ಹಾನಗಲ್ಲ: ಪ್ರತಿದಿನ ೮೦೦ಕ್ಕೂ ಅಧಿಕ ಹೊರರೋಗಿಗಳಿಂದ ತುಂಬಿ ತುಳುಕುತ್ತಿದ್ದ ಹಾನಗಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರದವರೆಗೆ ಯಾವುದೇ ಚಿಕಿತ್ಸೆ ಇರುವುದಿಲ್ಲ. ಅಲ್ಲಿಯವರೆಗೆ ತಾಲೂಕಿನ ಅಕ್ಕಿಆಲೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ವ್ಯವಸ್ಥೆ ಕೈಗೊಳ್ಳಲಾಗಿದೆ. ಬೆಂಕಿ ಅನಾಹುತಕ್ಕೊಳಗಾದ ಸರ್ಕಾರಿ ಆಸ್ಪತ್ರೆಯಲ್ಲಿ ತನಿಖಾ ತಂಡ ಭಾನುವಾರ ತನಿಖೆಗೆ ಒಳಪಡಿಸಿದೆ.ವಿದ್ಯುತ್ ಅವಘಡದಿಂದ ಬೆಂಕಿ ಅನಾಹುತ ಸಂಭವಿಸಿದೆ ಎನ್ನುವ ಸರ್ಕಾರಿ ಆಸ್ಪತ್ರೆಯಲ್ಲಿ ಪೂರ್ಣ ಪ್ರಮಾಣದ ವಿದ್ಯುತ್ ವ್ಯವಸ್ಥೆಯ ಪರಿಶೀಲನೆ ಹಾಗೂ ಕಟ್ಟಡದ ಪರಿಶೀಲನೆ ಪೂರ್ಣಗೊಳ್ಳುವವರೆಗೆ ಇಲ್ಲಿ ಯಾವುದೇ ರೋಗಿಗಳಿಗೆ ಚಿಕಿತ್ಸೆ ಇಲ್ಲದಂತಾಗಿದೆ. ಭಾನುವಾರ ಬೆಳಗ್ಗೆ ಆಸ್ಪತ್ರೆಯನ್ನು ಪರಿಶೀಲನಾ ತಂಡ ತಪಾಸಣೆ ಮಾಡಿದ್ದು, ಸಂಪೂರ್ಣ ವರದಿಗಾಗಿ ಕಾಯಲಾಗುತ್ತಿದೆ. ಶೀಘ್ರ ಲೋಕೋಪಯೋಗಿ ಇಲಾಖೆಯ ತಂಡವೂ ಅಗ್ನಿ ಅನಾಹುತಕ್ಕೊಳಗಾದ ಆಸ್ಪತ್ರೆಯ ಕಟ್ಟಡದ ಸಾಮರ್ಥ್ಯದ ಕುರಿತು ಪರಿಶೀಲನೆ ಕೈಗೊಳ್ಳಲಿದೆ. ಬುಧವಾರದ ಒಳಗಾಗಿ ಆಸ್ಪತ್ರೆಯ ರೋಗಿಗಳಿಗೆ ಅಗತ್ಯವಿರುವ ಔಷಧಿ ಹಾಗೂ ಇತರ ಸಾಮಗ್ರಿಗಳನ್ನು ತರಿಸಿಕೊಳ್ಳುವ ಯತ್ನ ಕೈಗೊಂಡಿದ್ದೇವೆ. ಈಗಾಗಲೇ ಆಸ್ಪತ್ರೆಯ ಸ್ವಚ್ಛತಾ ಕಾರ್ಯ ಆರಂಭವಾಗಿದ್ದು, ಇದರೊಂದಿಗೆ ಇಈ ಆಸ್ಪತ್ರೆಯ ವಿದ್ಯುತ್ ವ್ಯವಸ್ಥೆಯನ್ನು ಪರಿಶೀಲಿಸುವ ಕಾರ್ಯವೂ ನಡೆದಿದೆ. ಆಸ್ಪತ್ರೆಯಲ್ಲಿರುವ ೧೧ ವೈದ್ಯರೂ ಸೇರಿದಂತೆ ೯೦ ಸಿಬ್ಬಂದಿಗಳು ತಮ್ಮ ಕರ್ತವ್ಯವನ್ನು ಅಕ್ಕಿಆಲೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ನಿರ್ವಹಿಸಲು ಆದೇಶಿಸಲಾಗಿದೆ. ಈ ಕುರಿತು ವಿವರ ನೀಡಿದ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಅಖಿಲೇಶ್ ಮಾಳೋದೆ, ಈ ಆಸ್ಪತ್ರೆಯ ಸುವ್ಯವಸ್ಥೆಗಾಗಿ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ. ತುರ್ತಾಗಿ ಅಗತ್ಯವಿರುವ ಔಷಧಿ, ಚುಚ್ಚುಮದ್ದುಗಳು ಸೇರಿದಂತೆ ತುರ್ತು ಆರೋಗ್ಯ ಚಿಕಿತ್ಸಾ ಸಲಕರಣೆಗಳನ್ನು ಕಳಿಸಿಕೊಡುವಂತೆ ಮೇಲಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಶನಿವಾರ ಜಿಲ್ಲಾ ವೈದ್ಯಾಧಿಕಾರಿಗಳು ಖುದ್ದಾಗಿ ಆಸ್ಪತ್ರೆಗೆ ಭೇಟಿ ನೀಡಿ ವಾಸ್ತವದ ಪರಿಶೀಲನೆ ನಡೆಸಿದ್ದಾರೆ. ಇದು ತಾಲೂಕು ಕೇಂದ್ರದ ೧೦೦ ಹಾಸಿಗೆಗಳ ಆಸ್ಪತ್ರೆಯಾಗಿರುವುದರಿಂದ ಅತಿಶೀಘ್ರವಾಗಿ ಅಗತ್ಯವಿರುವ ವೈದ್ಯಕೀಯ ಸಾಮಗ್ರಿಗಳು ಒಂದೆರಡು ದಿನಗಳಲ್ಲಿ ಲಭ್ಯವಾಗುವ ವಿಶ್ವಾಸವಿದೆ. ಎಲ್ಲ ವ್ಯವಸ್ಥೆ ಸರಿಪಡಿಸಿಕೊಂಡು ಬುಧವಾರದಿಂದ ಎಂದಿನಂತೆ ಆಸ್ಪತ್ರೆಯನ್ನು ರೋಗಿಗಳ ಸೇವೆಗೆ ತೆರೆದುಕೊಳ್ಳಲಿದೆ ಎಂದು ಡಾ.ಅಖಿಲೇಶ್ ಮಾಳೋದೆ ತಿಳಿಸಿದರು.