ರಟ್ಟೀಹಳ್ಳಿ: ರೈತರು ಯೂರಿಯಾ ಗೊಬ್ಬರವನ್ನು ಕೃಷಿ ಅಧಿಕಾರಿಗಳ ಸಲಹೆ ಮೇರೆಗೆ ಬಳಕೆ ಮಾಡುವುದು ಉತ್ತಮ. ಆ ಮೂಲಕ ಜಮೀನುಗಳಲ್ಲಿ ವಿಪರೀತ ರಾಸಾಯನಿಕ ಗೊಬ್ಬರ ಬಳಕೆಗೆ ಕಡಿವಾಣ ಬೀಳಲಿದೆ. ಅಲ್ಲದೇ ಉತ್ತಮ ಇಳುವರಿ ಪಡೆಯಲು ಸಹಕಾರಿಯಾಗಲಿದೆ ಎಂದು ಕೃಷಿ ಅಧಿಕಾರಿ ಜಿ.ಎಂ. ಬತ್ತಿಕೊಪ್ಪ ತಿಳಿಸಿದರು.ತಾಲೂಕಿನ ತೋಟಗಂಟಿ ಗ್ರಾಮದ ಹೊಲಗಳಿಗೆ ಭೇಟಿ ನೀಡಿ ಡ್ರೋನ್ ಮೂಲಕ ಬೆಳೆಗಳಿಗೆ ಔಷಧಿ ಸಿಂಪಡಣೆಗೆ ಚಾಲನೆ ನೀಡಿ ಮಾತನಾಡಿ, ಕೃಷಿ ಚಟುವಟಿಕೆಗಳಿಗೆ ಆಧುನಿಕ ಸಲಕರಣೆಗಳು ಮಾರುಕಟ್ಟೆಗೆ ಬಂದಿವೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯುವ ಅತ್ಯಾಧುನಿಕ ಕೃಷಿ ಯಂತ್ರೋಪಕರಣಗಳು ಇವೆ. ಅದರಲ್ಲಿ ಕೆಲವು ಕೃಷಿ ಸಲಕರಣೆಗಳು ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದ್ದು, ಇದರ ಪ್ರಯೋಜನ ಪಡೆದು ಉತ್ತಮ ಇಳುವರಿ ಪಡೆದು ಆರ್ಥಿಕವಾಗಿ ಸದೃಢರಾಗಿ ಎಂದು ಸಲಹೆ ನೀಡಿದರು.ಡ್ರೋನ್ ಮುಖಾಂತರ ಬೆಳೆಗಳಿಗೆ ನ್ಯಾನೋ ಯೂರಿಯಾ ಮತ್ತು ಡಿಎಪಿ ಸಿಂಪಡಣೆಯ ಕುರಿತು ಕಾರ್ಯಾಗಾರದಲ್ಲಿ ರೈತರಿಗೆ ಮಾಹಿತಿ ನೀಡಲಾಯಿತು.ರೈತರಾದ ಗಿರೀಶ ಪಾಟೀಲ್, ಹೇಮನಗೌಡ ಪಾಟೀಲ್, ಮಾಲತೇಶ, ರಾಜಶೇಖರ ಪಾಟೀಲ್, ಕೃಷಿ ಇಲಾಖೆಯ ಸಿಬ್ಬಂದಿ ಮಂಗಳಾ ಹುಲ್ಲತ್ತಿ ಹಾಗೂ ಇತರ ಕೃಷಿ ಇಲಾಖೆ ಸಿಬ್ಬಂದಿ ಇದ್ದರು.ನಾಳೆ ಗ್ರಾಹಕರ ಸಂವಾದ ಸಭೆ
ರಾಣಿಬೆನ್ನೂರು: ನಗರದ ಹೆಸ್ಕಾಂ ಉಪ ವಿಭಾಗ- 1ರ ಕಚೇರಿಯಲ್ಲಿ ಜು. 19ರಂದು ಮಧ್ಯಾಹ್ನ 3ರಿಂದ ಸಂಜೆ 5.30ರ ವರೆಗೆ ಹೆಸ್ಕಾ ಉಪ ವಿಭಾಗ 1 ಮತ್ತು 2ರ ವ್ಯಾಪ್ತಿಯ ಗ್ರಾಹಕರ ಸಂವಾದ ಸಭೆ ಹಮ್ಮಿಕೊಳ್ಳಲಾಗಿದೆ. ತಾಲೂಕಿನ ಹಲಗೇರಿ, ಇಟಗಿ, ತುಮ್ಮಿನಕಟ್ಟಿ, ಚಳಗೇರಿ ಮತ್ತು ಮೆಡ್ಲೇರಿ ಹಾಗೂ ರಾಣಿಬೆನ್ನೂರು ನಗರ ಶಾಖೆ, ಗ್ರಾಮೀಣ ಮತ್ತು ಹೊನ್ನತ್ತಿ ಶಾಖಾ ವ್ಯಾಪ್ತಿಯ ಗ್ರಾಹಕರು ಸಭೆಗೆ ಹಾಜರಾಗಿ ತಮ್ಮ ಸಮಸ್ಯೆಗಳನ್ನು ತಿಳಿಸಲು ಹೆಸ್ಕಾಂ ಕಚೇರಿ ಪ್ರಕಟಣೆ ತಿಳಿಸಿದೆ.