ಗನ್ ತೋರಿಸಿ 5- 6 ಕೆ.ಜಿ. ಚಿನ್ನಾಭರಣ, ವಜ್ರಾಭರಣ ದರೋಡೆ

KannadaprabhaNewsNetwork |  
Published : Dec 29, 2025, 01:15 AM IST
50 | Kannada Prabha

ಸಾರಾಂಶ

ಕರ್ತವ್ಯದಲ್ಲಿದ್ದ ಎಲ್ಲಾ 18 ಸಿಬ್ಬಂದಿಗೆ ಹ್ಯಾಂಡ್ಸ್ ಅಪ್ ಮಾಡಿಸಿದ್ದಾರೆ. ದರೋಡೆಕೋರರ ಪೈಕಿ ಇಬ್ಬರು ಚಿನ್ನಾಭರಣಗಳನ್ನು ಬ್ಯಾಗಿನಲ್ಲಿ ತುಂಬಿಸಿದ್ದಾರೆ

ಕನ್ನಡಪ್ರಭ ವಾರ್ತೆ ಹುಣಸೂರು

ಹುಣಸೂರಿನ ಬೈಪಾಸ್ ರಸ್ತೆಯಲ್ಲಿನ ಸ್ಕೈ ಗೋಲ್ಡ್ ಆ್ಯಂಡ್ ಡೈಮಂಡ್ ಚಿನ್ನಾಭರಣ ಶೋ ರೂಂನಲ್ಲಿ ಹಾಡಹಗಲೇ ದರೋಡೆಕೋರರು ಸಿಬ್ಬಂದಿಗೆ ಗನ್ ತೋರಿಸಿ 5- 6 ಕೆ.ಜಿ.ಯಷ್ಟು ಚಿನ್ನಾಭರಣಗಳು ಮತ್ತು ವಜ್ರಾಭರಣಗಳನ್ನು ದರೋಡೆ ಮಾಡಿರುವ ಘಟನೆ ಭಾನುವಾರ ಮಧ್ಯಾಹ್ನ 12.30ಕ್ಕೆ ನಡೆದಿದೆ.

ಎರಡು ಬೈಕಿನಲ್ಲಿ ಆಗಮಿಸಿದ ಐವರು ದರೋಡೆಕೋರರು ಈ ಕೃತ್ಯ ಎಸಗಿದ್ದಾರೆ. ಪ್ರತಿಯೊಬ್ಬರ ಕೈಯಲ್ಲೂ ಗನ್ ಇತ್ತು ಎನ್ನಲಾಗಿದೆ. ಒಬ್ವ ಹೆಲ್ಮೆಟ್ ಧರಿಸಿದ್ದರೆ, ಮಿಕ್ಕವರು ಮಳಿಗೆಯೊಳಗೆ ಬಂದ ನಂತರ ಮಾಸ್ಕ್ ಧರಿಸಿದ್ದಾರೆ. ಮಳಿಗೆಯ ವ್ಯವಸ್ಥಾಪಕ ಅಜ್ಗರ್ ಊಟಕ್ಕೆ ತೆರಳಿದ್ದ ವೇಳೆ ಬಂದಿದ್ದ ದರೋಡೆಕೋರರು ಮಳಿಗೆಯಲ್ಲಿ ಚಿನ್ನ ಖರೀದಿಸುತ್ತಿದ್ದ ಗ್ರಾಹಕರನ್ನು ಸುಮ್ಮನೆ ಕೂರಲು ತಿಳಿಸಿದ್ದಾರೆ.

ನಂತರ ಕರ್ತವ್ಯದಲ್ಲಿದ್ದ ಎಲ್ಲಾ 18 ಸಿಬ್ಬಂದಿಗೆ ಹ್ಯಾಂಡ್ಸ್ ಅಪ್ ಮಾಡಿಸಿದ್ದಾರೆ. ದರೋಡೆಕೋರರ ಪೈಕಿ ಇಬ್ಬರು ಚಿನ್ನಾಭರಣಗಳನ್ನು ಬ್ಯಾಗಿನಲ್ಲಿ ತುಂಬಿಸಿದ್ದಾರೆ. ದರೋಡೆಕೋರರು ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಮಾತನಾಡುತ್ತಿದ್ದರು ಎನ್ನಲಾಗಿದೆ. ಕ್ಷಣಮಾತ್ರದಲ್ಲಿ ಚಿನ್ನಾಭರಣಗಳನ್ನು ತುಂಬಿಕೊಂಡ ದರೋಡೆಕೋರರು ಮಳಿಗೆಯಿಂದ ತೆರಳುವಾಗ ಒಬ್ಬ ಗಾಳಿಯಲ್ಲಿ ಒಂದು ಗುಂಡು ಹಾರಿಸಿದ್ದಾನೆ. ಎರಡೂ ಬೈಕುಗಳು ಮೈಸೂರು ರಸ್ತೆ ಕಡೆ ತೆರಳಿದವು. ಕಣ್ಣುಮುಚ್ಚಿ ತೆರೆಯುವುದರೊಳಗೆ ದರೋಡೆ ನಡೆದಿರುವುದು ನಾಗರಿಕರಲ್ಲಿ ಆತಂಕ ಮೂಡಿಸಿದೆ.

