ಕನ್ನಡಪ್ರಭ ವಾರ್ತೆ ಮಂಡ್ಯ
ಜಗತ್ತಿನ ಹೊರಗೆ ಏನೆಲ್ಲಾ ಸೆಳೆಯುವ ವಸ್ತುಗಳು ನಮಗೆ ಸಿಗುವವರೆಗೂ ಆಕರ್ಷಣೆಯಷ್ಟೇ. ಸಿಕ್ಕ ನಂತರ ಸ್ವಲ್ಪ ಸಮಯಕ್ಕೆ ಆಕರ್ಷಣೆ ಕಳೆದುಕೊಳ್ಳುತ್ತವೆ. ಇಂತಹ ಕ್ಷಣಿಕ ವಸ್ತುಗಳನ್ನು ನಂಬಿ ನಿತ್ಯ ಜೀವನ ಪರ್ಯಂತ ಹೋರಾಡುತ್ತಿರುತ್ತೇವೆ. ಇದರಿಂದ ಹೊರಗುಳಿದು ಕಳೆದುಕೊಂಡಿರುವ ನಮ್ಮನ್ನು ನಾವು ಕಂಡುಕೊಳ್ಳುವುದಕ್ಕೆ ಹೋರಾಡಬೇಕಿದೆ ಎಂದು ಆದಿ ಚುಂಚನಗಿರಿ ಮಠದ ಪೀಠಾಧಿಪತಿ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.ನಗರದ ಒಳಾಂಗಣ ಕ್ರೀಡಾಂಗಣದ ಪಕ್ಕ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಿರುವ ಮಹಾಶಿವರಾತ್ರಿ ಮಹೋತ್ಸವ ಹಾಗೂ ಯುವಜನೋತ್ಸವ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದರು.
ನಮ್ಮಲ್ಲಿ ಇಂದ್ರಿಯಗಳಿದ್ದು ಅವುಗಳನ್ನು ಸೆಳೆಯುವ ವಸ್ತುಗಳನ್ನು ಸೆಳೆಯದಿದ್ದರೆ ಆ ವಸ್ತುಗಳಿಗೆ ಬೆಲೆ ಇರುವುದಿಲ್ಲ. ಆಗ ಇಂದ್ರಿಯಗಳು ಶ್ರೇಷ್ಠವೆನಿಸುತ್ತವೆ. ಇಂದ್ರಿಯಗಳಿದ್ದು ಇಂದ್ರಿಯ ವಸ್ತುಗಳಿದ್ದು ಮನಸ್ಸು ಜಾಗೃತಿಯಲ್ಲಿಲ್ಲದಿದ್ದರೆ ಇಂದ್ರಿಯಗಳು, ಇಂದ್ರಿಯ ವಸ್ತುಗಳಿಗೂ ಬೆಲೆ ಇರುವುದಿಲ್ಲ. ಇಂದ್ರಿಯಗಳು, ಇಂದ್ರಿಯ ವಸ್ತುಗಳು, ಮನಸ್ಸು ಜಾಗೃತಿಯಲ್ಲಿದ್ದು ಮನಸ್ಸಿನ ಮೇಲೆ ಬೆಳಕು ಚೆಲ್ಲುವ ಬುದ್ಧಿ ಇಲ್ಲದಿದ್ದರೆ ಆ ಮೂರಕ್ಕೂ ಬೆಲೆ ಇರುವುದಿಲ್ಲ. ಇವೆಲ್ಲವೂ ಇದ್ದು ನಾನು ಎಂಬ ಪ್ರಜ್ಞೆಯೇ ಇಲ್ಲದಿದ್ದರೆ ಯಾವುದಕ್ಕೂ ಬೆಲೆ ಇರುವುದಿಲ್ಲ ಎಂದು ವಿವರಿಸಿದರು.ಶಾಸಕ ಪಿ.ರವಿಕುಮಾರ್ ಮಾತನಾಡಿ, ಜಗತ್ತಿನಲ್ಲಿ ಎಲ್ಲೆಡೆ ಯುದ್ಧದ ಕಾರ್ಮೋಡ ಆವರಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಸಮಾಜದವರು ಶಾಂತಿಯ ಸಂದೇಶ ಸಾರುತ್ತಿರುವುದು ಶ್ಲಾಘನೀಯ. ಶಾಂತಿ-ಸಹಬಾಳ್ವೆ ಮನುಷ್ಯನ ಜೀವನದಲ್ಲಿ ಬಹಳ ಮುಖ್ಯ. ದ್ವೇಷವನ್ನು ಮರೆತು ಶಾಂತಿ ಮಾರ್ಗವನ್ನು ಅನುಸರಿಸಿದರೆ ವಿಶ್ವಶಾಂತಿ ಮೂಡಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಮಾತನಾಡಿ, ಆಧ್ಯಾತ್ಮದ ಯಾನ ಶುರುವಾಗುವುದು ಮಹಾಶಿವರಾತ್ರಿಯಿಂದ. ಆಧ್ಯಾತ್ಮ ಯಾನದ ಮೂಲಕ ಅಂತರಂಗದ ಜಾಗೃತಿ, ಸತ್ಯಾನ್ವೇಷಣೆ ಆರಂಭವಾಗುತ್ತದೆ. ನಮ್ಮೊಳಗಿನ ಶಾಂತಿಯನ್ನು ಹುಡುಕಿ ಆತ್ಮದ ಸ್ವರೂಪವನ್ನು ತಿಳಿಯುತ್ತೇವೆ. ಎಲ್ಲದಕ್ಕೂ ಬುನಾದಿ ಮಹಾ ಶಿವರಾತ್ರಿ ಎಂದರು.
ನಮ್ಮೊಳಗಿನ ಶಾಂತಿಯನ್ನು ಹೇಗೆ ಹುಡುಕಿಕೊಳ್ಳಬೇಕು, ಜೀವನದ ರಹಸ್ಯ ಏನು, ಜೀವನದ ಯಾನ ಎಲ್ಲಿಗೆ ತಲುಪಬೇಕೆಂಬುದನ್ನು ಹೇಳಿಕೊಡುವುದು ಬ್ರಹ್ಮಕುಮಾರಿ ಸಮಾಜದ ಧ್ಯೇಯವಾಗಿದೆ. ಇಲ್ಲಿಂದ ಗೋಚರವಾಗುವ ಬೆಳಕು ಯಾವಾಗಲೂ ಶಾಶ್ವತವಾಗಿರಲಿ ಎಂದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಶಾರದಾ, ರಾಧಾ, ಸರೋಜ, ಸುನಂದಾ, ವಿಜಯಲಕ್ಷ್ಮೀ ಹಾಜರಿದ್ದರು.