* ಡಿವೈಎಸ್ಪಿ ಕೌಶಿಕ್ ಭೇಟಿಯಾಗಿ ಸಾಗರ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ನಿಯೋಗದಿಂದ ಆಗ್ರಹ
ಸಾಗರ ಹಾಗೂ ಸೊರಬ ಭಾಗದಲ್ಲಿ ಅಡಕೆ ಕಳ್ಳತನ ಹೆಚ್ಚಾಗುತ್ತಿದ್ದು, ಇದರ ತಡೆಗೆ ಕ್ರಮ ಕೈಗೊಳ್ಳಬೇಕು ಎಂದು ಸಾಗರ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ನಿಯೋಗ ಶಿಕಾರಿಪುರ ಆರಕ್ಷಕ ಉಪ ಅಧೀಕ್ಷಕ (ಡಿವೈಎಸ್ಪಿ) ರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.
ಸಂಘದ ವ್ಯಾಪ್ತಿಗೆ ಒಳಪಡುವ ಸಾಗರ, ಸೊರಬ ಭಾಗಗಳಲ್ಲಿ ಅಡಕೆ ಕಳ್ಳತನದಿಂದ ಬೆಳೆಗಾರರು ತೀವ್ರ ಆತಂಕಕ್ಕೆ ಸಿಲುಕಿದ್ದಾರೆ. ತಕ್ಷಣ ಅಡಕೆ ಕಳ್ಳರನ್ನು ಪತ್ತೆ ಹಚ್ಚಬೇಕು. ರಾತ್ರಿಗಸ್ತು ಹೆಚ್ಚಿಸಬೇಕು ಮತ್ತು ವಶಪಡಿಸಿಕೊಂಡ ಅಡಕೆಯನ್ನು ಬೆಳೆಗಾರರಿಗೆ ಹಿಂದಿರುಗಿಸಬೇಕು ಎಂದು ನಿಯೋಗ ಒತ್ತಾಯಿಸಿತು.ಬೆಳೆಗಾರರು ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಫಸಲು ಕಳ್ಳರ ಪಾಲಾಗುತ್ತಿದೆ. ಬೆಳೆಗಾರರು ತಮ್ಮ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳುವುದೇ ಸವಾಲು ಎನ್ನುವ ಸ್ಥಿತಿ ನಿರ್ಮಾಣವಾಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಶಿಕಾರಿಪುರ ಉಪ ಆರಕ್ಷಕ ಅಧೀಕ್ಷಕ ಕೌಶಿಕ್ ಬೆಳೆಗಾರರ ಸಮಸ್ಯೆಗೆ ಪೂರಕವಾಗಿ ಸ್ಪಂದಿಸುವ ಜೊತೆಗೆ ಸೊರಬ ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಅಡಕೆ ಕಳ್ಳತನವಾಗದಂತೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್, ಕಾರ್ಯದರ್ಶಿ ರಾಜೇಂದ್ರ ಖಂಡಿಕಾ, ಕಟ್ಟಿನಕೆರೆ ಸೀತಾರಾಮಯ್ಯ, ನಾಗಾನಂದ, ವೆಂಕಟೇಶ್ ಮೂಡಗೋಡು, ಅಣ್ಣಪ್ಪ, ಲಕ್ಷ್ಮೀನಾರಾಯಣ ಮುಂಡಿಗೆಸರ, ರಾಜಶೇಖರ ಹಂದಿಗೋಡು ಇನ್ನಿತರರಿದ್ದರು.