ಸಾಲವಿರುವ ವಾಹನಗಳ ಮಾರುವನೆಪದಲ್ಲಿ ವಂಚನೆ: ನಾಲ್ವರ ಸೆರೆ

KannadaprabhaNewsNetwork |  
Published : Jul 29, 2026, 04:00 AM IST
ಸೆರೆ | Kannada Prabha

ಸಾರಾಂಶ

ವಾಹನಗಳ ಮೇಲಿನ ಸಾಲ ತೀರಿಸಿ ಮಾರಾಟ ಮಾಡುವುದಾಗಿ ನಂಬಿಸಿ ಜನರಿಗೆ ವಂಚಿಸುತ್ತಿದ್ದ ನಾಲ್ವರನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಾಹನಗಳ ಮೇಲಿನ ಸಾಲ ತೀರಿಸಿ ಮಾರಾಟ ಮಾಡುವುದಾಗಿ ನಂಬಿಸಿ ಜನರಿಗೆ ವಂಚಿಸುತ್ತಿದ್ದ ನಾಲ್ವರನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಯಶವಂತಪುರದ ಎಸ್‌ಬಿಎಂ ಕಾಲೋನಿ ನಿವಾಸಿ ಪ್ರಭಾಕರ್, ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲೂಕಿನ ಗೌಡಯ್ಯನದೊಡ್ಡಿ ಗ್ರಾಮದ ವೇಣುಗೋಪಾಲ ಅಲಿಯಾಸ್ ರಾಘವೇಂದ್ರ, ಕೆ.ಆರ್.ಪುರದ ಪ್ರಶಾಂತ್ ಹಾಗೂ ಚನ್ನಸಂದ್ರದ ಭಾಗೇಶ್ ಬಂಧಿತರಾಗಿದ್ದು, 1.74 ಕೋಟಿ ರು. ಮೌಲ್ಯದ 8 ಕಾರುಗಳನ್ನು ಜಪ್ತಿ ಮಾಡಲಾಗಿದೆ.

ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಮತ್ತಿಬ್ಬರ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಕೆಲ ದಿನಗಳ ಹಿಂದೆ ಸ್ಪೋರ್ಟ್ಸ್ ಕಾರನ್ನು ಮಾರಾಟ ನೆಪದಲ್ಲಿ ಆಡುಗೋಡಿ ಸಮೀಪದ ನಾಗರಿಕನಿಗೆ ಆರೋಪಿಗಳು ವಂಚಿಸಿದ್ದರು. ಈ ಬಗ್ಗೆ ಸಂತ್ರಸ್ತ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು, ಪ್ರಭಾಕರನ್ನು ವಶಕ್ಕೆ ಪಡೆದು ಪ್ರಶ್ನಿಸಿದಾಗ ಮೋಸದ ಜಾಲ ಬಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೇಗೆ ವಂಚನೆ?:

ಬ್ಯಾಂಕ್‌ನಲ್ಲಿ ಸಾಲ ಮಾಡಿ ಕಾರು ಖರೀದಿಸಿ ಬಳಿಕ ಸಾಲ ತೀರಿಸಲಾಗದೆ ಕಷ್ಟಕ್ಕೆ ಸಿಲುಕುವ ನಾಗರಿಕರನ್ನೇ ಪ್ರಭಾಕರ್ ಗ್ಯಾಂಗ್ ಗುರಿಯಾಗಿಸಿಕೊಂಡಿತ್ತು. ತಾವು ವಾಹನ ಖರೀದಿಸುತ್ತೇವೆ. ಆ ವಾಹನದ ಬಾಕಿ ಸಾಲದ ಕಂತು ಕಟ್ಟುತ್ತೇವೆ. ಇದುವರೆಗೆ ನೀವು ಕಟ್ಟಿರುವ ಸಾಲದ ಕಂತನ್ನು ನಾವು ಮರಳಿಸುತ್ತೇವೆ ಎಂದು ವಾಹನದ ಮಾಲಿಕರಿಗೆ ಆರೋಪಿಗಳು ಭರವಸೆ ಕೊಡುತ್ತಿದ್ದರು. ಹೀಗೆ ನಾಜೂಕಿನ ಮಾತಿನ ಮೂಲಕ ಜನರನ್ನು ಮರಳು ಮಾಡಿ ತಮ್ಮ ವಂಚನೆ ಬಲೆಗೆ ಪ್ರಭಾಕರ್ ಹಾಗೂ ಆತನ ಸಹಚರರು ಬೀಳಿಸಿಕೊಳ್ಳುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತರುವಾಯ ಆ ಕಾರುಗಳಿಗೆ ನಕಲಿ ನೋಂದಣಿ ಪ್ರಮಾಣ ಪತ್ರ (ಆರ್‌ಸಿ) ಸೇರಿದಂತೆ ಇತರೆ ದಾಖಲೆಗಳನ್ನು ಸೃಷ್ಟಿಸಿ ಬೇರೆಯವರಿಗೆ ಆರೋಪಿಗಳು ಮಾರುತ್ತಿದ್ದರು. ಇತ್ತ ಕಾರಿನ ಸಾಲ ಕೂಡ ತೀರಿಸದೆ, ಅತ್ತ ಮಾಲಿಕರಿಗೆ ಅವರ ಕಾರು ಸಹ ಮರಳಿಸದೆ ಆರೋಪಿಗಳು ವಂಚಿಸುತ್ತಿದ್ದರು. ಅದೇ ರೀತಿ ಕೆಲ ದಿನಗಳ ಹಿಂದೆ ಆಡುಗೋಡಿಯ ಖಾಸಗಿ ಕಂಪನಿ ಉದ್ಯೋಗಿಯಿಂದ ಸ್ಟೋರ್ಟ್ಸ್ ಖರೀದಿಸಿ ಪ್ರಭಾಕರ್ ಗ್ಯಾಂಗ್ ಮೋಸಗೊಳಿಸಿತ್ತು ಎಂದು ಪೊಲೀಸರು ತಿಳಿಸದ್ದಾರೆ.

