ಹುಬ್ಬಳ್ಳಿ: ಬೆಳಗಾವಿಯಲ್ಲಿ ನಡೆಯುವ ಚಳಿಗಾಲ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಕುರಿತು ಚರ್ಚಿಸಲು ಒಟ್ಟು ನಾಲ್ಕು ದಿನ ಮೀಸಲಿಡಲಾಗಿದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.
ಕೃಷ್ಣಾ ಮೇಲ್ದಂಡೆ, ಮಹದಾಯಿ ಮತ್ತು ಕಳಸಾ ಬಂಡೂರಿ, ತುಂಗಭದ್ರಾ, ಕಾರಂಜಾ, ಕೃಷಿ, ಅರಣ್ಯಭೂಮಿ ಅತಿಕ್ರಮಣದಾರರು ಮತ್ತು ಸಂತ್ರಸ್ತರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿದೆ. ಸಕ್ಕರೆ ಕಾರ್ಖಾನೆ, ತೋಟಗಾರಿಕೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಚರ್ಚಿಸುವಂತೆ ಸಚಿವ, ಶಾಸಕರಿಗೆ ಸೂಚನೆ ನೀಡಲಾಗಿದೆ ಎಂದರು.
ಹಿಂದಿನ ಅಧಿವೇಶನಕ್ಕಿಂತ ಹೆಚ್ಚು ಕ್ರಿಯಾತ್ಮಕ ಅಧಿವೇಶನ ಇದಾಗಲಿದ್ದು, ಅನಗತ್ಯ ಚರ್ಚೆಗೆ ಅವಕಾಶ ಇಲ್ಲ. ಯಾವ ವಿಷಯಗಳ ಕುರಿತು ಚರ್ಚೆ ನಡೆಯಲಿದೆ ಎಂಬುದರ ಬಗ್ಗೆ ಈಗಾಗಲೇ ವಿಷಯಪಟ್ಟಿ ಸಿದ್ಧಪಡಿಸಲಾಗಿದೆ. ಶೂನ್ಯ ವೇಳೆಯ ನಂತರ ಈ ವಿಷಯಗಳ ಕುರಿತು ಚರ್ಚೆ ನಡೆಯಲಿದ್ದು, ಅಧಿವೇಶನಕ್ಕೂ ಎಲ್ಲರಿಗೂ ಹಾಜರಾಗುವಂತೆ ಸೂಚಿಸಲಾಗಿದೆ. ಈ ಕುರಿತು ವಿರೋಧಪಕ್ಷದ ನಾಯಕರ ಜತೆಗೂ ಮಾತನಾಡಿದ್ದೇನೆ ಎಂದರು.ಅಧಿವೇಶನಕ್ಕೆ ಶಾಸಕರು ಗೈರಾಗುವ ಕುರಿತು ಕೇಳಿದ ಪ್ರಶ್ನೆಗೆ, ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಜನರ ಸಮಸ್ಯೆಗಳಿಗೆ ಪರಿಹಾರ ನೀಡುವುದು ಜನಪ್ರತಿನಿಧಿಗಳ ಕೆಲಸ. ಕೆಲವು ಶಾಸಕರು ಸಹಿ ಮಾಡಿ ಹಾಗೆಯೇ ಹೋಗುತ್ತಾರೆ. ಅಧಿವೇಶನದಲ್ಲಿ ಪಾಲ್ಗೊಂಡು ಪ್ರಶ್ನೆ ಕೇಳುವಂತೆ ಜನಪ್ರತಿನಿಧಿಗಳಿಗೆ ಮನವರಿಕೆ ಮಾಡುತ್ತಿದ್ದೇವೆ. ಈ ಬಾರಿ ಎಲ್ಲ ಶಾಸಕರು ಭಾಗವಹಿಸುವ ವಿಶ್ವಾಸವಿದೆ. ಅಧಿವೇಶನದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ವಿಶೇಷ ಚರ್ಚೆ ನಡೆಸಲಾಗುವುದು ಎಂದರು.