ಭಾರತ ಸಶಕ್ತ ಆಗಿರಬೇಕಾದರೆ ಜಾತೀಯತೆ ನಿರ್ಮೂಲನೆ ಆಗಬೇಕು-ಹನುಮಂತ ಮಳಲಿ

KannadaprabhaNewsNetwork |  
Published : Feb 10, 2026, 02:15 AM IST
9ಎಚ್‌ವಿಆರ್1 | Kannada Prabha

ಸಾರಾಂಶ

ಭಾರತ ಸಶಕ್ತ ಆಗಿರಬೇಕಾದರೆ ಜಾತೀಯತೆಯನ್ನು ನಿರ್ಮೂಲನೆ ಮಾಡಬೇಕು. ಇಲ್ಲವಾದರೆ ಹಿಂದುತ್ವ ಉಳಿಯುವುದಿಲ್ಲ. ಯಾವುದೇ ಮತ ಪಂಥ ವಿರೋಧ ಮಾಡುತ್ತಿಲ್ಲ. ಹಿಂದೂಗಳನ್ನೂ ಒಗ್ಗೂಡಿಸಿಕೊಂಡು ಹೋದರೆ ಮಾತ್ರ ಭಾರತ ಅಭಿವೃದ್ಧಿ ಶೀಲ ರಾಷ್ಟ್ರ ಆಗುತ್ತದೆ ಎಂದು ಪಾರಂಪರಿಕ ವೈದ್ಯ, ವಾಗ್ಮಿ ಹನುಮಂತ ಮಳಲಿ ಹೇಳಿದರು.

