ಕನ್ನಡಪ್ರಭ ವಾರ್ತೆ ರಾಮನಗರ
ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅರಣ್ಯಾಧಿಕಾರಿಗಳ ಬೇಜವಾಬ್ದಾರಿತನದಿಂದ ಎರಡು ಕಾಡಾನೆಗಳ ಹತ್ಯೆಯಾಗಿದೆ. ನ.7ರಂದು ಸಂಜೆ ವೇಳೆಗೆ ತೆಂಗಿನಕಲ್ಲು ಅರಣ್ಯದಿಂದ 8 ಆನೆಗಳ ಹಿಂದು ಮರಳೆ ಗ್ರಾಮದ ಸಮೀಪಕ್ಕೆ ಬಂದಿಳಿದಿದೆ. ಇವುಗಳನ್ನು ಕನಕಪುರ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ಈ ಆನೆಗಳನ್ನು ಜಾಡು ತಪ್ಪಿಸಿ ಕೋಡಿಹಳ್ಳಿ ಅರಣ್ಯ ವ್ಯಾಪ್ತಿಗೆ ತಲುಪಿಸಿದ್ದಾರೆ ಎಂದು ತಿಳಿಸಿದರು.
ಅರಣ್ಯಾಧಿಕಾರಿಗಳು ಹಾಗೂ ವಾಚರ್ಗಳು ತಮ್ಮ ಜವಾಬ್ದಾರಿ ಕಳೆದುಕೊಳ್ಳುವ ಉದ್ದೇಶದಿಂದ ಆನೆಗಳನ್ನು ಜಾಡು ತಪ್ಪಿಸಿ ಕಾನೂನುಬಾಹಿರವಾಗಿ ಪಟಾಕಿ ಸಿಡಿಸಿ ಜೀಪ್ಗಳಲ್ಲಿ ಸೈರನ್ ಹಾಕಿಕೊಂಡು ಏಕಾಏಕಿ ಸುಮಾರು 5 ಕಿ.ಮೀ.ವರೆಗೆ ವೇಗವಾಗಿ ಓಡಿಸಿಕೊಂಡು ಬಂದು ಆನೆಗಳನ್ನು ಕಾಡಿಗಟ್ಟುವುದನ್ನು ಬಿಟ್ಟು ವಿಪರೀತವಾಗಿ ಜೊಂಡು ಬೆಳೆದಿರುವ ಅರ್ಕಾವತಿ ನದಿಯ ಹಿನ್ನೀರಿಗೆ ಆನೆಗಳನ್ನು ಕೆಡವಿದ್ದಾರೆ ಎಂದು ತಿಳಿಸಿದರು.ಆನೆಗಳನ್ನು ಹಿನ್ನೀರಿಗೆ ಕೆಡವಿ ಮುಂದೇನಾಗಿದೆ ಎಂಬುದನ್ನು ಗಮನಿಸದೆ ಬೇಜವಾಬ್ದಾರಿತನದಿಂದ ಆನೆಗಳು ಎದ್ದು ರಾತ್ರಿ ವೇಳೆಗೆ ಹೋಗುತ್ತವೆ ಎಂಬ ಭರವಸೆಯಿಂದ ಹೊರಟು ಹೋಗಿದ್ದಾರೆ. ಆದರೆ ರಾತ್ರಿ ವೇಳೆ ಹಾಗೂ ಸುಮಾರು 5 ಕಿ.ಮೀ. ರಸ್ತೆಯಲ್ಲಿ ಭಯಗ್ರಸ್ತ ಪರಿಸ್ಥಿತಿಯಲ್ಲಿ ಓಡಿ ವಿಪರೀತ ದಣಿದಿದ್ದ ಆನೆಗಳ ಪೈಕಿ ಆರು ಆನೆಗಳು ತಪ್ಪಿಸಿಕೊಂಡಿವೆ ಎಂದರು.
ಆದರೆ ತಡವಾಗಿ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದಾರೆ. ಉನ್ನತ ಅಧಿಕಾರಿಗಳಿಗೆ ಎರಡು ಕಾಡಾನೆಗಳ ಸಾವಿನ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ. ಎರಡು ಕಾಡಾನೆಗಳ ಸಾವಿನ ಬಗ್ಗೆ ನ್ಯಾಯಯುತ ತನಿಖೆ ನಡೆಸಿ, ಕಾಡಾನೆಗಳ ದುರಂತ ಸಾವಿಗೆ ಕಾರಣರಾದರವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅರಣ್ಯಾಧಿಕಾರಿಗಳು ಹಾಗೂ ವಾಚರ್ಗಳು ತಮ್ಮ ಬೇಜವಾಬ್ದಾರಿತನದಿಂದ ಹಾಗೂ ನಿರ್ಲಕ್ಷ್ಯತನದಿಂದ ಆದ ದುರ್ಘಟನೆ ಸಂಬಂಧ ಕರ್ತವ್ಯ ಲೋಪದ ಶಿಸ್ತು ಕ್ರಮದಿಂದ ತಪ್ಪಿಸಿಕೊಳ್ಳಲು ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಧಮ್ಮ ದೀವಿಗೆ ಚಾರಿಟಬಲ್ ಟ್ರಸ್ಟಿನ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿದರು.