ಶಿವಮೊಗ್ಗ: ಚಲನಚಿತ್ರ ಕ್ಷೇತ್ರ ಕರಾವಳಿಗರಂತೆ ಮಲೆನಾಡಿನಲ್ಲಿಯೂ ಉದ್ಯಮವಾಗಿ ಬೆಳೆಯಬೇಕು ಎಂದು ಶಾಖಾಹಾರಿ ಸಿನಿಮಾ ನಿರ್ಮಾಪಕ ರಾಜೇಶ್ ಕೀಳಂಬಿ ಅಭಿಪ್ರಾಯಪಟ್ಟರು.
ಶಾಖಾಹಾರಿ ಸಿನಿಮಾ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಒಂದು ಚಲನಚಿತ್ರ ಅನೇಕ ಜನರಿಗೆ ಉದ್ಯೋಗ ಸೃಷ್ಟಿ ಮಾಡಿಕೊಡಲಿದ್ದು, ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುತ್ತದೆ. ಹಾಗಾಗಿಯೇ ಜನರು ಪೈರೆಸಿಯಂತಹ ಮಾರ್ಗ ಬಳಸದೆ ಚಿತ್ರಮಂದಿರಗಳಿಗೆ ಹೋಗಿ ಚಲನಚಿತ್ರ ನೋಡಬೇಕು ಎಂದು ವಿವರಿಸಿದರು.
ನಟ ಶ್ರೀಹರ್ಷ ಗೋಭಟ್ ಮಾತನಾಡಿ, ಬಹಳ ವರ್ಷಗಳ ಹಿಂದೆ ಸಾಹಿತ್ಯ ಹುಣ್ಣಿಮೆ ವೇದಿಕೆಯಲ್ಲಿ ನಾಟಕ ಪ್ರದರ್ಶನಕ್ಕೆ ಅವಕಾಶ ಮಾಡಿ ನಮ್ಮನ್ನೆಲ್ಲಾ ಪ್ರೋತ್ಸಾಹಿಸಿದ ಕೀರ್ತಿ ಡಿ.ಮಂಜುನಾಥ ಅವರಿಗೆ ಸಲ್ಲಬೇಕು. ನಮ್ಮಂತಹ ಹಲವಾರು ಪ್ರತಿಭೆಗಳಿಗೆ ಅವಕಾಶ ದೊರಕಿಸಿಕೊಡಲು ನೆರವಾಗಿದ್ದಾರೆ ಎಂದು ಸ್ಮರಿಸಿದರು.ಚಲನಚಿತ್ರ ನಿರ್ದೇಶಕ ಸಂದೀಪ್ ಸುಂಕದ್ ಮಾತನಾಡಿ, ಹಲವು ಸಾಹಿತ್ಯ ಹುಣ್ಣಿಮೆಯಲ್ಲಿ ನಾವು ಭಾಗವಾಗಿ ಕೆಲಸ ಮಾಡಿದ್ದೆವು. ಅದೇ ವೇದಿಕೆಯಲ್ಲಿ ಅತಿಥಿಯಾಗಿ ಅಭಿನಂದನೆ ಸ್ವೀಕರಿಸಿದ ಕ್ಷಣ ಸಂತೋಷ ತಂದಿದೆ ಎಂದರು.
ಕಸಾಪ ಜಿಲ್ಲಾ ಅಧ್ಯಕ್ಷ ಡಿ.ಮಂಜುನಾಥ ಅಧ್ಯಕ್ಷತೆವಹಿಸಿದ್ದರು. ಕವಿಗಳಾದ ಧರಣೇಪ್ರೀಯೆ ಕವನ ವಾಚಿಸಿದರು. ನಂದನ್ ಕುಪ್ಪಳಿ ಭಾವರೇಖೆ ಹನಿಗವನ ಸಂಕಲನದಿಂದ ಆಯ್ದ ಹನಿಗವನಗಳನ್ನು ವಾಚಿಸಿದರು. ಕಸಾಸಾಂ ವೇದಿಕೆ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಮಂಜಪ್ಪ ಸ್ವಾಗತಿಸಿ, ಭೈರಾಪುರ ಶಿವಪ್ಪಗೌಡ ವಂದಿಸಿ, ದೀಪ್ತಿ ಶಿವಕುಮಾರ್ ಪ್ರಾರ್ಥಿಸಿ, ಎಸ್.ಶಿವಮೂರ್ತಿ ನಿರೂಪಿಸಿದರು.