ಜಾನಪದ ಸಿರಿ ಕಾರ್ಯಕ್ರಮಕನ್ನಡಪ್ರಭ ವಾರ್ತೆ ತುಮಕೂರು
ಜನಪದ ಒಂದು ಪ್ರದರ್ಶನ ಕಲೆಯಾದರೂ, ನಿಂತ ನೀರಾಗಿಲ್ಲ. ಬದಲಾಗಿ ಸದಾ ಹೊಸತನ ಚಲನಶೀಲವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಚಿಕ್ಕಬಳ್ಳಾಪುರ ಜಿಲ್ಲಾ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್ ಅಭಿಪ್ರಾಯಪಟ್ಟಿದ್ದಾರೆ.ತಾಲೂಕಿನ ಸ್ವಾಂದೇನಹಳ್ಳಿ ಗ್ರಾಮದಲ್ಲಿ ರಂಗ ಕೀರ್ತನ ಸಂಪದ ಮಲ್ಲಸಂದ್ರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಸಹಕಾರದಲ್ಲಿ ಆಯೋಜಿಸಿದ್ದ ಜಾನಪದ ಸಿರಿ ಸಂಭ್ರಮ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಜನಪದ ಸದಾ ಚಲನಶೀಲವಾಗಿರುವ ಕಾರಣದಿಂದಲೂ ಯುವಜನರು ಅದರತ್ತ ಆಕರ್ಷಿಸ್ಪಡುತ್ತಿದ್ದಾರೆ ಎಂದರು.
ಹಿರಿಯ ಹರಿಕಥಾ ವಿದ್ವಾನ್ ಡಾ.ಲಕ್ಷ್ಮಣ್ ದಾಸ್ ನೇತೃತ್ವದ ರಂಗ ಕೀರ್ತನ ಸಂಪದ ಆರಂಭದಿಂದಲೂ ರಂಗಭೂಮಿ, ಹರಿಕಥೆ, ಸುಗಮ ಸಂಗೀತ, ಜಾನಪದ ಕಲೆಗಳ ಬೆಳವಣಿಗೆಗೆ ದುಡಿಯುತ್ತಿದ್ದು, ಲಕ್ಷ್ಮಣ್ದಾಸ್ ತನ್ನಂತಹ ಕಲಾಸಕ್ತ ಯುವಕರ ತಂಡ ಕಟ್ಟಿಕೊಂಡು, ಇಂತಹ ಕಾರ್ಯಕ್ರಮಗಳನ್ನು ಗ್ರಾಮೀಣ ಭಾಗದಲ್ಲಿ ಏರ್ಪಡಿಸುವ ಮೂಲಕ ಜನರಿಗೆ ಮನರಂಜನೆಯ ಜೊತೆಗೆ, ಜಾನಪದ ಕಲೆಗಳನ್ನು ಯುವಜನರಿಗೆ ವರ್ಗಾಯಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಕೆಂಕೆರೆ ಮಲ್ಲಿಕಾರ್ಜುನ್ ಮಾತನಾಡಿ, ಜಾನಪದ ಕಲೆ ಎಂದಿಗೂ ಜೀವಂತ. ತನ್ನದೇ ಆದ ಇತಿಹಾಸ ಮತ್ತು ಘನತೆಯನ್ನು ಹೊಂದಿದೆ. ಅನಕ್ಷರಸ್ತರ ಎದೆಯ ಧ್ವನಿಗೆ ಬೆಲೆಕಟ್ಟಲು ಸಾಧ್ಯವೇ ಇಲ್ಲ. ಇಂತಹ ಕಲೆಯನ್ನು ಜೀವಂತವಾಗಿಡಲು ರಂಗ ಕೀರ್ತನ ಸಂಪದ ನಿರಂತರವಾಗಿ ಪ್ರಯತ್ನಿಸುತ್ತಲೇ ಬಂದಿದೆ ಎಂದರು.
