ರಾಮನಗರ: ಕುವೆಂಪು ಅವರ ಚಿಂತನೆಗಳು ಸಾರ್ವಕಾಲಿಕ, ವಿಶ್ವಮಾನವ ಸಂದೇಶ ಸಾರಿದ ಅವರ ಆದರ್ಶ ಬದುಕನ್ನು ಅನುಸರಿಸುವುದೇ ನಾವು ಅವರಿಗೆ ಸಲ್ಲಿಸುವ ಗೌರವ ಎಂದು ಜಿಲ್ಲಾ ಕಸಾಪ ಬಿ.ಟಿ.ನಾಗೇಶ್ ಹೇಳಿದರು.
ಕುವೆಂಪು ಅವರು ಎಲ್ಲಾ ಕಾಲಕ್ಕೂ ಅಜರಾಮರ. ಪ್ರಸ್ತುತ ಸಮಸ್ಯೆಗಳಿಗೆ ಕುವೆಂಪು ವಿಚಾರಗಳು ರಾಮಬಾಣವಾಗಿದೆ. ಮನುಜಮತ ವಿಶ್ವಪಥ ಎಂಬ ಘೋಷಣೆಯ ಮೂಲಕ ಜಗತ್ತಿಗೆ ವಿಶ್ವಮಾನವ ಸಂದೇಶ ಸಾರಿ, ನಿಸರ್ಗದ ಸೊಬಗನ್ನು ತಮ್ಮ ಕೃತಿಗಳಲ್ಲಿ ಸುಂದರವಾಗಿ ಕಟ್ಟಿಕೊಡುವ ಮೂಲಕ ಓದುಗರ ಮನದಲ್ಲಿ ಪ್ರಕೃತಿ ಪ್ರೇಮದ ಬೀಜಾಂಕರ ಮಾಡಿದರು ಎಂದು ಹೇಳಿದರು.
ಜೀವಾಮೃತ ರಕ್ತನಿಧಿ ಸಂಸ್ಥೆಯ ವಿ.ಸಿ.ಚಂದ್ರೇಗೌಡ ಮಾತನಾಡಿ, ಕುವೆಂಪು ಅವರ ಜಯಂತಿ ಅಂಗವಾಗಿ ರಕ್ತದಾನ ಶಿಬಿರ ಬಹಳ ಮಹತ್ವಪಡೆದಿದೆ. ಹಲವಾರು ವೇಳೆ ರಕ್ತ ಸಿಗದೆ ರೋಗಿಗಳು ಸಾವನ್ನಪ್ಪಿದ್ದು, ಅದನ್ನು ತಪ್ಪಸಲು ಜೀವಾಮೃತ ರಕ್ತನಿಧಿ ಸಂಸ್ಥೆ ಸ್ಥಾಪಿಸಿದ್ದು, ಇತಂಹ ಗಣ್ಯರ ಜಯಂತಿಯಲ್ಲಿ ದಾನಿಗಳಿಂದ ರಕ್ತ ಸಂಗ್ರಹಿಸಿ, ತುರ್ತು ಸಮಯದಲ್ಲಿ ಜನರಿಗೆ ನೀಡಲಾಗುತ್ತಿದ್ದು, ದಾನಿಗಳು ಮತ್ತು ಕುಟುಂಬ ವರ್ಗದವರಿಗೆ ಉಚಿತವಾಗಿ ನೀಡಲಾಗುತ್ತದೆ. ಈ ಕಾರ್ಯ ನಿರಂತರವಾಗಿ ನಡೆಯಲಿದೆ. ಭಾಷೆ, ದೇಶ, ಪ್ರಕೃತಿ, ವೈಚಾರಿಕತೆ, ರೈತರು ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಸಾಹಿತ್ಯ ಚಟುವಟಿಕೆ ನಡೆಸಿ ವಿಶ್ವದ ಗಮನ ಸೆಳೆದ ಮಹಾ ಕವಿ ಕುವೆಂಪು ಅವರು ಎಂದು ಹೇಳಿದರು.ನಾರಾಯಣ ಆಸ್ವತ್ರೆಯ ಮಾಲೀಕ ಡಾ.ಮಧಸೂದನ್ ಮಾತನಾಡಿ, ರಾಷ್ಟ್ರಕವಿ ಕುವೆಂಪು ಅವರು ಆದರ್ಶನೀಯ ಬದುಕು ನಮಗೆಲ್ಲರಿಗೂ ಮಾದರಿಯಾಗಿದ್ದು, ಅವರ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಬೇಕು. ಅವರು ತಮ್ಮ ಬರಹಗಳಲ್ಲಿ ತಿಳಿಸಿರುವ ಸಂದೇಶವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ರಾಮನಗರದ ನಾರಾಯಣ ಆಸ್ವತ್ರೆಯಲ್ಲಿ ಕಸಾಪ ರಾಮನಗರ ತಾಲೂಕು ಘಟಕ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ ಜಯಂತೋತ್ಸವ ಕಾರ್ಯಕ್ರಮ ನಡೆಯಿತು.