ಕನ್ನಡಪ್ರಭವಾರ್ತೆ ಚಳ್ಳಕೆರೆ
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸಮಾಜದ ಎಲ್ಲಾ ವರ್ಗಕ್ಕೂ ಆರ್ಥಿಕ ನೆರವು ನೀಡುವ ಮೂಲಕ ಶಕ್ತಿ ತುಂಬಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಹಾಗೂ ಮದ್ಯವರ್ಜನ ಶಿಬಿರದ ಹಿರಿಯ ಅಧಿಕಾರಿ ಕೆ.ಎಂ. ನಾಗರಾಜು ಹೇಳಿದರು.ತಾಲೂಕಿನ ನಾಯಕನಹಟ್ಟಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿಯಲ್ಲಿ ಹಿಂದುಳಿದ ವೃತ್ತಿಪರ ಕೋರ್ಸ್ಗಳ ವಿದ್ಯಾರ್ಥಿಗಳಿಗೆ ಸುಜ್ಞಾನನಿಧಿ ಶಿಷ್ಯ ವೇತನ ಹಾಗೂ ವಿದ್ಯಾಭ್ಯಾಸವನ್ನು ಪೂರೈಸಿದ ವಿದ್ಯಾರ್ಥಿಗಳಿಗೆ ಪ್ರಮಾಣವನ್ನು ಪತ್ರವನ್ನು ವಿತರಿಸಿ ಅವರು ಮಾತನಾಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸಮಾಜದ ಎಲ್ಲಾ ವರ್ಗಕ್ಕೂ ಆರ್ಥಿಕ ನೆರವು ನೀಡುವ ಮೂಲಕ ಶಕ್ತಿ ತುಂಬಿದೆ. ರೈತರು, ವಿದ್ಯಾರ್ಥಿಗಳು, ಮಹಿಳೆಯರು, ಕೂಲಿಕಾರ್ಮಿಕರು, ಪುರಾತನ ದೇವಸ್ಥಾನಗಳ ಜೀರ್ಣೋದ್ಧಾರ ಹೀಗೆ ಹಲವಾರು ಪ್ರಗತಿಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿರುವುದು ಸಂತಸ ತಂದಿದೆ ಎಂದರು.ಜಿಲ್ಲಾ ಯೋಜನಾ ನಿರ್ದೇಶಕ ಜನಾರ್ಧನ್ ಮಾತನಾಡಿ, ಪ್ರಾರಂಭದ ಹಂತದಲ್ಲಿ ಪೂಜ್ಯರ ಮಾರ್ಗದರ್ಶನದಲ್ಲಿ ಮಹಿಳಾ ಶಕ್ತಿ ಸಂಘಗಳ ಸ್ಥಾಪನೆ ಮಾಡಿ ಕ್ರಿಯಾಶೀಲ ಚಟುವಟಿಕೆಗೆ ಆದ್ಯತೆ ನೀಡಲಾಯಿತು. ವಿದ್ಯಾರ್ಥಿಗಳು, ರೈತರು ಹಾಗೂ ಕೂಲಿಕಾರ್ಮಿಕರಿಗೂ ಸಹ ವಿವಿಧ ಯೋಜನೆಯಲ್ಲಿ ಆರ್ಥಿಕ ಸಹಾಯ ಪಡೆದರು ಎಂದರು.
ಇಡೀ ಬದುಕನ್ನೇ ಬೀದಿಗೆ ತರುತ್ತಿದ್ದ ಕುಡಿತದ ಚಟವನ್ನು ಬಿಡಿಸಲು ಮದ್ಯವರ್ಜನ ಶಿಬಿರವನ್ನು ಎಲ್ಲೆಡೆ ಹಮ್ಮಿಕೊಳ್ಳಲಾಯಿತು. ಸಾವಿರಾರು ಜನರು ಕುಡಿತದಿಂದ ವಿಮುಕ್ತಿ ಪಡೆದು ನೆಮ್ಮದಿಯ ಬದುಕು ನಡೆಸುವಂತಾಗಿದೆ. ಇಂತಹ ಬದಲಾವಣೆಯಿಂದ ಬದುಕು ಸಾರ್ಥಕತೆಯತ್ತ ತೆರಳುತ್ತದೆ ಎಂದರು.ಕಾರ್ಯಕ್ರಮದಲ್ಲಿ ನೇತಾಜಿ ಪ್ರಸನ್ನ, ತಾಲೂಕು ಯೋಜನಾಧಿಕಾರಿ ಶಶಿಕಲಾ, ವೀರಶೈವ ಸಮಾಜದ ಹಿರಿಯ ಮುಖಂಡ ಪ್ರಕಾಶ್, ನಾಯಕನಹಟ್ಟಿ ಯೋಜನಾಧಿಕಾರಿ ಅಣ್ಣಪ್ಪ, ತಾಲೂಕು ನೋಡಲ್ ಅಧಿಕಾರಿ ಪ್ರವೀಣ್, ಮೇಲ್ವಿಚಾರಕ ಚೇತನ್ ಮುಂತಾದವರು ಉಪಸ್ಥಿತರಿದ್ದರು.