ಶಾಶ್ವತ ಕೆಲಸದಿಂದ ಮಾತ್ರ ಹೆಸರು ಮಾಡಲು ಸಾಧ್ಯ; ಕೊತ್ತೂರು ಮಂಜುನಾಥ್

KannadaprabhaNewsNetwork |  
Published : Dec 29, 2025, 01:15 AM IST
೨೮ಕೆಎಲ್‌ಆರ್-೮ಕೋಲಾರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ತಾಲ್ಲೂಕು ಪದಾಧಿಕಾರಿಗಳಿಗೆ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮ ಶಾಸಕ ಕೊತ್ತೂರು ಮಂಜುನಾಥ್ ಉದ್ಘಾಟಿಸಿ ಮಾತನಾಡಿದರು. | Kannada Prabha

ಸಾರಾಂಶ

ಹಲವು ಪತ್ರಕರ್ತರಿಗೆ ಮನೆಗಳು ಇಲ್ಲ. ಶಾಸಕರು ೧೦ ಎಕರೆ ಜಮೀನು ದೊರಕಿಸಿಕೊಟ್ಟರೆ ಸಹಾಯವಾಗುತ್ತದೆ ಎಂದು ಕೊತ್ತೂರು ಮಂಜುನಾಥ್ ಅವರಲ್ಲಿ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಕೋಲಾರ

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಲ್ಯಾಣ ನಿಧಿ ಒಳ್ಳೆಯ ಆಲೋಚನೆಯಿಂದ ಕೂಡಿದೆ. ಈ ನಿಧಿಗೆ ನಾನು ಕೂಡ ವೈಯಕ್ತಿಕವಾಗಿ ೨೧ ಲಕ್ಷ ರು. ಕೊಡುತ್ತೇನೆ. ಸಂಘದ ಅಭಿವೃದ್ಧಿ ಕೆಲಸಗಳಿಗೆ ಶಾಸಕರ ಅನುದಾನದಲ್ಲಿ ೫ ಲಕ್ಷ ರು. ಹಾಗೂ ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್ ಕಡೆಯಿಂದ ೫ ಲಕ್ಷ ರು. ಕೊಡುತ್ತೇವೆ ಎಂದು ಶಾಸಕ ಕೊತ್ತೂರು ಮಂಜುನಾಥ್ ಭರವಸೆ ನೀಡಿದರು.

ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ತಾಲೂಕು ಪದಾಧಿಕಾರಿಗಳಿಗೆ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೋಲಾರ ತಾಲೂಕು ಪತ್ರಕರ್ತರಿಗೆ ನಿವೇಶನಕ್ಕಾಗಿ ಕೋಲಾರ ನಗರ ಸುತ್ತಮುತ್ತ ಐದು ಎಕರೆ ಜಾಗ ಕೊಡಿಸುತ್ತೇನೆ. ಸರ್ಕಾರದಿಂದ ಕೊಡಿಸಲು ಸಾಧ್ಯವಾಗದಿದ್ದರೆ ನಾನೇ ಕೊಡಿಸುತ್ತೇನೆ ಎಂದು ತಿಳಿಸಿದರು.

ನಾನು ರಾಜಕಾರಣದಲ್ಲಿ ಬೆಳೆಯಲು ಕಾರಣ ಪತ್ರಕರ್ತರು. ಪತ್ರಕರ್ತರು ಜನರಲ್ಲಿ ತಿಳಿವಳಿಕೆ ಮೂಡಿಸುವವರು. ಯಾರೇ ಆದರೂ ಶಾಶ್ವತವಾಗಿ ಉಳಿಯುವ ಕೆಲಸ ಮಾಡಬೇಕು. ಹಾಗಲಕಾಯಿ ಕಹಿ, ಆದರೆ ಆರೋಗ್ಯಕ್ಕೆ ಒಳ್ಳೆಯದು. ಕೆಲವರ ಮಾತು ಕಹಿ ಇರಬಹುದು. ಆ ಮಾತುಗಳ ಹಿಂದೆ ಒಳ್ಳೆಯ ಉದ್ದೇಶ ಇರುತ್ತದೆ ಎಂದು ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಚುನಾವಣಾ ಠೇವಣಿ ಹಣವನ್ನು ವಾಪಸ್ ಮಾಡಿದ ರಾಜ್ಯದ ಏಕೈಕ ಚುನಾವಣಾಧಿಕಾರಿ ಪಾ.ಶ್ರೀ.ಅನಂತರಾಮುರವರು ಪಾರದರ್ಶಕವಾಗಿ ಚುನಾವಣೆ ನಡೆಸಿದ್ದಾರೆ. ಗೆದ್ದವರು ಹಿಗ್ಗುವುದು ಬೇಡ. ಸೋತವರು ಕುಗ್ಗುವುದು ಬೇಡ ಎಂದರು.

