ಹೊಸಪೇಟೆ: ರಸ್ತೆ ಅಪಘಾತ, ಬೆಂಕಿ ಅವಘಡದಂತಹ ತುರ್ತು ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸೆಯಿಂದ ಅಪಾಯದಲ್ಲಿರುವವರ ಪ್ರಾಣ ಉಳಿಸಬಹುದಾಗಿದೆ. ಚಿಕಿತ್ಸೆಯ ಬಗ್ಗೆ ತಿಳಿವಳಿಕೆ ಇರುವವರು, ಚಿಕಿತ್ಸೆ ನೀಡಲು ಕಾನೂನಿನಲ್ಲಿ ಅವಕಾಶವಿದೆ ಎಂದು ತುರ್ತು ಚಿಕಿತ್ಸಾ ತಜ್ಞ ಡಾ. ಶಬ್ಬೀರ್ ಅಹ್ಮದ್ ಹೇಳಿದರು.
ರಸ್ತೆ ಅಪಘಾತ, ಆತ್ಮಹತ್ಯೆ ಯತ್ನ, ಹೃದಯಾಘಾತ, ಬೆಂಕಿ ಅವಘಡ, ಹಾವು, ನಾಯಿ ಕಡಿತ ಮುಂತಾದ ತುರ್ತು ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸೆಯಿಂದ ಜೀವಗಳನ್ನು ಉಳಿಸಬಹುದು. ಈ ಬಗ್ಗೆ ತಿಳಿವಳಿಕೆ ಇರುವವರು ನಿರ್ಭಯವಾಗಿ ಚಿಕಿತ್ಸೆ ನೀಡಲು ಕಾನೂನಿನಲ್ಲಿ ಅವಕಾಶವಿದೆ. ಸಹಾಯ ಮಾಡುವವರಿಗೆ ಕಾನೂನಿನಲ್ಲಿ ರಕ್ಷಣೆ ಇದೆ. ಒಳ್ಳೆಯ ಉದ್ದೇಶದಿಂದ ಪ್ರಥಮ ಚಿಕಿತ್ಸೆ ನೀಡಿದವರಿಗೆ ಪೊಲೀಸರು ವಿಚಾರಣೆ ನೆಪದಲ್ಲಿ ಕಿರುಕುಳ ನೀಡುವಂತಿಲ್ಲ. ಹೆಸರು, ವಿಳಾಸ ಪಡೆದು ಕಳುಹಿಸಬೇಕು ಎಂಬುದು ಸುಪ್ರೀಂ ಕೋರ್ಟ್ ಆದೇಶದಲ್ಲಿದೆ ಎಂದರು.
ರಸ್ತೆ ಅಪಘಾತದಲ್ಲಿ ರಕ್ತ ಸ್ರಾವವಾಗುತ್ತಿದ್ದರೆ ಶುದ್ಧ ಬಟ್ಟೆಯಿಂದ ಒತ್ತಿ ಹಿಡಿಯಬೇಕು. ಕುತ್ತಿಗೆ, ಬೆನ್ನುಮೂಳೆ ಪೆಟ್ಟು, ಅನುಮಾನವಿದ್ದರೆ ರೋಗಿಯನ್ನು ಅಲ್ಲಾಡಿಸಬಾರದು. ನೀರಿನಲ್ಲಿ ಮುಳುಗಿದವರನ್ನು ಮೇಲೆತ್ತಿದ ಕೂಡಲೇ ಉಸಿರಾಟ ಪರೀಕ್ಷಿಸಿ ಸಿಪಿಆರ್ ಆರಂಭಿಸಬೇಕು. ಹಾವು ಕಡಿದರೆ ಬಿಗಿಯಾಗಿ ಕಟ್ಟಬಾರದು, ಬ್ಲೇಡ್ನಿಂದ ಕೊಯ್ಯಬಾರದು. ನಾಯಿ ಕಡಿತಕ್ಕೆ 15 ನಿಮಿಷ ಸೋಪು ನೀರಿನಲ್ಲಿ ತೊಳೆಯಬೇಕು ಎಂದು ಸಲಹೆ ನೀಡಿದರು.ಗೃಹರಕ್ಷಕರಿಗೆ ‘ಹ್ಯಾಂಡ್ಸ್ ಓನ್ಲಿ ಸಿಪಿಆರ್’ ತರಬೇತಿ ನೀಡಲಾಯಿತು. .
ಆರಂಭದಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನ ಜಯಂತಿ ಆಚರಿಸಲಾಯಿತು. ಮಲ್ಲಮ್ಮನ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಸುಮಾರು 150 ಗೃಹರಕ್ಷಕರು ಶಿಬಿರದಲ್ಲಿ ಭಾಗಿಯಾಗಿದ್ದರು.