ಮಡಿಕೇರಿ: ಕೊಡಗು ಜಿಲ್ಲಾ ಬಂಟರ ಭವನ ಟ್ರಸ್ಟ್ ಮತ್ತು ಕೊಡಗು ಜಿಲ್ಲಾ ಬಂಟರ ಸಂಘ ವತಿಯಿಂದ ಮಡಿಕೇರಿಯ ಅಬ್ಬಿಫಾಲ್ಸ್ ರಸ್ತೆಯಲ್ಲಿ ಕೊಡಗು ಬಂಟರ ಭವನ ನಿರ್ಮಾಣ ಕಾಮಗಾರಿಗೆ ಮೇ 1ರಂದು ಶಂಕುಸ್ಥಾಪನೆ ನೆರವೇರಲಿದೆ.
ದಾನಿ ದಿ.ಡಾ.ಬಿ.ಟಿ.ಪ್ರೇಮನಾಥ್ ಪೂಂಜಾ ಅವರು ಭವನ ನಿರ್ಮಾಣಕ್ಕಾಗಿ ತಮ್ಮ 0.52 ಎಕರೆ ಜಾಗವನ್ನು ದಶಕದ ಹಿಂದೆಯೇ ನೀಡಿದ್ದರು. ಸುಸಜ್ಜಿತವಾದ ಬಂಟರ ಭವನ ನಿರ್ಮಾಣವಾಗಬೇಕೆಂಬುದು ನಮ್ಮ ಸಮುದಾಯದ ಹಲವು ವರ್ಷಗಳ ಕನಸಾಗಿತ್ತು. ಇದು ಈಗ ನನಸಾಗುತ್ತಿದೆ. ಕಾರ್ಯಕ್ರಮದಲ್ಲಿ ದಿವಂಗತ ಪ್ರೇಮನಾಥ್ ಪೂಂಜಾ ಅವರಿಗೆ ಮರಣೋತ್ತರವಾಗಿ ವಿಶೇಷ ಬಿರುದು ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಯುವ ಬಂಟ್ಸ್ ಕ್ರೀಡಾಕೂಟ: ಶಂಕುಸ್ಥಾಪನೆ ಅಂಗವಾಗಿ ಏ.30 ರಿಂದ ಮೇ 3 ರವರೆಗೆ ಕೊಡಗು ಯುವ ಬಂಟ್ಸ್ ವತಿಯಿಂದ ಮಡಿಕೇರಿಯಲ್ಲಿ ಕ್ರೀಡಾಕೂಟ ಆಯೋಜಿಸಲಾಗಿದೆ. ಪುರುಷರಿಗೆ ಕ್ರಿಕೆಟ್, ವಾಲಿಬಾಲ್, ಹಗ್ಗ ಜಗ್ಗಾಟ, ಮಹಿಳೆಯರಿಗೆ ಥ್ರೋಬಾಲ್, ಹಗ್ಗ ಜಗ್ಗಾಟ ಹಾಗೂ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.ಕೊಡಗು ಜಿಲ್ಲಾ ಬಂಟರ ಸಂಘದ ಗೌರವಾಧ್ಯಕ್ಷ ಬಿ.ಬಿ.ಐತಪ್ಪ ರೈ, ಉಪಾಧ್ಯಕ್ಷ ಬಿ.ಎಸ್.ಸದಾಶಿವ ರೈ, ಕಾರ್ಯದರ್ಶಿ ರವೀಂದ್ರ.ವಿ.ರೈ, ಬಂಟರ ಭವನ ಟ್ರಸ್ಟ್ ಕಾರ್ಯದರ್ಶಿ ಅಪ್ಪು ಬಾಲಕೃಷ್ಣ ರೈ, ಯುವ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಬಿ.ಕೆ.ಸದಾನಂದ ರೈ ಸುದ್ದಿಗೋಷ್ಠಿಯಲ್ಲಿದ್ದರು.