ಈ ಬಾರಿ ರಾಜ್ಯ ವ್ಯಾಪಿ ಚುನಾವಣೆಯಿಂದ ಒಟ್ಟು ೫೪ ಲಕ್ಷ ಠೇವಣಿ ಬಂದಿದೆ. ಸಂಘದ ಚಟುವಟಿಕೆಗಳ ಬಗ್ಗೆ ಆಸಕ್ತಿ, ಉತ್ಸಾಹ ಇರುವುದು ಇದರಿಂದ ಗೊತ್ತಾಗುತ್ತದೆ. ಸಂಘ ಯಾವತ್ತೂ ನೈತಿಕತೆ ಬಿಟ್ಟುಕೊಟ್ಟಿಲ್ಲ. ಸಂಘ ಕಟ್ಟುವುದರ ಜೊತೆಜೊತೆಗೆ ಮನಸ್ಸು ಕಟ್ಟಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಿಂದ ಈಗ ಹೊರಗುಳಿದ ಪದಾಧಿಕಾರಿಗಳು ಮತ್ತೊಮ್ಮೆ ಗೈರಾದರೆ ಹುದ್ದೆ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಸಂಘದ ಹುದ್ದೆಗೆ ಬಂದವರಿಗೆ ಜವಾಬ್ದಾರಿ ಇದೆ. ತಮಗೆ ಸಂಘ ನಡೆಸಲು ಸಾಧ್ಯವಾಗದಿದ್ದರೆ ಹುದ್ದೆ ಬಿಟ್ಟು ಹೋಗಿ ಎಂದು ಹೇಳಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್ ಮಾತನಾಡಿ, ಪತ್ರಕರ್ತರಿಗೆ ನಾನು ಎಂಬ ಅಹಂ ಇರಬಾರದು. ದುರಂಹಕಾರ ತೋರಿಸಬೇಡಿ. ಇದು ಈ ಕಾರ್ಯಕ್ರಮಕ್ಕೆ ಬಾರದ ಪದಾಧಿಕಾರಿಗಳಿಗೆ ಎಚ್ಚರಿಕೆ ಕೂಡ ಎಂದರು.

ನಮ್ಮ ಬರವಣಿಗೆಯಿಂದ ಮಾತ್ರ ನಮ್ಮನ್ನು ಜನ ಗುರುತಿಸುತ್ತಾರೆ. ಸಂಘ ನಮ್ಮ ರಕ್ಷಣೆಗೆ ಇರುತ್ತದೆ. ಕಾರ್ಯಕ್ರಮಕ್ಕೆ ಯಾರು ಬಂದಿದ್ದಾರೆ, ಬಂದಿಲ್ಲ ಎಂಬುದು ಮುಖ್ಯ ಅಲ್ಲ. ಎಲ್ಲರಿಗಿಂತ ಪತ್ರಕರ್ತರ ಸಂಘ ಮುಖ್ಯ. ಇವತ್ತಿನ ದಿನಗಳಲ್ಲಿ ಪತ್ರಕರ್ತರು ಸಾರ್ವಜನಿಕರ ದೃಷ್ಟಿಯಲ್ಲಿ ಕಿತ್ತು ತಿನ್ನುವ ಪತ್ರಕರ್ತರು ಆಗಿ ಕಂಡು ಬರುತ್ತಿದ್ದಾರೆ, ನಾವು ಪ್ರೀತಿಯ ಪಾರಿವಾಳಗಳು ಆದಾಗ ಅವರು ನಮಗೆ ಗೌರವ ಕೊಡುತ್ತಾರೆ. ನಮ್ಮ ಬರವಣಿಗೆ ನಮ್ಮನ್ನು ಗುರುತಿಸುವಂತೆ ಆಗಬೇಕು. ಸಾರ್ವಜನಿಕ ವಲಯದಲ್ಲಿ ಇರುವ ನಾವು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.

