ಗದಗ: ನಗರದ ಒಕ್ಕಲಗೇರಿ ಓಣಿಯಲ್ಲಿ 12 ವರ್ಷಗಳಿಗೊಮ್ಮೆ ನಡೆಯಬೇಕಿದ್ದ ಗ್ರಾಮದೇವತೆಗಳ ಹರಿ ಜಾತ್ರೋತ್ಸವ ಕೊರೋನಾ ಹಿನ್ನೆಲೆ 6 ವರ್ಷ ತಡವಾಗಿ, 18 ವರ್ಷಗಳ ನಂತರ ಮಂಗಳವಾರ ಅಪಾರ ಜನರ ಭಕ್ತಿಭಾವದ ನಡುವೆ ಜಾತ್ರೆಗೆ ಚಾಲನೆ ದೊರೆಯಿತು.
ಮನೆ, ಮನೆಗಳಲ್ಲಿ ರಂಗೋಲಿ, ತಳಿರು, ತೋರಣಗಳಿಂದ ಅಲಂಕಾರ ಮಾಡಲಾಗಿತ್ತು. ದೇವಿಯರ ದರ್ಶನ ಹಾಗೂ ಪೂಜಾ ಕೈಂಕರ್ಯಗಳಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು. ವಿಶೇಷವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವಿಗೆ ಉಡಿ ತುಂಬಿ, ಅರಿಶಿಣ, ಕುಂಕುಮ ಅರ್ಪಿಸಿ ಕುಟುಂಬದ ಸುಖ, ಶಾಂತಿ, ಆರೋಗ್ಯ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸಿದರು.
ಹರಿ ಜಾತ್ರೆಯ ಅಂಗವಾಗಿ ನಡೆದ ಮಹಾ ಅನ್ನಸಂತರ್ಪಣೆಯಲ್ಲಿ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಜಾತಿ, ಧರ್ಮ ಹಾಗೂ ಸಮಾಜದ ಭೇದವಿಲ್ಲದೆ ವಿವಿಧ ಸಮುದಾಯಗಳ ಜನರು ಜಾತ್ರೆಯ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದು ಗದಗದ ಸಾಂಸ್ಕೃತಿಕ ಸಾಮರಸ್ಯದ ಪ್ರತೀಕವಾಗಿ ಕಂಡುಬಂದಿತು.ಗದಗ- ಬೆಟಗೇರಿ ಗ್ರಾಮದೇವತೆಗಳಾದ ದ್ಯಾಮವ್ವ ಹಾಗೂ ದುರಗಮ್ಮ ದೇವಿಯರ ಹರಿಜಾತ್ರೆ 12 ವರ್ಷಗಳಿಗೊಮ್ಮೆ ನಡೆಯುವ ವಿಶಿಷ್ಟ ಆಚರಣೆಯಾಗಿದೆ. ಈ ಬಾರಿಯ ಹರಿಜಾತ್ರೆ ಆ. 18ರಿಂದ 28ರ ವರೆಗೆ ಒಕ್ಕಲಗೇರಿ ಓಣಿಯ ದ್ಯಾಮವ್ವನ ಕಟ್ಟೆ ಹಾಗೂ ಜೋಡ ಮಾರುತಿ ದೇವಸ್ಥಾನದ ಎದುರಿನ ದ್ಯಾಮಮ್ಮ- ದುರಗಮ್ಮ ದೇವಸ್ಥಾನದಲ್ಲಿ ನಡೆಯಲಿದೆ. ಜಾತ್ರೆಯ ಅಂಗವಾಗಿ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.