ಹಾವೇರಿ: ಭಾರತ ಸಶಕ್ತ ಆಗಿರಬೇಕಾದರೆ ಜಾತೀಯತೆಯನ್ನು ನಿರ್ಮೂಲನೆ ಮಾಡಬೇಕು. ಇಲ್ಲವಾದರೆ ಹಿಂದುತ್ವ ಉಳಿಯುವುದಿಲ್ಲ. ಯಾವುದೇ ಮತ ಪಂಥ ವಿರೋಧ ಮಾಡುತ್ತಿಲ್ಲ. ಹಿಂದೂಗಳನ್ನೂ ಒಗ್ಗೂಡಿಸಿಕೊಂಡು ಹೋದರೆ ಮಾತ್ರ ಭಾರತ ಅಭಿವೃದ್ಧಿ ಶೀಲ ರಾಷ್ಟ್ರ ಆಗುತ್ತದೆ ಎಂದು ಪಾರಂಪರಿಕ ವೈದ್ಯ, ವಾಗ್ಮಿ ಹನುಮಂತ ಮಳಲಿ ಹೇಳಿದರು. ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ಹಿಂದೂ ಸಮ್ಮೇಳನ ಸಮಿತಿಯಿಂದ ಆಯೋಜಿಸಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕ್ರೈಸ್ತ ಸಮುದಾಯದಲ್ಲಿ ನೂರಕ್ಕೂ ಹೆಚ್ಚು, ಮುಸ್ಲಿಂ ಸಮಾಜದಲ್ಲಿ 54 ಉಪ ಪಂಗಡ, ಹಿಂದೂಗಳಲ್ಲಿ ಕೂಡ ನೂರಾರು ಉಪ ಪಂಗಡಗಳಿವೆ. ನಾವು ಕ್ರೈಸ್ತ, ನಾವು ಲಿಂಗಾಯತ ಎನ್ನುವ ಭಾವನೆ ಮೊದಲು ಹೋಗಬೇಕು. ಇಲ್ಲವಾದರೆ ಈ ದೇಶ ಉಳಿಯಲ್ಲ. ಉಪಾಸನೆ, ದೇವರು ಬೇರೆ ಬೇರೆ ಇರಬಹುದು. ಭಾಷೆಗಳು ಬೇಕಾದಷ್ಟು ಇವೆ. ದೇಶಕ್ಕೆ ಸ್ವರಾಜ್ಯ ಬಂದಿರಬಹುದು, ಆದರೆ ಸುರಾಜ್ಯ ಬಂದಿಲ್ಲ. ಗುಲಾಮಗಿರಿ ಪದ್ಧತಿ ಇನ್ನೂ ಬದಲಾವಣೆ ಆಗಿಲ್ಲ. ಸಾಂಸ್ಕೃತಿಕ ಗುಲಾಮಗಿರಿಯಲ್ಲಿಯೇ ಇದ್ದೇವೆ. ಸಮಾನ ಜೀವನ ಪದ್ಧತಿ, ಸಾಂಸ್ಕೃತಿಕ ಜ್ಞಾನ ಪದ್ಧತಿ ಇರುವ ದೇಶ ನಮ್ಮದು. ಆದರೆ ಹಿಂದೂ ಸಮಾಜವನ್ನು ಒಡೆದು ಭಾರತವನ್ನು ಕೈಗೆ ತೆಗೆದುಕೊಳ್ಳಬೇಕು ಎಂಬ ಹುನ್ನಾರ ನಡೆಸಿದ್ದಾರೆ ಎಂದರು. ಹಿಂದೂ ಎಂದರೆ ಓಂಕಾರ ಹೇಳುವವರು. ಓಂ ಶಬ್ದ ಸೇರಿಸಿಕೊಂಡು ಹೇಳುವ ಎಲ್ಲ ಸಮಾಜದವರು ಹಿಂದೂಗಳು. ಮನುಷ್ಯನು ಮೋಕ್ಷ ಪ್ರಾಪ್ತಿ ಮಾಡಿಕೊಳ್ಳಲು ಬರುವ ದೇಶ ಅದು ಭಾರತ. ಗೋವು ಪೂಜೆ ಮಾಡುವವರು ಹಿಂದೂಗಳು. ದೇಶಿ ಗೋವು ಇರುವ ಮನೆಯಲ್ಲಿ ಆಮ್ಲಜನಕ ಉತ್ಪಾದನೆ ಆಗುತ್ತದೆ. ಗಂಗೆಯನ್ನು ತಾಯಿಯಂತೆ ಪ್ರೀತಿಸುವವರು ಹಿಂದೂಗಳು. ಹಿಂಸೆ ಮಾಡದವರು, ಹಿಂಸೆ ದೂರ ಮಾಡುವವರು, ತಡೆಯುವವರು ಹಿಂಸೆಯನ್ನು ಒಪ್ಪದವರು ಹಿಂದೂ ಎಂದರು. ದೇಶದ ಎಲ್ಲಾ ಹಿಂದೂಗಳನ್ನು ಒಗ್ಗೂಡಿಸುವ ಸಲುವಾಗಿ 1925ರಲ್ಲಿ ಆರ್‌ಎಸ್‌ಎಸ್ ಹುಟ್ಟಿಕೊಂಡಿತು. ಆರ್‌ಎಸ್‌ಎಸ್ ಸ್ಥಾಪನೆಯಾಗಿ 100 ವರ್ಷ ತುಂಬಿದೆ. ನೂರರ ನೆನಪಿಗೆ ಹತ್ತಾರು ಕಾರ್ಯಕ್ರಮ ನಡೆಸುತ್ತಾ ಬಂದಿದ್ದೇವೆ. ಒಟ್ಟಾರೆಯಾಗಿ ನಾವೆಲ್ಲ ಹಿಂದೂಗಳು ಒಂದು ಎನ್ನುವ ಭಾವನೆ ಮೇಲೆ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಹೊಸಮಠದ ಶಾಂತಲಿಂಗ ಸ್ವಾಮೀಜಿ, ಹರಸೂರು ಬಣ್ಣದಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಹಿಂದೂ ಸಮಾಜೋತ್ಸವ ಸಮಿತಿ ಗೌರವಾಧ್ಯಕ್ಷ ಆರ್.ಎಸ್. ಮಾಗನೂರ, ಅಧ್ಯಕ್ಷ ವಿಜಯಕುಮಾರ ಗೊಡಚಿ ಇದ್ದರು. ಎಸ್.ಸಿ. ಹೊಸಮನಿ ಸ್ವಾಗತಿಸಿದರು.ಹಿಂದೂಗಳು ಒಗ್ಗಟ್ಟು ತೋರಿಸುವ ಮೂಲಕ ನಮ್ಮ ಸಂಸ್ಕೃತಿ, ಪರಂಪರೆಯನು ರಕ್ಷಿಸಿ ಬೆಳೆಸುವ ಕಾರ್ಯ ಮಾಡಬೇಕು. ಒಗ್ಗಟ್ಟಾಗಿ ಧರ್ಮ, ಸಂಸ್ಕೃತಿ ಉಳಿಸಿ ಬೆಳೆಸುವ ಅಭ್ಯರ್ಥಿಗೆ ಮತ ನೀಡಬೇಕು. ಹಿಂದೂ ಸಮಾಜೋತ್ಸವದಲ್ಲಿ ರಾಜಕೀಯ ತರಬಾರದು. ಭಾರತದಲ್ಲಿ ಯಾವುದಕ್ಕೂ ಕೊರತೆ ಇಲ್ಲ, ಸ್ವಾಭಿಮಾನದ ಕೊರತೆ ಇದೆ ಎಂದು ಪಾರಂಪರಿಕ ವೈದ್ಯ ಹನುಮಂತ ಮಳಲಿ ಹೇಳಿದರು. ಹಿಂದೂ ಸಂಸ್ಕೃತಿ ಉಳಿದು, ಬೆಳೆಯಬೇಕು: ನಾಡಿನಲ್ಲಿ ಹಿಂದೂ ಸಂಸ್ಕೃತಿ ಉಳಿಸಿ ಬೆಳೆಸಬೇಕು. ಜಗತ್ತಿನ ಎದುರು ಹಿಂದೂ ರಾಷ್ಟ್ರ ತಲೆ ಎತ್ತಿ ನಿಲ್ಲುವ ಕಾರ್ಯವನ್ನು ಪ್ರತಿಯೊಬ್ಬರು ಮಾಡಬೇಕು. ಭಾರತವು ಜಗತ್ತಿಗೆ ಸಾಂಸ್ಕೃತಿಕ ಉತ್ತಮ ಸಂದೇಶ ಕೊಟ್ಟ ದೇಶವಾಗಿದ್ದು, ಎಲ್ಲಾ ದೇಶಗಳಿಗೆ ಸೌಹಾರ್ದಯುತ ಪಾಠ ಹೇಳಿಕೊಟ್ಟಿದೆ. ಹೀಗಾಗಿ ಹಿಂದುಸ್ತಾನವನ್ನು ಗೌರವಿಸಿ ಪೂಜಿಸುತ್ತಾರೆ ಎಂದು ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.

