ಮೂಲ ಜಾನಪದ ಕಲೆ ಉಳಿಸಿ, ಬೆಳೆಸಿ

KannadaprabhaNewsNetwork |  
Published : Feb 05, 2026, 01:15 AM IST
24 | Kannada Prabha

ಸಾರಾಂಶ

ಜನಪ್ರಿಯ ದಾಟಿಯ ಸಂಗೀತ ಮತ್ತು ಕಲೆಗಳಿಗೆ ತಾಯಿಬೇರು ಜನಪದ ಎಂಬುದನ್ನು ಯುವ ಜನಾಂಗಕ್ಕೆ ತಿಳಿಸುವ ಅಗತ್ಯವಿದೆ

ಕನ್ನಡಪ್ರಭ ವಾರ್ತೆ ಮೈಸೂರು

ಮೂಲ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವಂತೆ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಪ್ರಾಂಶುಪಾಲ ಪ್ರೊ.ಎಂ. ಸಲಹೆ ನೀಡಿದರು.

ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು (ಸ್ವಾಯತ್ತ) ಕನ್ನಡ ವಿಭಾಗ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶದ (ಐ.ಕ್ಯೂ. ಎ. ಸಿ) ವತಿಯಿಂದ ಮೂಲಮಟ್ಟಿನ ಜನಪದ ಗಾಯನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜನಪ್ರಿಯ ದಾಟಿಯ ಸಂಗೀತ ಮತ್ತು ಕಲೆಗಳಿಗೆ ತಾಯಿಬೇರು ಜನಪದ ಎಂಬುದನ್ನು ಯುವ ಜನಾಂಗಕ್ಕೆ ತಿಳಿಸುವ ಅಗತ್ಯವಿದೆ. ಹಾಗಾಗಿ, ಜನಪದ ಕಲೆಗಳ ಬಗ್ಗೆ ಅರಿವು ಮೂಡಿಸುವುದು ಇಂದಿನ ಅಗತ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸ್ಥಳ ಪುರಾಣಗಳಿಗೆ ಸಂಬಂಧಿಸಿದಂತೆ ಪ್ರಾದೇಶಿಕ ಜನಪದವು ಆಯಾ ಸಂಸ್ಕೃತಿಯ ಅನುಸಾರ ವಿಕಸನಗೊಳ್ಳುತ್ತದೆ. ಹಾಗಾಗಿ ಸ್ಥಳೀಯ ಜಾನಪದ ಕಲೆಗಳು ಹೆಚ್ಚು ಮಹತ್ವ ಪಡೆದಿವೆ ಎಂದು ಹೇಳಿದರು.

ಜಾನಪದ ಗಾಯಕ ಮಾರಶೆಟ್ಟಿಹಳ್ಳಿಯ ಕಂಸಾಳೆ ಮಹದೇವ ಮತ್ತು ಆರು ಜನರ ತಂಡದವರು ಜಾನಪದ ಹಾಡುಗಳ ಮೂಲ ಮಟ್ಟುಗಳನ್ನು ಹಾಡಿ ರಂಜಿಸಿದರು.

ಮಲೆ ಮಹದೇಶ್ವರ, ಸಿದ್ದಪ್ಪಾಜಿ, ನಂಜುಂಡೇಶ್ವರ, ಚಾಮುಂಡೇಶ್ವರಿ, ಮಂಟೇಸ್ವಾಮಿ ಸೇರಿದಂತೆ ಹಳೆ ಮೈಸೂರು ಭಾಗದ ಹಲವಾರು ಕುಲ ದೇವರುಗಳ ಮೂಲ ಜಾನಪದ ಶೈಲಿಯ ಹಾಡುಗಳನ್ನು ಹಾಡಿ ರಂಜಿಸಿದರು. ಅಷ್ಟೇ ಅಲ್ಲ, ಹಲವಾರು ಪ್ರಸಂಗಗಳನ್ನು ಹಾಡಿ, ಅವುಗಳ ಹಿನ್ನೆಲೆ, ಸಂದರ್ಭ, ಅರ್ಥ, ವ್ಯಾಪ್ತಿ, ಗುಣ ಮತ್ತು ಅವಗುಣ, ಭಾವ, ಸ್ವಭಾವ ಕುರಿತು ಜಾನಪದ ದಾಟಿಯಲ್ಲಿ ಮನ ಮುಟ್ಟುವಂತೆ ವಿವರಿಸಿ ಅರ್ಥೈಸಿದರು.ಸುಮಾರು ಎರಡು ಗಂಟೆಗಳ ಕಾಲ ಜನಪದ ಶೈಲಿಯ ಹಾಡುಗಳನ್ನು ಹಾಡಿ ವಿದ್ಯಾರ್ಥಿಗಳಿಗೆ ಮನರಂಜನೆಯ ಜೊತೆಗೆ ಜಾನಪದ ಕುರಿತು ಅರಿವು ಮೂಡಿಸಿದರು. ಹಾಡಿನ ಮುಟ್ಟುಗಳು ನೆರೆದಿದ್ದ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಮಂತ್ರಮುಗ್ಧಗೊಳಿಸಿದವು.

ಜಾನಪದ ಗಾಯಕರ ತಂಡದ ಸದಸ್ಯರಾದ ಕಂಸಾಳೆ ಮಹದೇವು, ಚಂದ್ರು ಕೋಟೆ, ಮಣಿಕಂಠ, ಪ್ರಸಾದ್ ಮತ್ತು ಮಹದೇವ ಅವರನ್ನು ಸನ್ಮಾನಿಸಲಾಯಿತು.

ಕನ್ನಡ ಸಹ ಪ್ರಾಧ್ಯಾಪಕ ಎಸ್. ಸಿದ್ದೇಗೌಡ ಮಾತನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥ ಎಚ್.ಜೆ. ಭೀಮೇಶ್, ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕ ವಿ. ನಂದಕುಮಾರ್, ವಿಭಾಗದ ಅಧ್ಯಾಪಕ ಎಚ್.ಎಲ್. ರೇಖಾ, ಕೆ.ಎಂ. ಮಂಜುನಾಥ, ಹರೀಶ್, ಅಧ್ಯಾಪಕರು, ಅಧ್ಯಾಪಕೇತರರು ವಿದ್ಯಾರ್ಥಿಗಳು ಇದ್ದರು.ಸಿಂಚನ ಮತ್ತು ತಂಡ ಪ್ರಾರ್ಥಿಸಿದರು. ಕನ್ನಡ ಸಹ ಪ್ರಾಧ್ಯಾಪಕಿ ಎನ್. ಕಾವೇರಿ ಸ್ವಾಗತಿಸಿದರು, ಎಚ್.ಪಿ. ಚಂದ್ರಕಲಾ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾವೂರು ಶ್ರೀ ಗೋಪಾಕೃಷ್ಣ ದೇವಸ್ಥಾನದಲ್ಲಿ ಸಾಮೂಹಿಕ ವಿಷ್ಣುಸಹಸ್ರನಾಮ ಪಠಣ ಸಂಪನ್ನ
ಸಚಿವ ತಿಮ್ಮಾಪುರ ಬೆಂಬಲಿಸಿ ಕಾಂಗ್ರೆಸ್‌ ಬೃಹತ್‌ ಪ್ರತಿಭಟನೆ