ಈ ಬಗ್ಗೆ ಆಡುಗೋಡಿ ಠಾಣೆಗೆ ಸಂತ್ರಸ್ತ ದೂರು ನೀಡಿದರು. ಅದರನ್ವಯ ತನಿಖೆ ನಡೆಸಿ ವಂಚನೆ ಜಾಲವನ್ನು ಇನ್ಸ್‌ಪೆಕ್ಟರ್ ಜಿ.ಕೆ.ರವಿ ತಂಡವು ಭೇದಿಸಿದೆ. ಆರೋಪಿಗಳಿಂದ ಫಾರ್ಚೂನರ್‌, ಸುಜುಕಿ ಸ್ವಿಪ್ಟ್ ಡಿಸೈಯರ್ ವಿಡಿಐ, ಫೋರ್ಡ್‌, ವೊಲ್ವೋ, ಇನ್ನೋವಾ ಕ್ರಿಸ್ಟಾ ಸೇರಿದಂತೆ 1.74 ಕೋಟಿ ರು ಮೌಲ್ಯದ ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸೆಕೆಂಡ್ಸ್ ಕಾರುಗಳ ಡೀಲರ್ಸ್

ಸೆಕೆಂಡ್ಸ್ ಕಾರುಗಳ ಮಾರಾಟ ಸೋಗಿನಲ್ಲಿ ಜನರಿಗೆ ವಂಚಿಸಿ ಹಣ ಗಳಿಸುವುದೇ ಆರೋಪಿಗಳು ಪ್ರವೃತ್ತಿಯಾಗಿತ್ತು. ಈ ಆರೋಪಿಗಳ ಪೈಕಿ ಪ್ರಭಾಕರ್‌ ಹಾಗೂ ವೇಣುಗೋಪಾಲ ಕಾರು ಡೀಲರ್ಸ್‌ಗಳಾಗಿದ್ದು, ಪ್ರಶಾಂತ್ ರಿಯಲ್ ಎಸ್ಟೇಟ್‌ ವ್ಯವಹಾರ ನಡೆಸುತ್ತಿದ್ದ. ಇನ್ನು ಚನ್ನಸಂದ್ರ ಬಳಿ ಜೆರಾಕ್ಸ್ ಅಂಗಡಿಯನ್ನು ಭಾಗೇಶ್ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಜೆರಾಕ್ಸ್ ಅಂಗಡಿಯಲ್ಲಿ ದಂಧೆ

ಆರೋಪಿ ಭಾಗೇಶ್ ಮಾಲಿಕತ್ವದ ಜೆರಾಕ್ಸ್ ಅಂಗಡಿಯೇ ನಕಲಿ ಆರ್‌ಸಿ ತಯಾರಿಕೆ ದಂಧೆಯ ಅಡ್ಡೆಯಾಗಿತ್ತು. ಆ ಜೆರಾಕ್ಸ್‌ ಅಂಗಡಿಯಲ್ಲಿ ವಾಹನಗಳ ಮೂಲ ದಾಖಲೆ ತಿರುಚಿ ಆರೋಪಿಗಳು ಖೊಟ್ಟಿ ದಾಖಲೆ ಸೃಷ್ಟಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಖಾಲಿ ನಿವೇಶನ‌ದ ಕಸ ಸ್ವಚ್ಛಮಾಡದಿದ್ದರೆ 1 ಲಕ್ಷ ದಂಡ
ನಿನ್ನೆ 17 ಕಿ.ಮೀ ಫುಟ್ಪಾತ್ ಒತ್ತುವರಿ ತೆರವು