ಪೋಕ್ಸೋ ಕಾಯಿದೆ ಜಾಗೃತಿ, ಸಂವಿಧಾನದ ಮಹತ್ವ-ಸಂರಕ್ಷಣೆ ಬಗ್ಗೆ ಮಾಹಿತಿ ಕಾರ್ಯಕ್ರಮ
ಸಂವಿಧಾನ ನಮಗೆ ಕೊಟ್ಟಿರುವ ಹಕ್ಕುಗಳನ್ನು ಅರಿತುಕೊಳ್ಳುವುದು ನಮ್ಮ ಮೊದಲ ಕರ್ತವ್ಯ ಆಗಬೇಕು ಎಂದು ಮುಂಡಗೋಡ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶೆ ಸಿ.ಆರ್. ಅಕ್ಷತಾ ಹೇಳಿದರು.
ಪಟ್ಟಣದ ನೆಹರು ನಗರ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಸಂವಿಧಾನ ಸಂರಕ್ಷಕರ ಪಡೆ, ತಾಲೂಕಾ ಉಚಿತ ಕಾನೂನು ನೆರವು ಪ್ರಾಧಿಕಾರ ಮುಂಡಗೋಡ, ಸಾಧನಾ ಮಹಿಳಾ ಸಾಂತ್ವನ ಕೇಂದ್ರ ಮುಂಡಗೋಡ, ಕನ್ನಡ ಸಾಹಿತ್ಯ ಪರಿಷತ್ತು ಮುಂಡಗೋಡ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಾನವ ದಿನಾಚರಣೆಯ ಅಂಗವಾಗಿ ಯುವತಿಯರಿಗೆ ಪೋಕ್ಸೋ ಕಾಯಿದೆ ಜಾಗೃತಿ ಮತ್ತು ಸಂವಿಧಾನದ ಮಹತ್ವ ಹಾಗೂ ಸಂರಕ್ಷಣೆ ಬಗ್ಗೆ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪ್ರತಿಯೊಬ್ಬರು ಕೂಡ ಮಾನವ ಹಕ್ಕುಗಳ ಮತ್ತು ಮೂಲಭೂತ ಹಕ್ಕು ಅರಿತು ಬದುಕನ್ನು ರೂಪಿಸುವ ಪ್ರಯತ್ನ ಮಾಡಬೇಕು ಎಂದರು.
ಮಹಿಳಾ ಸಾಂತ್ವನ ಕೇಂದ್ರ ಮುಖ್ಯಸ್ಥೆ ಡಾ. ಇಸಬೆಲಾ ಝೇವಿಯರ್, ಸಂವಿಧಾನದ ಪಿಠೀಕೆಯನ್ನು ವಿವರಿಸುತ್ತಾ ಭಾರತವು ಸುಂದರ ಮನಗಳ, ಹಲವಾರು ಧರ್ಮ ಮತ್ತು ಜಾತಿಯಿಂದ ಕೂಡಿದ ವಿಭಿನ್ನತೆಯಲ್ಲಿ ಐಕ್ಯತೆ ಸಾರುವ ದೇಶವಾಗಿದೆ. ಈ ದೇಶದ ಧರ್ಮ ಗ್ರಂಥ ಸಂವಿಧಾನವಾಗಿದೆ. ಇಂದು ಸಂವಿಧಾನದಿಂದಲೇ ನಾವೆಲ್ಲ ಇಲ್ಲಿ ಒಂದಾಗಿದೇವೆ ಎಂದರು.