ಎಫ್‌ಪಿಎಐ ಜಿಲ್ಲೆಯ ಅಭಿವೃದ್ಧಿಗೆ ಉನ್ನತ ಕೊಡುಗೆ ನೀಡಿದೆ

KannadaprabhaNewsNetwork | Published : Jun 25, 2024 12:35 AM

ಸಾರಾಂಶ

ಬೀದರ್ ಪಟ್ಟಣದ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಶನಿವಾರ ಎಫ್‌ಪಿಎಐ ವತಿಯಿಂದ ಸುವರ್ಣ ಮಹೋತ್ಸವ ಕಾರ್ಯಕ್ರಮ ಜರುಗಿತು.

ಕನ್ನಡಪ್ರಭ ವಾರ್ತೆ ಬೀದರ್

ಎಫ್‌ಪಿಎಐ(ಭಾರತೀಯ ಕುಟುಂಬ ಕಲ್ಯಾಣ ಯೋಜನಾ ಘಟಕ) ಬೀದರ್ ಶಾಖೆಯು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಉನ್ನತ ಕೊಡುಗೆ ನೀಡುತ್ತಿದೆ ಎಂದು ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಡಾ. ರತ್ನಮಾಲಾ ದೇಸಾಯಿ ತಿಳಿಸಿದರು.

ನಗರದ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಶನಿವಾರ ನಡೆದ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಶಾಖೆಯು ಎಫ್‌ಪಿಎಐ ಶಾಖೆಗಳಲ್ಲಿ ಒಂದು ಉತ್ತಮ ಶಾಖೆಯಾಗಿ ಹೊರಹೊಮ್ಮಿದೆ ಎಂದರು.

ಎಫ್‌ಪಿಎಐ ಸಂಸ್ಥೆಯ ಡೈರೆಕ್ಟರ್ ಜನರಲ್ ಡಾ.ಕಲ್ಪನಾ ಆಪ್ಟೆ ಮಾತನಾಡಿ, ಬೀದರ್ ಶಾಖೆ ಪ್ರಾರಂಭದಿಂದಲೂ ಉತ್ತಮ ಸೇವೆ ನೀಡುತ್ತಾ ಎಲ್ಲಾ ಕಾರ್ಯ ಚಟುವಟಿಕೆಗಳು ತುಂಬಾ ಪರಿಣಾಮಕಾರಿಯಾಗಿ ಮಾಡುತ್ತಾ ಬಂದಿದ್ದು, ಮುಂಬರುವ ದಿನಗಳಲ್ಲಿ ಇದೇ ರೀತಿ ಕಾರ್ಯನಿರ್ವಹಿಸಲಿ ಎಂದು ತಿಳಿಸಿದರು.

ಡೆಪ್ಯುಟಿ ಡೈರೆಕ್ಟರ್ ಜನರಲ್ ಅಮಿತಾ ಧಾನು ಮಾತನಾಡಿ, ಎಫ್‌ಪಿಏಐ ಬೀದರ್ ಶಾಖೆಯ ಎಲ್ಲಾ ಪದಾಧಿಕಾರಿಗಳು ಸಿಬ್ಬಂದಿಗಳು ಈ ಶಾಖೆಯ ಸೇವೆ ನೀಡಿ ತನ್ನದೇ ಆದ ಕೊಡುಗೆ ನೀಡುತ್ತಿದೆ ಜೊತೆಗೆ ಯಾವುದೇ ಕಾರ್ಯಕ್ರಮ ನೀಡಿದರೂ ಕೂಡ ಚಾಚೂ ತಪ್ಪದೇ ಉತ್ತಮ ಫಲಿತಾಂಶದೊಂದಿಗೆ ಕಾರ್ಯಕ್ರಮ ಯಶಸ್ವಿಗೊಳಿಸಲು ಹೆಸರುವಾಸಿಯಾಗಿದೆ ಎಂದರು.

ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ದಿಲೀಪ್ ಡೊಂಗ್ರೆ ಮಾತನಾಡಿ, ಎಫ್‌ಪಿಏಐ ಬೀದರ್ ಶಾಖೆಯು ಕುಟುಂಬ ಯೋಜನೆ ಸುರಕ್ಷಿತ ಗರ್ಭಪಾತ ಮತ್ತು ಇನ್ನಿತರ ಸೇವೆಗಳು ಜಿಲ್ಲೆಗೆ ಸಮಗ್ರವಾಗಿ ನೀಡುತ್ತಿದೆ. ಶಾಖೆಗೆ ಬೇಕಾದ ಸಹಕಾರ ಸಹಾಯ ಮಾಡಲು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಯ ಕಚೇರಿಯಿಂದ ಒದಗಿಸುವ ಎಲ್ಲಾ ಸಹಾಯ, ಸಹಕಾರ ನೀಡಲಾಗುತ್ತದೆ ಎಂದರು.

ಪ್ರೊ. ಪೂರ್ಣಿಮಾ ಜಾರ್ಜ್‌ ಮಾತನಾಡಿ, ಭಾರತೀಯ ಕುಟುಂಬ ಕಲ್ಯಾಣ ಯೋಜನಾ ಘಟಕ ಒಂದು ರಾಷ್ಟ್ರೀಯ ಸೇವಾ ಸಂಸ್ಥೆಯಾಗಿದ್ದು ಬೀದರ್‌ನಲ್ಲಿ 1973 ರಲ್ಲಿ ಡಾ. ಕೆಎಲ್ ಕೃಷ್ಣಮೂರ್ತಿ ಹಾಗೂ ಡಾ.ಎಸ್‌ಎಸ್. ಸಿದ್ದ ರೆಡ್ಡಿ ಅವರ ನೇತೃತ್ವದಲ್ಲಿ ಪ್ರಾರಂಭವಾದ ಕುಟುಂಬ ಯೋಜನೆ, ಸಂತಾನೋತ್ಪತ್ತಿ ಆರೋಗ್ಯ ಸೇವೆ ಮತ್ತು ಮಾಹಿತಿ ನೀಡುವ ಅಗ್ರಗಣ್ಯ ಸಂಸ್ಥೆಯಾಗಿದೆ.

ಎಫ್‌ಪಿಎಐ ಬೀದರ್ ಶಾಖೆಯ ಅಧ್ಯಕ್ಷ ಡಾ.ನಾಗೇಶ್ ಪಾಟೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೀದರ್ ಶಾಖೆ ಒಂದು ಉತ್ತಮ ಶಾಖೆಯಾಗಿದ್ದು ಮುಂಬರುವ ದಿನಗಳಲ್ಲಿ ಹಲವಾರು ಯೋಜನೆ ಹಮ್ಮಿಕೊಂಡಿದೆ ಹಾಗೂ ಬಡವ ದೀನ ದಲಿತರಿಗಾಗಿ, ನಿರ್ಗತಿಕರಿಗಾಗಿ ಸದಾ ಸೇವೆ ನೀಡಲು ಸನ್ನದ್ಧವಾಗಿರುತ್ತದೆ ಎಂದರು.

ಸುವರ್ಣ ಮಹೋತ್ಸವದ ಅಂಗವಾಗಿ ಶಾಲಾ ಕಾಲೇಜುಗಳಲ್ಲಿ ಹಮ್ಮಿಕೊಂಡ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಈ ಸಂದರ್ಭದಲ್ಲಿ ಇಂಪ್ಲಾಂಟ್ ಗರ್ಭ ನಿರೋಧಕ ಅಳವಡಿಕೆಯ ವಿಧಾನದ ತರಬೇತಿ ಪಡೆದ ವೈದ್ಯರಿಗೆ ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಡಾ.ವಿಜಯಶ್ರೀ ಬಶೆಟ್ಟಿ, ಡಾ.ವಿವಿ ತಳಪಲ್ಲಿಕರ, ಡಾ.ಸುಭಾಷ್ ಬಶೆಟ್ಟಿ, ಡಾ.ಆರತಿ ರಘು, ಅಂಬುಜ ವಿಶ್ವಕರ್ಮ, ರೇಖಾ ಚಂದಾ, ಪದ್ಮಜಾ ವಿಶ್ವಕರ್ಮ, ಡಾಕ್ಟರ್ ವಿಜಯ ಕೊಂಡಾ, ಮಲ್ಲಿಕಾರ್ಜುನ ಪಾಟೀಲ್, ಸುಬ್ರಹ್ಮಣ್ಯ ಪ್ರಭು, ಡಾ.ಎ.ಸಿ ಲಲಿತಮ್ಮ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Share this article