ಬಸ್ ನಿಲ್ದಾಣದ ಮುಂಭಾಗವೇ ದರೋಡೆ

ಕೋಟಿಗಟ್ಟಲೆ ಚಿನ್ನಾಭರಣ ದರೋಡೆಯಾಗಿರುವ ಈ ಪ್ರಕರಣ ಕೇಳಿದ ನಾಗರಿಕರು ಶಾಕ್ ಆಗಿದ್ದಾರೆ. ಮೈಸೂರು-ಮಡಿಕೇರಿಯ ಹೆದ್ದಾರಿ ಬೈಪಾಸ್ ಇದಾಗಿದ್ದು, ಮಳಿಗೆಯು ಬೈಪಾಸ್ ರಸ್ತೆಯ ಮೂಲಕ ಬಸ್‌ ನಿಲ್ದಾಣ ಪ್ರವೇಶಿಸುವ ಮುಖ್ಯದ್ವಾರದ ಬಳಿಯೇ ಇದೆ. ತಿಂಗಳ ಕೊನೆಯ ಭಾನುವಾರ ಹುಣಸೂರು ದಿನಸಿ ಅಂಗಡಿಗಳು ಬಂದ್ ಆಗಿರುತ್ತವೆ. ಜನ ಓಡಾಟವೂ ಕಡಿಮೆ ಇತ್ತು. ಬೈಪಾಸ್ ರಸ್ತೆಯಲ್ಲಿ ವಾಹನ ಸಂಚಾರ ಕಡಿಮೆಯಿತ್ತು. ಈ ಎಲ್ಲಾ ವಿಷಯಗಳನ್ನು ಗಮನಿಸಿರುವ ದರೋಡೆಕೋರರು, ಸಂಚು ರೂಪಿಸಿ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ.

ಈ ವಿಚಾರ ತಿಳಿದು ದಕ್ಷಿಣ ವಲಯದ ಡಿಐಜಿ ಡಾ.ಎಂ.ಬಿ. ಬೋರಲಿಂಗಯ್ಯ ಮತ್ತು ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಶ್ವಾನದಳ ಅತ್ತಿಂದಿತ್ತ ಸುತ್ತಾಡಿ ತೆರಳಿದರೆ, ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದರು. ಈ ವೇಳೆ ಎಸ್ಪಿ ಎನ್. ವಿಷ್ಣುವರ್ಧನ್, ಡಿವೈಎಸ್ಪಿ ರವಿ, ಇನ್ಸ್‌ ಪೆಕ್ಟರ್ ಸಂತೋಷ್ ಕಶ್ಯಪ್ ಮತ್ತು ಸಿಬ್ಬಂದಿ ಇದ್ದರು.

----

ಬಾಕ್ಸ್...

5 ತಂಡಗಳ ರಚನೆ

ಮಳಿಗೆಯನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಐಜಿ ಡಾ.ಎಂ.ಬಿ. ಬೋರಲಿಂಗಯ್ಯ ಅವರು, ಘಟನೆ ಕುರಿತು ಸಮಗ್ರ ಮಾಹಿತಿ ಕಲೆಹಾಕಲಾಗಿದ್ದು, ದರೋಡೆಕೋರರ ಪತ್ತೆಗಾಗಿ 5 ತಂಡಗಳನ್ನು ರಚಿಸಿ ಕಾರ್ಯ ಪ್ರವೃತ್ತರಾಗಲಿದ್ದೇವೆ. ಎಷ್ಟು ಪ್ರಮಾಣದ ಚಿನ್ನಾಭರಣಗಳು ದರೋಡೆಯಾಗಿವೆ ಎನ್ನುವುದು ನಿಖರವಾಗಿ ತಿಳಿದು ಬಂದಿಲ್ಲ. ಕೋಟ್ಯಾಂತರ ಮೌಲ್ಯದ್ದು ಎನ್ನುವುದು ಖಚಿತವಾಗಿದೆ. ದರೋಡೆಕೋರರನ್ನು ಶೀಘ್ರ ಪತ್ತೆ ಹಚ್ಚಲಾಗುವುದು ಎಂದು ತಿಳಿಸಿದರು.

----

ಕೋಟ್...

ಹುಣಸೂರಿನಲ್ಲಿ ಭಾನುವಾರ ನಡೆದಿರುವ ದರೋಡೆ ಪ್ರಕರಣ ದುರದೃಷ್ಟಕರ ಸಂಗತಿ. ಪ್ರಕರಣದ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳಲ್ಲಿ ಮಾತನಾಡಿದ್ದು, ಪಟ್ಟಣ ಮತ್ತು ತಾಲೂಕು ವ್ಯಾಪ್ತಿಯಲ್ಲಿ ಪೊಲೀಸ್ ಬಂದೋಬಸ್ತ್ ಮತ್ತು ಭದ್ರತಾ ವ್ಯವಸ್ಥೆಗಳು ಹೆಚ್ಚಿನ ಪ್ರಮಾಣದಲ್ಲಿ ಆಗಬೇಕೆಂದು ಆಗ್ರಹಿಸಿದ್ದೇನೆ. ದರೋಡೆಕೋರರ ಶೀಘ್ರ ಪತ್ತೆ ಕಾರ್ಯ ಆಗಲಿದೆ ಎಂಬ ವಿಶ್ವಾಸ ಹೊಂದಿದ್ದೇನೆ.

- ಜಿ.ಡಿ. ಹರೀಶ್‌ ಗೌಡ, ಶಾಸಕ, ಹುಣಸೂರು ಕ್ಷೇತ್ರ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತ್ಯಾಗ, ಬಲಿದಾನ, ಆದರ್ಶಗಳ ಮೇಲೆ ಹುಟ್ಟಿದ ಕಾಂಗ್ರೆಸ್: ಎಸ್.ಆರ್. ಪಾಟೀಲ
ರೈತ ಸೃಷ್ಟಿಯ ಮೊದಲ ವಿಜ್ಞಾನಿ, ಜಮೀನು ಪ್ರಯೋಗಾಲಯ: ಮಾಜಿ ಸಚಿವ ನಿರಾಣಿ