ಹೆದ್ದಾರಿ ದರೋಡೆ ಪ್ರಕರಣ: ಅಪ್ರಾಪ್ತ ಸೇರಿ ನಾಲ್ವರು ಪೊಲೀಸರ ವಶ

KannadaprabhaNewsNetwork |  
Published : May 25, 2024, 12:51 AM ISTUpdated : May 25, 2024, 12:52 AM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ಬೈಕ್ ಸವಾರನನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ತಡೆದು, ₹22 ಸಾವಿರ ಮೌಲ್ಯದ ವಿವೋ ಮೊಬೈಲ್ ದರೋಡೆ ಮಾಡಿದ್ದ ಆರೋಪಿಗಳ ಪೈಕಿ ಓರ್ವ ಅಪ್ರಾಪ್ತ ಸೇರಿದಂತೆ ನಾಲ್ವರನ್ನು ವಿದ್ಯಾ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

- ಎಸ್‌ಒಜಿ ಕಾಲನಿ ಮಲ್ಲಿಕಾರ್ಜುನ್‌ರಿಂದ ಮೊಬೈಲ್‌ ಅಪಹರಿಸಿದ್ದ ತಂಡ

- ಎಸ್.ಗಣೇಶ), ಮನುಕುಮಾರ, ಸಿ.ಹೃತಿಕ್ ಸೇರಿದಂತೆ ಅಪ್ರಾಪ್ತನಿಂದ ಕೃತ್ಯ - - - ಕನ್ನಡಪ್ರಭ ವಾರ್ತೆ, ದಾವಣಗೆರೆ ಬೈಕ್ ಸವಾರನನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ತಡೆದು, ₹22 ಸಾವಿರ ಮೌಲ್ಯದ ವಿವೋ ಮೊಬೈಲ್ ದರೋಡೆ ಮಾಡಿದ್ದ ಆರೋಪಿಗಳ ಪೈಕಿ ಓರ್ವ ಅಪ್ರಾಪ್ತ ಸೇರಿದಂತೆ ನಾಲ್ವರನ್ನು ವಿದ್ಯಾ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಗರದ ಹೊರವಲಯದ ಬಸಾಪುರ ಗ್ರಾಮದ ವಾಸಿ, ಗಾರೆ ಕೆಲಸಗಾರ ಎಸ್.ಗಣೇಶ (24), ಮನುಕುಮಾರ ಅಲಿಯಾಸ್ ಮನು (19), ಸಿ.ಹೃತಿಕ್ (24) ಹಾಗೂ ಅಪ್ರಾಪ್ತನನ್ನು ಪೊಲೀಸರು ವಶಕ್ಕೆ ಪಡೆದು, ₹22 ಸಾವಿರ ಮೌಲ್ಯದ ವಿವೋ ಮೊಬೈಲ್ ಜಪ್ತಿ ಮಾಡಿದ್ದಾರೆ.

ಎಸ್‌ಒಜಿ ಕಾಲನಿ ವಾಸಿ ಎಸ್.ಮಲ್ಲಿಕಾರ್ಜುನ (35) ಎಂಬವರು ಏ.7ರ ರಾತ್ರಿ 11ರಿಂದ 11.15ರ ವೇಳೆ ರಾಷ್ಟ್ರೀಯ ಹೆದ್ದಾರಿ-48 ಬೈಪಾಸ್ ರಸ್ತೆಯ ಎಸ್‌.ಎಸ್‌. ಹೈಟೆಕ್ ಆಸ್ಪತ್ರೆ ಬಳಿ ರೈಲ್ವೆ ಮೇಲ್ಸೇತುವೆ ಬಳಿ ಬರುವಾಗ 2 ಬೈಕ್‌ಗಳಲ್ಲಿ 6 ಜನರು ಅವರನ್ನು ತಡೆದಿದ್ದರು. ಬೈಕ್‌ನಿಂದ ಕೆಳಗಿಳಿದಾಗ ಅವರನ್ನು ತಳ್ಳಾಡಿ, ಹೆದರಿಸಿ, ಪ್ಯಾಂಟ್ ಜೇಬಿನಲ್ಲಿದ್ದ ಮೊಬೈಲ್ ಕಿತ್ತುಕೊಂಡು ಹೋಗಿದ್ದರು. ಈ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆಗೆ ಮಲ್ಲಿಕಾರ್ಜುನ ದೂರು ನೀಡಿದ್ದರು.

ಡಿವೈಎಸ್‌ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ವಿದ್ಯಾನಗರ ಇನ್‌ಸ್ಪೆಕ್ಟರ್ ಪ್ರಭಾವತಿ ಸಿ.ಶೇತಸನದಿ ನೇತೃತ್ವದಲ್ಲಿ ಪಿಎಸ್‌ಐ ಎಂ.ಎಸ್.ಹೊಸಮನಿ, ಸಿಬ್ಬಂದಿ ಭೋಜಪ್ಪ ಕಿಚಡಿ, ಟಿ.ಮಂಜಪ್ಪ, ಯೋಗೀಶ ನಾಯ್ಕ, ಗೋಪಿನಾಥ ಬಿ ನಾಯ್ಕ, ಆರ್.ಲಕ್ಷ್ಮಣ, ಎಸ್‌ಪಿ ಕಚೇರಿ ಸಿಬ್ಬಂದಿ ರಾಘವೇಂದ್ರ, ಶಾಂತರಾಜ, ಕಮಾಂಡ್ ಸೆಂಟರ್ ಸಿಬ್ಬಂದಿ ಮಾರುತಿ, ಸೋಮು ಅವರಿದ್ದ ತಂಡ ಪ್ರಕರಣದ ಆರೋಪಿಗಳ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ತಂಡದ ಕಾರ್ಯವನ್ನು ಶ್ಲಾಘಿಸಿದ್ದಾರೆ.

PREV