ಕಾಶಿ ಯಾತ್ರೆಗೆ ಹೋಗಿದ್ದಾಗ ಸರ್ಕಾರಿ ಅಧಿಕಾರಿಯ ಮನೆ ಬೀಗ ಮುರಿದು ನಗ-ನಾಣ್ಯ ದೋಚಿದ್ದ ಇಬ್ಬರು ಖದೀಮರು ಬ್ಯಾಡರಹಳ್ಳಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಾಶಿ ಯಾತ್ರೆಗೆ ಹೋಗಿದ್ದಾಗ ಸರ್ಕಾರಿ ಅಧಿಕಾರಿಯ ಮನೆ ಬೀಗ ಮುರಿದು ನಗ-ನಾಣ್ಯ ದೋಚಿದ್ದ ಇಬ್ಬರು ಖದೀಮರು ಬ್ಯಾಡರಹಳ್ಳಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಕರ್ನಾಳ ಗಂಗಾಧರ್‌ ಹಾಗೂ ಬಸವರಾಜ ಬಂಧಿತರಾಗಿದ್ದು, ಆರೋಪಿಗಳಿಂದ 470 ಗ್ರಾಂ ಚಿನ್ನಾಭರಣ, 750 ಬೆಳ್ಳಿ ವಸ್ತುಗಳು ಹಾಗೂ 1.43 ಲಕ್ಷ ರು.ನಗದು ಹಾಗೂ ಬೈಕ್ ಸೇರಿದಂತೆ 64.73 ಲಕ್ಷ ರು.ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಕಳೆದ ಮಾರ್ಚ್‌ನಲ್ಲಿ ಲಿಂಗಬೀರನಹಳ್ಳಿಯಲ್ಲಿರುವ ಡಿ ಗ್ರೂಪ್ ಲೇಔಟ್‌ನಲ್ಲಿ ಸರ್ಕಾರಿ ಅಧಿಕಾರಿ ಶ್ಯಾಮ್ ಸುಂದರ್ ಮನೆಯಲ್ಲಿ ಕಳ್ಳತನವಾಗಿತ್ತು. ಈ ಕೃತ್ಯದ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದರು. ಆದರೆ ಅಷ್ಟರಲ್ಲಿ ಬೇರೊಂದು ಮನೆಗಳ್ಳತನ ಪ್ರಕರಣದಲ್ಲಿ ಗಂಗಾಧರ್ ಹಾಗೂ ಬಸವರಾಜುನನ್ನು ಚಿಕ್ಕಮಗಳೂರು ಠಾಣೆ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಬಳಿಕ ನ್ಯಾಯಾಲದ ವಾರೆಂಟ್ ಪಡೆದು ಜೈಲಿನಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದು ಬ್ಯಾಡರಹಳ್ಳಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಇಬ್ಬರು ಆರೋಪಿಗಳು ವೃತ್ತಿಪರ ಕ್ರಿಮಿನಲ್‌ಗಳಾಗಿದ್ದು, ಅವರ ವಿರುದ್ಧ ನಗರ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.