- 7 ತಿಂಗಳ ನೀರಿನ ಸಮಸ್ಯೆ ಇತ್ಯರ್ಥ । ಹೊಸದಾಗಿ ಕೊಳವೆಬಾವಿ ಕೊರೆಸಿ, ಸೌರ ಪಂಪ್ಸೆಟ್ ಅಳವಡಿಸಿದ ಆಡಳಿತ
ಕನ್ನಡಪ್ರಭ ವಾರ್ತೆ ಹನೂರುಕುಡಿಯುವ ನೀರಿನ ಸಮಸ್ಯೆ ಬಗ್ಗೆ ಕನ್ನಡಪ್ರಭ ಪ್ರಕಟಿಸಿದ್ದ ವರದಿಗೆ ಕೊನೆಗೂ ಅಧಿಕಾರಿಗಳು ಎಚ್ಚೆತ್ತಿದ್ದಾರೆ. ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯ್ತಿಯ ಇಂಡಿಗನತ್ತ ಗ್ರಾಮ ಬಳಿಯ ಆನೆಗಾಡು ಸೋಲಿಗರ ಹಾಡಿಯಲ್ಲಿ ಕೊನೆಗೂ ಜಲಪ್ರವೇಶವಾಗಿದೆ. ಹೊಸ ಕೊಳವೆ ಬಾವಿ ಕೊರೆಸಿ, ಸೌರ ಪಂಪ್ ಅಳವಡಿಸಿ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿದ್ದಾರೆ.
ಗ್ರಾಮದಲ್ಲಿ ನೀರಿನ ಬರವಾಗಿ ಗ್ರಾಮಸ್ಥರು ಕಿಲೋಮೀಟರ್ ದೂರ ಕ್ರಮಿಸಿ, ಅರಣ್ಯದ ಮಧ್ಯದಲ್ಲಿ ಕಾಡು ಪ್ರಾಣಿಗಳ ಆತಂಕದಲ್ಲಿ ನೀರು ಸಂಗ್ರಹಿಸಿ ಬರುತ್ತಿರುವ ಬಗ್ಗೆ ಮಾ.23ರಂದು ‘ಕುಡಿಯುವ ನೀರಿಗಾಗಿ ಕಾಡಿನಲ್ಲಿ ಜನರ ಪರದಾಟ’ ಶೀರ್ಷಿಕೆಯಡಿ ಕನ್ನಡಪ್ರಭ ವರದಿ ಪ್ರಕಟಿಸಿತ್ತು.ಸೋಲಿಗರ ಹಾದಿಯಲ್ಲಿದ್ದ ಕೊಳವೆಬಾವಿಯ ಸೌರ ಪಂಪ್ಸೆಟ್ ಕಳೆದ 7 ತಿಂಗಳಿ ಹಿಂದೆಯೇ ಕೆಟ್ಟು ಹೋಗಿದ್ದರೂ, ಅಧಿಕಾರಿಗಳು ರಿಪೇರಿ ಮಾಡಿರಲಿಲ್ಲ. ಪರಿಣಾಮ 11 ಕುಟುಂಬಗಳು ಕುಡಿಯುವ ನೀರಿಲ್ಲದೇ ಕಾಡು ಪ್ರಾಣಿಗಳ ಚಲನವಲನವಿರುವ ಕೆಬ್ಬೆಗೆರೆಗೆ ತೆರಳಿ ಕೊಳದಲ್ಲಿ ನೀರು ಸಂಗ್ರಹಿಸಿ, ಕಿಲೋಮೀಟರ್ಗಟ್ಟಲೆ ಕೊಡದಲ್ಲಿ ಹೊತ್ತು ತರಬೇಕಿತ್ತು. ಈ ಕಷ್ಟಕ್ಕೆ ಕೊನೆಗೂ ಅಂತ್ಯವಾಗಿದೆ. ಇಂಡಿಗನತ್ತ ಗ್ರಾಮಕ್ಕೆ ಕೊನೆಗೂ ಗಂಗೆ ಹರಿದುಬಂದಿದೆ.
7 ತಿಂಗಳ ಹಿಂದೆ ಕೆಟ್ಟುನಿಂತಿದ್ದ ಪಂಪ್ಸೆಟ್ ದುರಸ್ತಿಗಾಗಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಎಷ್ಟೇ ಬಾರಿ ದೂರಿತ್ತರೂ ಫಲಿಸಿರಲಿಲ್ಲ. ಆದರೆ ಕನ್ನಡಪ್ರಭ ಈ ಬಗ್ಗೆ ವರದಿ ಪ್ರಕಟಿಸಿದ್ದರಿಂದ ಅಧಿಕಾರಿಗಳು ಎಚ್ಚೆತ್ತು ಕೊಳವೆ ಬಾವಿ ಕೊರೆಸಿದ್ದಾರೆ. ಹೀಗಾಗಿ ಗ್ರಾಮಸ್ಥರು ಕನ್ನಡಪ್ರಭಕ್ಕೆ ಧನ್ಯವಾದ ತಿಳಿಸಿದ್ದಾರೆ.
ಶಾಸಕರು ಹಾಗೂ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಆನೆಗಾಡು ಗ್ರಾಮದಲ್ಲಿ ನೂತನವಾಗಿ ಬೋರ್ವೆಲ್ ಕೊರೆಸಿ, ಪಂಪ್ಸೆಟ್ ಅಳವಡಿಸಲಾಗಿದೆ. ಇದರಿಂದಾಗಿ ಕುಡಿಯುವ ನೀರು ದೊರೆಯಲಿದ್ದು, ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಲಾಗುವುದು.
- ಆನೆಗಾಡು ಗ್ರಾಮದ ಮುಖಂಡ ಮಣಿ ಚಿಕ್ಕಣ್ಣ ಕಾಳೇಗೌಡ ಮಾರಯ್ಯ
2ಸಿಎಚ್ಎನ್53ಕನ್ನಡಪ್ರಭ ವರದಿ ಫಲಶೃತಿಆನೆಗಾಡು ಗ್ರಾಮದಲ್ಲಿ ನೀರಿನ ಸಮಸ್ಯೆ ಬಗ್ಗೆ ಮಾ.23ರಂದು ‘ಕುಡಿಯುವ ನೀರಿಗಾಗಿ ಕಾಡಿನಲ್ಲಿ ಜನರ ಪರದಾಟ’ ಶೀರ್ಷಿಕೆಯಡಿ ಕನ್ನಡಪ್ರಭ ವರದಿ ಪ್ರಕಟಿಸಿತ್ತು.