ಕನ್ನಡಪ್ರಭ ವಾರ್ತೆ ಶಿರಾ
ರೈತರ ಮನವಿಗೆ ಸ್ಪಂದಿಸಿದ ನಂಜಾವಧೂತ ಶ್ರೀಗಳು, ಕೇಂದ್ರ ರೈಲ್ವೆ ಸಚಿವ, ತುಮಕೂರು ಸಂಸದ ವಿ. ಸೋಮಣ್ಣರವರನ್ನು ದೂರವಾಣಿ ಮೂಲಕ ಕರೆ ಮಾಡಿ ಮಾತನಾಡಿ, ದೊಡ್ಡ ಅಗ್ರಹಾರ ಗೋಪಾಲದೇವರಹಳ್ಳಿ ಗ್ರಾಮ ಪಂಚಾಯಿತಿಯ ಹಲವಾರು ಕೆರೆಗಳು ತಾರತಮ್ಯ ನೀತಿಯಿಂದ ನೀರಾವರಿ ಯೋಜನೆಯಲ್ಲಿ ವಂಚಿತವಾಗಿದ್ದು, ಕುಡಿಯುವ ನೀರಿಗೂ ಹಾಹಾಕಾರ ಪಡುವಂಥ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ತಕ್ಷಣ ರಾಜ್ಯ ಸರ್ಕಾರದ ಗಮನ ಸೆಳೆದು ಈ ಕೆರೆಗಳನ್ನು ನೀರಾವರಿ ಯೋಜನೆಗೆ ಒಳಪಡಿಸಬೇಕು ಎಂದು ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವ ವಿ. ಸೋಮಣ್ಣ ತಕ್ಷಣ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಜಲಸಂಪನ್ಮೂಲ ಸಚಿವ ಚಲುವರಾಯಸ್ವಾಮಿರವರ ಗಮನಕ್ಕೆ ತಂದು ಎತ್ತಿನಹೊಳೆ, ಹೇಮಾವತಿ ನೀರಾವರಿ ಯೋಜನೆಯಲ್ಲಿ ಕೈ
ಬಿಟ್ಟು ಹೋಗಿರುವ ದೊಡ್ಡ ಅಗ್ರಹಾರ ಮತ್ತು ಗೋಪಾಲದೇವರಹಳ್ಳಿ ಕೆರೆಗಳನ್ನು ಸೇರ್ಪಡೆಗೊಳಿಸಿ ಜನರಿಗೆ ಅನುಕೂಲ ಕಲ್ಪಿಸುವುದಾಗಿ ಭರವಸೆ ನೀಡಿದರು.ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ ಸಿ.ಬಿ ಸುರೇಶ್ ಬಾಬುರವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ ನಂಜಾವಧೂತ ಶ್ರೀಗಳು, ಪ್ರತಿಷ್ಠೆ ಮತ್ತು ವೈಯಕ್ತಿಕ ಕಾರಣಗಳಿಂದ ದೊಡ್ಡ ಅಗ್ರಹಾರ ಮತ್ತು ಗೋಪಾಲದೇವರಹಳ್ಳಿ ಕೆರೆಗಳನ್ನು ನೀರಾವರಿ ಯೋಜನೆಗಳಿಂದ ಕೈ ಬಿಡಲಾಗಿದೆ. ಈ ಬಗ್ಗೆ ತಾವು ತಕ್ಷಣ ಗಮನಹರಿಸಿ ಈ ಭಾಗದ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಶಾಸಕರಿಗೆ ಹೇಳಿದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ರಾಮಕೃಷ್ಣಪ್ಪ, ಪುಟ್ಟರಾಜು, ಯರಮಾದನಹಳ್ಳಿ ಟಿ. ಜಗದೀಶ್, ಆಡಿಟರ್ ನಾಗರಾಜ್ ,ಕೆಂಚಗಾ ನಹಳ್ಳಿ ಹನುಮಂತರಾಯಪ್ಪ, ದೊಡ್ಡ ಅಗ್ರಹಾರ ರಮೇಶ್, ಚನ್ನೇಗೌಡ, ಕುಮಾರ್, ಬಸವರಾಜು, ಕಂಬಯ್ಯ ಸೇರಿದಂತೆ ಹಲವರು ಹಾಜರಿದ್ದರು.