಯಲ್ಲಿ ರೈತರಿಗೆ ಹಕ್ಕಿದೆ.ಗಾಳಿಯಂತ್ರ ಸ್ಥಾಪನೆ ಮಾಡಿರುವ ರೈತರ ಜಮೀನುಗಳ ಮಾಲೀಕರಿಗೆ ಅದರ ಆದಾಯದಲ್ಲಿ ಪಾಲು ನೀಡುವ ವ್ಯವಸ್ಥೆ ಮಾಡಬೇಕು. ಉತ್ಪಾದನೆಯಾಗುವ ವಿದ್ಯುತ್ ಆದಾಯದಲ್ಲಿ ರೈತರಿಗೆ ಶೇಕಡಾವಾರು ಪಾಲು ನೀಡಬೇಕು. ಈ ವಿಷಯವನ್ನು ಇಂಧನ ಸಚಿವರು ಗಂಭೀರವಾಗಿ ಪರಿಗಣಿಸಬೇಕು ಎಂದರು.

ಈ ರೀತಿಯ ಯೋಜನೆಗಳು ಹೊಸದಲ್ಲ. ಕೆಲವು ಕಡೆ ರೈತರಿಗೆ ವಿದ್ಯುತ್ ಉತ್ಪಾದನೆಯ ಆದಾಯದಲ್ಲಿ ಪಾಲು ನೀಡುವ ಮಾದರಿ ಜಾರಿಯಲ್ಲಿದೆ ಎಂದ ಅವರು, ನಮ್ಮೂರಾದ ಹುಲಕೋಟಿಯಲ್ಲಿನ 70 ಮಂದಿ ರೈತರು ಈ ರೀತಿಯ ಲಾಭ ಪಡೆಯುತ್ತಿರುವ ಉದಾಹರಣೆಯನ್ನು ಉಲ್ಲೇಖಿಸಿದರು. ಈ ಯೋಜನೆ ಜಾರಿಯಾದರೆ ಜಿಲ್ಲೆಯ ರೈತರಿಗೆ ಹೊಸ ಆದಾಯದ ಮಾರ್ಗ ದೊರೆಯಲಿದೆ ಎಂದು ಇಲಾಖೆ ಸಚಿವರಲ್ಲಿ ಮನವಿ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ, ಧಾರವಾಡ ಮಹಾನಗರ ಅಭಿವೃದ್ಧಿಗೆ ಸಪ್ತಸೂತ್ರ
ಹಾನಗಲ್ಲಿನ 14 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