ನೋಂದಣಿ ಕಡಿಮೆ ಕಾರಣ ನೀಡಿ ವಸತಿ ನಿಲಯ ವಿದ್ಯಾರ್ಥಿನಿಯರು ಹೊರಕ್ಕೆ: ಪೋಷಕರಲ್ಲಿ ಆತಂಕ

KannadaprabhaNewsNetwork | Published : Jun 3, 2025 12:50 AM
ನೋಂದಣಿ ಸಂಖ್ಯೆ ಕಡಿಮೆ ಎಂಬ ಕಾರಣಕ್ಕೆ ಶಾಲಾ ವಿದ್ಯಾರ್ಥಿನಿಯರನ್ನು ವಸತಿ ನಿಲಯದಿಂದ ಹೊರ ಹಾಕಿದ್ದು ಪೋಷಕರು ಹಾಗೂ ವಿದ್ಯಾರ್ಥಿನಿಯರು ಆತಂಕಗೊಂಡಿದ್ದಾರೆ. ಶ್ರೀರಂಗಪಟ್ಟಣ ಟೌನ್‌ನಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಯಕ್ಕೆ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ನೋಂದಣಿ ಸಂಖ್ಯೆ ಕಡಿಮೆ ಎಂಬ ಕಾರಣಕ್ಕೆ ಶಾಲಾ ವಿದ್ಯಾರ್ಥಿನಿಯರನ್ನು ವಸತಿ ನಿಲಯದಿಂದ ಹೊರ ಹಾಕಿದ್ದು ಪೋಷಕರು ಹಾಗೂ ವಿದ್ಯಾರ್ಥಿನಿಯರು ಆತಂಕಗೊಂಡಿದ್ದಾರೆ.

ಪಟ್ಟಣದ ಟೌನ್‌ನಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಯಕ್ಕೆ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಜೊತೆಗೆ ಮೆಟ್ರಿಕ್ ನಂತರದ (ಕಾಲೇಜು) ವಿದ್ಯಾರ್ಥಿಗಳನ್ನು ನೋಂದಣಿ ಮಾಡಿಕೊಳ್ಳುವ ಸಲುವಾಗಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ ಎಂಬ ಕಾರಣ ನೀಡಿ ಸುಮಾರು 15 ರಿಂದ 17 ವಿದ್ಯಾರ್ಥಿನಿಯರನ್ನು ತಮ್ಮ ಲಗೇಜು ಸಹಿತ ಹೊರ ಕಳುಹಿಸಿದ್ದಾರೆ. ಇದರಿಂದ ಮುಂದೆ ನಮ್ಮ ಮಕ್ಕಳ ವಿದ್ಯಾಭ್ಯಾಸ ಹೇಗೆ ಎಂಬ ಗೊಂದಲದಲ್ಲಿ ಪೋಷಕರಿದ್ದಾರೆ.

ಪಟ್ಟಣದ ಬಸ್ ನಿಲ್ದಾಣಕ್ಕೆ ಶಾಲೆ ಹಾಗೂ ವಸತಿ ನಿಲಯ ಈ ಎರಡು ಹತ್ತಿರ ಇರುವುದರಿಂದ ಮಂಡ್ಯ ಜಿಲ್ಲೆ ಮಾತ್ರವಲ್ಲದೆ ಮೈಸೂರು, ಕೆ.ಆರ್.ಪೇಟೆ ಸೇರಿದಂತೆ ಸುತ್ತಮುತ್ತಲಿನ ತಾಲೂಕುಗಳಿಂದ ನಮ್ಮ ಮಕ್ಕಳನ್ನು ಇಲ್ಲಿಗೆ ಸೇರಿಸಿದ್ದೇವೆ. ಬಹುತೇಕ ಇಲ್ಲಿನ ಮಕ್ಕಳಿಗೆ ಒಬ್ಬ ಪೋಷಕರೇ ಆಗಿದ್ದು, ಯಾವುದೇ ಸಮಯದಲ್ಲಿ ಬಂದು ಅವರನ್ನು ನೋಡಿ ಮಾತನಾಡಿಸಿಕೊಂಡು ಹೋಗುತ್ತಿದ್ದೆವು.