ಸ್ವಾಂದೇನಹಳ್ಳಿ ಗ್ರಾಪಂ ಅಧ್ಯಕ್ಷೆ ಮಹಾಲಕ್ಷ್ಮಮ್ಮ ಮಾತನಾಡಿ, ಕಲೆ ಎಂಬುದು ಗ್ರಾಮೀಣ ಜನರಲ್ಲಿ ಹಾಸು ಹೊಕ್ಕಾಗಿದೆ. ಹಾಗಾಗಿ ಇಂತಹ ಪ್ರದರ್ಶನಗಳ ಮೂಲಕ ಯುವಜನರ ಮನಸ್ಸಿನಲ್ಲಿರುವ ಕಲೆಯನ್ನು ಉದ್ದೀಪನಗೊಳಿಸುವ ಕೆಲಸವನ್ನು ಡಾ.ಲಕ್ಷ್ಮಣದಾಸ್ ರಂತಹ ಹಿರಿಯ ಕಲಾವಿದರು ಮಾಡುತ್ತಾರೆ. ಇಂತಹ ಕಾರ್ಯಕ್ರಮಗಳನ್ನು ವೀಕ್ಷಿಸುವಾಗ ನಮಗೂ ಹಾಡಬೇಕೆಂಬ ಮನಸ್ಸಾಗುತ್ತದೆ. ನಮ್ಮೊಳಗಿನ ಪ್ರತಿಭೆ ಜಾಗೃತಗೊಳ್ಳುತ್ತದೆ ಎಂದರು.ಜಲಧಿ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಕಾರ್ಯದರ್ಶಿ ಜಲಧಿ ರಾಜು ಮಾತನಾಡಿ, ಜನಪದ ಕಲೆಗಳ ಪ್ರದರ್ಶನದ ಜೊತೆಗೆ, ಗ್ರಾಮದಲ್ಲಿ ಈ ರೀತಿ ಉತ್ಸವ ನಡೆಯುವುದು, ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣವನ್ನು ಉಂಟು ಮಾಡಿದೆ ಎಂದರು.
ಕಲಾವಿದರಾದ ಡಿ.ನಾಗರಾಜು,ಡಾ.ಲಕ್ಷ್ಮಣದಾಸ್, ಗ್ರಾಮಸ್ಥರಾದ ಕೋದಂಡರಾಮಯ್ಯ ಅವರುಗಳು ಕಾರ್ಯಕ್ರಮ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಗ್ರಾಮಪಂಚಾಯಿತಿ ಸದಸ್ಯರಾದ ವೆಂಕಟೇಶ್,ಗಿರಿಜಮ್ಮ, ಜಲದಿ ರಾಜು, ರಂಗಸೊಗಡು ಕಲಾಟ್ರಸ್ಟ್ನ ಸಿದ್ದರಾಜು,ಕಲಾವಿದರಾದ ದಿಬ್ಬೂರು ಮಂಜು,ದೇವಿರಪ್ಪ, ಬಲರಾಮ್, ಚಲುವರಾಜು, ಊರಿನ ಪಣಗಾರರಾದ ಜಯರಾಮಯ್ಯ,ಸ್ವಾಂದೇನಹಳ್ಳಿ ಗ್ರಾಮದ ಮುಖಂಡರಾದ ದೊಡ್ಡರಾಮಯ್ಯ, ರಮೇಶ್, ರಂಗನಾಥ್,ಟೈಲರ್ ದೊಡ್ಡಯ್ಯ,ಚಿಕ್ಕಣ್ಣ ಮತ್ತಿತರರು ಉಪಸ್ಥಿತರಿದ್ದರು.ವೇದಿಕೆ ಕಾರ್ಯಕ್ರಮದ ನಂತರ ದಿಬ್ಬೂರು ಮಂಜು ತಂಡದಿಂದ ಡಾ.ರಾಜ್ ಗೀತಗಾಯನ, ಇರಲಗೊಂದಿ ಡಿ.ನಾಗರಾಜು ತಂಡದಿಂದ ಜನಪದ ಗೀತ ಗಾಯನ,ಮಧುಗಿರಿ ಅಂಜನಮೂರ್ತಿ ಮತ್ತು ತಂಡದಿಂದ ರಂಗಗೀತೆಗಳ ಗಾಯನ, ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಡಿ.ಸಿ.ಕುಮಾರ್ ತಂಡದಿಂದ ರಂಗಗೀತಾ ವೈವಿದ್ಯ ಪ್ರದರ್ಶನ ನಡೆಯಿತು.
ಮೆರವಣಿಗೆಯಲ್ಲಿ ಕೊರಟಗೆರೆ ಭುವನ್ ಮತ್ತು ತಂಡದಿಂದ ವೀರಗಾಸೆ,ಸತೀಶ್ ಮತ್ತು ತಂಡದಿಂದ ನಾಸಿಕ್ ಡೋಲ್,ಸಿ.ಎನ್.ಲೋಕೇಶ್ ಮತ್ತು ತಂಡದಿಂದ ಗಾರುಡಿ ಗೊಂಬೆ, ರಂಗಸ್ವಾಮಿ ಮತ್ತು ತಂಡದಿಂದ ಕೀಲುಕುದುರೆ ಕಲೆಗಳ ಪ್ರದರ್ಶನದ ಜೊತೆಗೆ, ರಂಗಸೊಗಡು ಕಲಾ ಟ್ರಸ್ಟ್ ವತಿಯಿಂದ ತಾಯಿ ಭುವನೇಶ್ವರಿಯ ಭಾವಚಿತ್ರದ ಮೆರವಣಿಗೆ ನಡೆಯಿತು.