ಜಿಲ್ಲಾ ಚುನಾವಣಾಧಿಕಾರಿ ಪಾ.ಶ್ರೀ.ಅನಂತರಾಮು ಮಾತನಾಡಿ, ಅನ್ಯಾಯದ ಪರ ಮಾತನಾಡಬೇಕು, ನ್ಯಾಯದ ಪರ ನಿಲ್ಲಬೇಕು. ಗುಂಪು ಇರಬೇಕು, ಆದರೆ ಗುಂಪುಗಾರಿಕೆ ಇರಬಾರದು. ತಂತ್ರ ಇರಬೇಕು, ಕುತಂತ್ರ ಇರಬಾರದು. ಜಾತಿ ಆಧಾರದ ಮೇಲೆ ಸಂಘ ಕಟ್ಟಬಾರದು. ಪ್ರಾಮಾಣಿಕವಾಗಿ ಜವಾಬ್ದಾರಿ ನಿಭಾಯಿಸಿ, ತಪ್ಪು ಮಾಡಿದರೆ ಪ್ರಶ್ನೆ ಮಾಡಿ, ಒಳ್ಳೆಯದನ್ನು ಶ್ಲಾಘಿಸಿ ಎಂದರು.

ಚುನಾವಣೆಯಲ್ಲಿ ಬಂದಿದ್ದ ಠೇವಣಿಯನ್ನು ರಾಜ್ಯ ಪತ್ರಕರ್ತರ ಸಂಘಕ್ಕೆ ೨೫ ಸಾವಿರ ಹಾಗೂ ಜಿಲ್ಲಾ ಸಂಘಕ್ಕೆ ೨೫ ಸಾವಿರ ದೇಣಿಗೆ ನೀಡಿದರು.

ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ಮುನಿರಾಜು ಮಾತನಾಡಿ, ಸಂಘಕ್ಕೆ ಹಿಂದೆ ಹಲವು ಬಾರಿ ಚುನಾವಣೆ ನಡೆದಿರಲಿಲ್ಲ. ಆದರೆ, ಈ ಬಾರಿ ಆಕಸ್ಮಿಕವಾಗಿ ಚುನಾವಣೆ ನಡೆದಿದೆ. ಕೇವಲ ಇಬ್ಬರು ಮೂವರಿಂದ ೨೬೦ ಮಂದಿಗೆ ತೊಂದರೆ ಆಗಬಾರದು. ಹೊರಗಡೆ ಇರುವ ಪದಾಧಿಕಾರಿಗಳು ಇನ್ನು ಮುಂದೆಯಾದರೂ ಒಗ್ಗಟ್ಟಿನಿಂದ ಇರಿ. ಇಲ್ಲದಿದ್ದರೆ ಸಮಾಜಕ್ಕೆ ಏನು ಸಂದೇಶ ನೀಡುವಿರಿ ಎಂದು ಪ್ರಶ್ನಿಸಿದರು.

ಹಲವು ಪತ್ರಕರ್ತರಿಗೆ ಮನೆಗಳು ಇಲ್ಲ. ಶಾಸಕರು ೧೦ ಎಕರೆ ಜಮೀನು ದೊರಕಿಸಿಕೊಟ್ಟರೆ ಸಹಾಯವಾಗುತ್ತದೆ ಎಂದು ಕೊತ್ತೂರು ಮಂಜುನಾಥ್ ಅವರಲ್ಲಿ ಮನವಿ ಮಾಡಿದರು.

ಸಂಘದ ಮಾಜಿ ಅಧ್ಯಕ್ಷ ಬಿ.ವಿ.ಗೋಪಿನಾಥ್, ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿ ವಾಸುದೇವ ಹೊಳ್ಳ ಮಾತನಾಡಿದರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಹರೀಶ್ ಇದ್ದರು. ಮಡಿವಾಳ ನಂಜುಂಡಪ್ಪ ಸ್ವಾಗತಿಸಿ, ಎಸ್.ನಾರಾಯಣಸ್ವಾಮಿ ನಿರೂಪಿಸಿ, ಬಿ.ಎಸ್.ನವೀನ್ ಕುಮಾರ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತ್ಯಾಗ, ಬಲಿದಾನ, ಆದರ್ಶಗಳ ಮೇಲೆ ಹುಟ್ಟಿದ ಕಾಂಗ್ರೆಸ್: ಎಸ್.ಆರ್. ಪಾಟೀಲ
ರೈತ ಸೃಷ್ಟಿಯ ಮೊದಲ ವಿಜ್ಞಾನಿ, ಜಮೀನು ಪ್ರಯೋಗಾಲಯ: ಮಾಜಿ ಸಚಿವ ನಿರಾಣಿ