ಕನ್ನಡಪ್ರಭ ವಾರ್ತೆ ಸಕಲೇಶಪುರ
ತಾಲೂಕಿನ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗದ್ದೆ ಗ್ರಾಮದ ರೈತ ಪುಟ್ಟಸ್ವಾಮಿಗೌಡ ಅವರ ಜಮೀನಿನಲ್ಲಿ ಕಾಡು ಕೃಷಿಕರ 20ನೇ ಪಾಠಶಾಲೆಯನ್ನು ಉದ್ಘಾಟಿಸಿ ಮಾತನಾಡಿ, ಕೃಷಿ ಪುರಾತನ ವಿದ್ಯೆಯಾಗಿದ್ದು, ಆಧುನಿಕ ಕೃಷಿಯಲ್ಲಿ ವಿವೇಚನೆಯಿಲ್ಲದ ರಾಸಾಯನಿಕ ಬಳಕೆಯಿಂದ ಮಣ್ಣು ಮತ್ತು ಆಹಾರದ ಗುಣಮಟ್ಟದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪರಿಸರ ಸ್ನೇಹಿ ಹಾಗೂ ನೈಸರ್ಗಿಕ ಕೃಷಿ ಪದ್ಧತಿಗಳತ್ತ ಗಮನಹರಿಸುವ ಅಗತ್ಯವಿದೆ ಎಂದರು. ಕಾಡು ಕೃಷಿಕರ ಪಾಠಶಾಲೆಯ ಸಂಸ್ಥಾಪಕ ಡಾ. ಮಳಲಿಗೌಡ ಅವರನ್ನು ‘ಕಾಡು ಕೃಷಿಯ ಮಹರ್ಷಿ’ ಎಂದು ಬಣ್ಣಿಸಿದru ಅಮೆರಿಕದಿಂದ ಭಾರತಕ್ಕೆ ಮರಳಿದ ಅವರು ಸಾಮಾನ್ಯ ರೈತರೊಂದಿಗೆ ನಿಂತು ಕಾಡು ಕೃಷಿಯ ಪರಿಕಲ್ಪನೆಯನ್ನು ಬೆಳೆಸುತ್ತಿರುವುದು ಶ್ಲಾಘನೀಯ ಎಂದರು. ದಟ್ಟ ಕಾಡಿನಲ್ಲಿ ಯಾವುದೇ ಕೃತಕ ಪೋಷಣೆ ಇಲ್ಲದೆ ಮರ-ಗಿಡಗಳು ಸಹಬಾಳ್ವೆಯಿಂದ ಆರೋಗ್ಯಕರವಾಗಿ ಬೆಳೆಯುವ ಪ್ರಕೃತಿಯ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ಅರಿತು ಕೃಷಿಯಲ್ಲಿ ಅಳವಡಿಸಿಕೊಳ್ಳುವ ವಿಧಾನವನ್ನು ಕಾಡು ಕೃಷಿ ಪಾಠಶಾಲೆ ತಿಳಿಸಿಕೊಡುತ್ತಿದೆ ಎಂದು ಹೇಳಿದರು.
ರೈತರು ಮಳೆ ಕೊರತೆ, ನೀರು, ವಿದ್ಯುತ್ ಹಾಗೂ ಮಾರುಕಟ್ಟೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸಣ್ಣ ಮತ್ತು ಅತಿ ಸಣ್ಣ ರೈತರು ಆರ್ಥಿಕವಾಗಿ ಮೇಲೇರಲು ಉತ್ಪಾದನೋತ್ತರ ಕೃಷಿಗೂ ಆದ್ಯತೆ ನೀಡಬೇಕು. ಒಂದು ಬೀಜದಿಂದ ಸಾವಿರಾರು ಬೀಜಗಳನ್ನು ಉತ್ಪಾದಿಸುವ ಸಾಮರ್ಥ್ಯ ಕೃಷಿಯಲ್ಲಿ ಮಾತ್ರ ಸಾಧ್ಯವಾಗಿದ್ದು, ಈ ಪ್ರಕೃತಿದತ್ತ ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಕಾಡು ಕೃಷಿಕರ ಪಾಠಶಾಲೆ ರೈತರ ಬದುಕನ್ನು ಹಸನಗೊಳಿಸುವ ನಿಟ್ಟಿನಲ್ಲಿ ನಡೆಸುತ್ತಿರುವ ಪ್ರಯತ್ನ ಆಶಾದಾಯಕವಾಗಿದ್ದು, ಇಂತಹ ಇನ್ನಷ್ಟು ಪಾಠಶಾಲೆಗಳಿಗೆ ಅವಕಾಶ ದೊರೆಯಬೇಕು ಎಂದರು.ಕಾರ್ಯಕ್ರಮದಲ್ಲಿ ಕಾಡು ಕೃಷಿ ಪಾಠಶಾಲೆಯ ಸಂಸ್ಥಾಪಕ ಡಾ. ಮಳಲಿಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಡು ಕೃಷಿ ಪಾಠಶಾಲೆಗಳು ಬೆಳೆದು ಬಂದ ಹಾದಿಯನ್ನು ವಿವರಿಸಿದರು. ವಿವಿಧ ಜಿಲ್ಲೆಗಳಲ್ಲಿ ನಡೆದ ಪಾಠಶಾಲೆಗಳ ಮೂಲಕ ರೈತರಲ್ಲಿ ಉಂಟಾಗಿರುವ ಬದಲಾವಣೆಗಳ ಕುರಿತು ಮಾಹಿತಿ ನೀಡಿದರು. 20ನೇ ಪಾಠಶಾಲೆಯ ಆತಿಥೇಯ ರೈತ ಪುಟ್ಟಸ್ವಾಮಿಗೌಡ ಹಾಗೂ ಮೊದಲ ಕಾಡು ಕೃಷಿ ಪಾಠಶಾಲೆಯ ಗುರು ಸೋಮಶೇಖರ್ ತಮ್ಮ ಅನುಭವ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಜಂಟಿ ಕೃಷಿ ನಿರ್ದೇಶಕ ರಮೇಶ್ ಕುಮಾರ್, ರೈತ ಹೊನ್ನಮ್ಮ, ಸಹಾಯಕ ಕೃಷಿ ನಿರ್ದೇಶಕ ಪ್ರಕಾಶ್ ಕುಮಾರ್ ಸಾಹಿತಿ ಹಾಗೂ ಕೃಷಿಕ ಬಿ.ಡಿ. ಕುಮಾರ್ ಸೇರಿದಂತೆ ವಿವಿಧ ಜಿಲ್ಲೆಗಳು ಹಾಗೂ ತಾಲೂಕುಗಳಿಂದ ಆಗಮಿಸಿದ್ದ ರೈತರು, ಯುವಕರು ಉಪಸ್ಥಿತರಿದ್ದರು.