ಜಗತ್ತಿಗೆ ಸಾಂಸ್ಕೃತಿಕ ಪಾಠ ಹೇಳಿಕೊಟ್ಟ ನಾವುಗಳು ನಮ್ಮ ಸಂಸ್ಕೃತಿ ಮರೆಯದೆ ಪರಕೀಯರು, ಪರದೇಶವರು, ಪರ ಧರ್ಮದವರು ದಬ್ಬಾಳಿಕೆ ಮಾಡಿದಾಗ ಅದನ್ನು ಸಹಿಸಿಕೊಳ್ಳದೆ ಎದುರಿಸುವ ದಿಟ್ಟತನ ತೋರಬೇಕು. ಮನೆಯ ಪಕ್ಕದಲ್ಲಿ ಏನೋ ನಡೆದಾಗ ಸುಮ್ಮನೆ ಇರದೇ ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕು. ಹಿಂದೂ ಸಮಾಜೋತ್ಸವ ಸಮಾಜದ ಜನರನ್ನು ಒಗ್ಗೂಡಿಸುವ ಕಾರ್ಯಕ್ರಮವಾಗಿದ್ದು, ದೇಶದ ಪರಂಪರೆ, ಸಂಸ್ಕೃತಿಯನ್ನು ಮುನ್ನಡೆಸಿಕೊಂಡು ಹೋಗಬೇಕು. ಹಿಂದೂ ಸಂಸ್ಕೃತಿ ಬಗ್ಗೆ ಹೇಳಿಕೊಡುವ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ ಶಿಕ್ಷಣ ನೀಡುವ ಹೊಸ ಕ್ರಾಂತಿಗೆ ಮುನ್ನುಡಿ ಬರೆದು ಹಿಂದೂ ಸಂಸ್ಕೃತಿ ಪ್ರೀತಿಸುವ ಕೆಲಸ ಮಾಡಬೇಕು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೋಹಿತ್ ವೇಮುಲ ಕಾಯ್ದೆ ಅನುಷ್ಠಾನಕ್ಕೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ
ನಿಮ್ಮ ಬ್ಯಾಂಕ್‌ ಖಾತೆ ವಿವರ ಕೊಟ್ಟೀರಾ ಜೋಕೆ!