ಗದಗ: ಜನಪದ ಸಾಹಿತ್ಯ ಕೇವಲ ಸಾಹಿತ್ಯದ ಒಂದು ಭಾಗವಾಗಿರದೆ ಜನರ ಜೀವನವೇ ಆಗಿದೆ, ನಮ್ಮ ನಾಡು ನುಡಿ, ಸಂಸ್ಕೃತಿ, ಪರಂಪರೆಯ ಪ್ರತೀಕವಾಗಿದೆ. ಇಂದಿನ ಯುವಕರು ಆಧುನಿಕ ಜನಪ್ರಿಯ ಗೀತೆಗಳಿಗೆ ಮಾರು ಹೋಗದೆ ಮೂಲ ಜನಪದ ಸಾಹಿತ್ಯದ ಉಳಿವಿಗೆ ಕೈಜೋಡಿಸಬೇಕೆಂದು ಜನಪದ ಕಲಾವಿದ ಗವಿಸಿದ್ಧಯ್ಯ ಹಳ್ಳಿಕೇರಿಮಠ ಹೇಳಿದರು.
ಕಾಲೇಜುಗಳಲ್ಲಿ ಸಾಂಸ್ಕೃತಿಕ ಹಬ್ಬದಂತಹ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಜನಪದ, ಸಾಹಿತ್ಯಾಭಿರುಚಿ ಬೆಳೆಯುವಂತೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಸಾಂದರ್ಭಿಕವಾಗಿ ಸ್ವಾಮಿ ವಿವೇಕಾನಂದರು. ರೈತರ ಬೆವರ ಹನಿಯ ಬಗ್ಗೆ ಹೇಳಿದ ಘಟನೆ ಸ್ಮರಿಸಿಕೊಂಡು ರೈತಗೀತೆ ಹಾಡಿ ರೈತರ ಪರಿಶ್ರಮ ಪರಿಚಯಿಸಿದರು. ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ದೂರವಿದ್ದು ನಾನು ಎನ್ನುವ ಅಂಹಕಾರ ಬಿಟ್ಟು ನಾವು ಎನ್ನುವ ಸಾಮುದಾಯಿಕ ಭಾವನೆ ಬೆಳೆಸಿಕೊಂಡು ತಂದೆ ತಾಯಿ ಋಣ ತೀರಿಸುವ ಕೆಲಸ ಮಾಡಬೇಕೇನ್ನುವ ವಿಷಯಗಳ ಕುರಿತು ಜನಪದಗೀತೆಗಳನ್ನು ಹಾಡಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾ.ಎಂ.ಎಂ.ಬುರಡಿ ಮಾತನಾಡಿ, ಹಲವು ವಿಷಯ, ವಿದ್ಯಾರ್ಥಿಗಳ ಸಾಧನೆಯ ಬಗ್ಗೆ ಮಾತನಾಡಿದರು. ಈರಮ್ಮ ಅಂಗಡಿ ಹಾಗೂ ಸಂಗಡಿಗರ ಪ್ರಾರ್ಥಿಸಿದರು.