ಕನ್ನಡಪ್ರಭ ವಾರ್ತೆ ಇಂಡಿ
ನಗರದ ಸಿಂದಗಿ ರಸ್ತೆಯಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಬೆಳೆ ವಿಮೆ ತುಂಬಿದ ರೈತರಿಗೆ ಇದುವರೆಗೂ ಪರಿಹಾರ ಮೊತ್ತ ಜಮೆ ಆಗಿಲ್ಲ. ಅಕಾಲಿಕ ಮಳೆಯಿಂದಾಗಿ ಜಿಲ್ಲಾದ್ಯಂತ ರೈತರ ಎಲ್ಲ ಬೆಳೆಗಳು ಸಂಪೂರ್ಣ ಹಾಳಾಗಿ ಹೋಗಿದ್ದು, ಈ ಕೂಡಲೇ ವಿಮಾ ಮೊತ್ತ ಜಮಾ ಮಾಡಲು ಸರ್ಕಾರ ಮುಂದಾಗಬೇಕು. ಇಲ್ಲವಾದರೆ 15 ದಿನಗಳ ನಂತರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈಗಾಗಲೇ ಕಲಬುರಗಿ, ಬೀದರ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ಬೆಳೆ ವಿಮಾಮೊತ್ತ ರೈತರ ಖಾತೆಗೆ ಜಮೆ ಮಾಡಲಾಗಿದೆ. ಆದರೆ ನಮ್ಮ ಜಿಲ್ಲೆಯಲ್ಲಿ ಇದುವರೆಗೂ ಒಬ್ಬ ರೈತರಿಗೂ ಪರಿಹಾರ ಮೊತ್ತ ಜಮೆ ಆಗಿಲ್ಲ ಎಂದು ತಿಳಿಸಿದರು.ನರೇಗಾ ಹೆಸರು ಬದಲಾವಣೆ ಮಾಡಿದ್ದಕ್ಕೆ ಕಾಂಗ್ರೆಸ್ ಪಕ್ಷದವರು ಸಾಕಷ್ಟು ಹೋರಾಟ ನಡೆಸುತ್ತಿದ್ದಾರೆ. ನರೇಗಾದಲ್ಲಿ ಏನೆಲ್ಲ ಬದಲಾವಣೆ ಆಗಿದೆ ಎಂಬುದರ ಕುರಿತು ಕೂಲಂಕುಷವಾಗಿ ವೀಕ್ಷಿಸಿ ಹೋರಾಟ ಮಾಡಿ, ಏಕೆಂದರೆ ಈ ಮೊದಲು 100 ದಿನ ಇದ್ದದ್ದನ್ನು 125 ದಿನಕ್ಕೆ ಏರಿಕೆ ಮಾಡಲಾಗಿದೆ. ಈ ಮೊದಲು ಪ್ರತಿಶತ 100 ರಷ್ಟು ಅನುದಾನವನ್ನೂ ಕೇಂದ್ರ ಸರ್ಕಾರ ನೀಡುತ್ತಿದ್ದು, ಆ ಯೋಜನೆಯ ಬಗ್ಗೆ ಕಾಳಜಿ ವಹಿಸಲು ರಾಜ್ಯ ಸರ್ಕಾರಗಳು ನಿರಾಕರಿಸಿದ್ದವು. ಹೀಗಾಗಿ ರಾಜ್ಯದ 40 ಪ್ರತಿಶತ ಅನುದಾನ ನೀಡಿದರೆ ಅವರಿಗೂ ಆ ಯೋಜನೆಯ ಬಗ್ಗೆ ಕಳಕಳಿ ಇರುತ್ತದೆ ಎಂಬ ಆಶಯದೊಂದಿಗೆ ಯೋಜನೆ ಜಾರಿ ಮಾಡಲಾಗಿದೆ ಎಂದರು.
ಬೆಂಗಳೂರು ಭಾಗದಲ್ಲಿ ತಾಲೂಕಿಗೆ ಒಂದು ಹಾಪ್ಕಾಮ್ಸ್ ಮಳಿಗೆಯನ್ನು ಸರ್ಕಾರದಿಂದಲೇ ತೆರೆಯಲಾಗಿದೆ. ಇದರಿಂದ ರೈತರು ನೇರವಾಗಿ ಹಾಪ್ಕಾಮ್ಸ್ ಮೂಲಕ ತಮ್ಮ ತರಕಾರಿ ಬೆಳೆಗಳನ್ನು ಇತರೆಡೆ ಸಾಗಿಸಲು ಅನುಕೂಲವಾಗುತ್ತದೆ. ಆದ್ದರಿಂದ ನಮ್ಮ ಭಾಗದಲ್ಲಿಯೂ ಒಂದು ಹಾಪ್ಕಾಮ್ಸ್ ಮಳಿಗೆ ತೆರೆಯಬೇಕೆಂದು ಆಗ್ರಹಿಸಿದರು.ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ ಮಾತನಾಡಿ, ತಾಲೂಕಿನಾದ್ಯಂತ ಎಲ್ಲ ರಸ್ತೆಗಳು ಹದಗೆಟ್ಟಿವೆ. ರೈತರಿಗೆ ವಿಮಾ ಮೊತ್ತ ಜಮೆ ಆಗಿಲ್ಲ. ಹೋರಾಟ ಮಾಡಿದಾಗ ಕಬ್ಬಿಗೆ ದರ ನಿಗದಿ ಮಾಡಲಾಗಿದೆ. ನಿಂಬೆಗೂ ದರ ನಿಗದಿ ಮಾಡುವಂತೆ ಹೋರಾಟ ಮಾಡಲಾಗುತ್ತಿದೆ. ಶೀಘ್ರದಲ್ಲಿಯೇ ವಿವಿಧ ಸಮಸ್ಯೆಗಳ ಇತ್ಯರ್ಥಕ್ಕಾಗಿ ಹೋರಾಟ ನಡೆಸುತ್ತೇವೆ ಎಂದರು.
ಅನೀಲ ಜಮಾದಾರ, ಮಲ್ಲಿಕಾರ್ಜುನ ಕಿವುಡೆ, ದೇವೆಂದ್ರ ಕುಂಬಾರ, ಸಂತೋಷ ಪಾಟೀಲ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.