ಆದರೆ, ತಾಲೂಕಿನಲ್ಲಿ ಎಂಜಿನಿಯರ್ ಕಾಲೇಜುಗಳು ಸೇರಿದಂತೆ ಉನ್ನತ ಮಟ್ಟದ ಕಾಲೇಜುಗಳು ಪ್ರಾರಂಭವಾಗಿದ್ದರಿಂದ ಜಿಲ್ಲೆ ಹಾಗೂ ರಾಜ್ಯದ ಹೊರ ಜಿಲ್ಲೆಗಳಿಂದ ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ದಾಖಲಾಗುತ್ತಿದ್ದಾರೆ. ಕಾಲೇಜು ವಿದ್ಯಾರ್ಥಿಗಳು (ಮೆಟ್ರಿಕ್ ನಂತರದ) ವಸತಿ ನಿಲಯಕ್ಕೆ ಸೇರಿಕೊಳ್ಳಲು ಅರ್ಜಿಗಳ ಸಂಖ್ಯೆ ಹೆಚ್ಚಾಗುತ್ತಿವೆ ಎಂದು ಕಾರಣದಿಂದ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯವನ್ನು ಮೇಲ್ದರ್ಜೆಗೇರಿಸುವ ನೆಪವೊಡ್ಡಿ ಇಲ್ಲಿನ ಶಾಲಾ ವಿದ್ಯಾರ್ಥಿನಿಯರಿಗೆ ತೊಂದರೆಯಾಗುತ್ತಿದೆ ಎಂದು ಪೋಷಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಕಾಲೇಜು ವಿದ್ಯಾರ್ಥಿಗಳು ವಸತಿ ನಿಲಯಕ್ಕೆ ಸೇರಿಕೊಳ್ಳಲು ದಿನೇ ದಿನೇ ಬೇಡಿಕೆ ಹೆಚ್ಚಾದಂತೆ ಶಾಸಕರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದು ಉನ್ನತೀಕರಣಕ್ಕೆ ಒತ್ತಾಯಿಸಿದ್ದಾರೆ. ಆದರೆ, ಸರ್ಕಾರದಿಂದ ಯಾವುದೇ ನಿಖರವಾದ ಆದೇಶ ಬಾರದೆ ಇದ್ದರೂ ಸಹ ಮೆಟ್ರಿಕ್ ಪೂರ್ವ ಬಾಲಕಿಯರನ್ನು ದಾಖಲು ಮಾಡಿಕೊಳ್ಳದೆ ಹೊರ ಕಳುಹಿಸುತ್ತಿದ್ದಾರೆ.

ಮೆಟ್ರಿಕ್ ಪೂರ್ವ ವಸತಿ ನಿಲಯಕ್ಕೆ ವರ್ಷದಿಂದ ವರ್ಷಕ್ಕೆ ದಾಖಲೆಗಳ ಸಂಖ್ಯೆ ಕಡಿಮೆಯಾಗುತ್ತಿರುವ ಜೊತೆಗೆ ಕಾಲೇಜು ವಿದ್ಯಾರ್ಥಿಗಳು ವಸತಿ ನಿಲಯಕ್ಕೆ ಪ್ರವೇಶ ಕೋರಿ ಹೆಚ್ಚಿನ ಅರ್ಜಿ ಸಲ್ಲಿಸುತ್ತಿದ್ದ ಕಾರಣ ಸರ್ಕಾರ ಉನ್ನತೀಕರಿಸುತ್ತಿದೆ. ಇಲ್ಲಿನ ವಸತಿ ನಿಲಯದ ಯಾವುದೇ ವಿದ್ಯಾರ್ಥಿಗಳಿಗೆ ತೊಂದರೆಯಾದ ರೀತಿ ಶ್ರೀರಂಗಪಟ್ಟಣದಲ್ಲಿ ಮತ್ತೊಂದು ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಕಳುಹಿಸಿಕೊಡಲಾಗುವುದು.

ಜೊತೆಗೆ ಪೋಷಕರು ಹಾಗೂ ಸಂಘ, ಸಂಸ್ಥೆಗಳು ಯಥಾಸ್ಥಿತಿ ನೋಡಿಕೊಳ್ಳುವಂತೆ ಮನವಿ ಸಹ ಸಲ್ಲಿಸಿದ್ದಾರೆ. ಈ ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಅವರ ಹಾಗೂ ಸರ್ಕಾರದ ಆದೇಶದಂತೆ ಮುಂದಿನ ಕ್ರಮ ವಹಿಸಲಾಗುವುದು ಎಂದು ತಾಲೂಕು ಪ್ರಭಾರ ಸಮಾಜ ಕಲ್ಯಾಣಾಧಿಕಾರಿ ಕೆ.ಸಿ.ಜ್ಯೋತಿಪ್ರಕಾಶ್ ತಿಳಿಸಿದ್ದಾರೆ.