ಕನ್ನಡಪ್ರಭ ವಾರ್ತೆ ಮಂಡ್ಯ
ಇಲ್ಲಿಯವರೆಗೆ ತುರ್ತು ಪರಿಸ್ಥಿತಿಯ ಸಂದರ್ಭಗಳಲ್ಲಿ ರೋಗಿಗಳನ್ನು ಜಿಲ್ಲಾಸ್ಪತ್ರೆಗೆ ಕರೆತರಲು ಅಥವಾ ಮೈಸೂರಿಗೆ ಕರೆದೊಯ್ಯಲು ಪ್ರತಿ ಕಿ.ಮೀ.ಗೆ ನಿಗದಿತ ಶುಲ್ಕವನ್ನು ಆರೋಗ್ಯ ರಕ್ಷಾ ಸಮಿತಿ ವಿಧಿಸುತ್ತಿತ್ತು. ಕನಿಷ್ಠ ೫೦೦ ರು.ನಿಂದ ೧೦೦೦ ರು.ವರೆಗೆ ಬಡ ಹಾಗೂ ಮಧ್ಯಮವರ್ಗದವರಿಗೆ ಹೊರೆಯಾಗುತ್ತಿತ್ತು. ನಗು-ಮಗು ಯೋಜನೆಯಡಿ ಇರುವ ಆ್ಯಂಬ್ಯುಲೆನ್ಸ್ ಸೇವೆಗಳಿಗೂ ಶುಲ್ಕ ಪಡೆಯಲಾಗುತ್ತಿತ್ತು. ಆ್ಯಂಬ್ಯುಲೆನ್ಸ್ ಸೇವೆಗಳ ನಿರ್ವಹಣಾ ವೆಚ್ಚವನ್ನು ಜಿಲ್ಲಾ ಆರೋಗ್ಯ ಇಲಾಖೆ ಭರಿಸುವುದರಿಂದ ಇನ್ನು ಮುಂದೆ ಸಾರ್ವಜನಿಕರಿಗೆ ಉಚಿತ ಆ್ಯಂಬ್ಯುಲೆನ್ಸ್ ಸೇವೆ ಒದಗಿಸುವ ನಿರ್ಧಾರ ಮಾಡಲಾಗಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ಮಂಡ್ಯ ಜಿಲ್ಲೆಯಲ್ಲಿ ಆ್ಯಂಬ್ಯುಲೆನ್ಸ್ ಸೇವೆಯನ್ನು ಉಚಿತವಾಗಿ ಒದಗಿಸಲಾಗುತ್ತಿದೆ.
ನಗು- ಮಗು ಆ್ಯಂಬ್ಯುಲೆನ್ಸ್ ಮೂಲಕ ಹೆರಿಗೆಗೆ ಗರ್ಭಿಣಿಯನ್ನು ಕರೆತರುವುದಕ್ಕೂ ಯಾವುದೇ ಶುಲ್ಕ ಪಡೆಯುವುದಿಲ್ಲ. ಈ ಮೊದಲು ಗರ್ಭಿಣಿಯನ್ನು ಕರೆತರುವುದಕ್ಕೆ ಶುಲ್ಕ ಪಡೆದುಕೊಳ್ಳುತ್ತಿದ್ದು, ಹೆರಿಗೆಯಾದ ಬಳಿಕ ಬಾಣಂತಿ- ಮಗುವನ್ನು ಮನೆಗೆ ಬಿಟ್ಟು ಬರುವುದಕ್ಕೆ ಶುಲ್ಕ ತೆಗೆದುಕೊಳ್ಳುತ್ತಿರಲಿಲ್ಲ. ನಗು-ಮಗು ಆ್ಯಂಬ್ಯುಲೆನ್ಸ್ ಕೂಡ ಉಚಿತವಾಗಿ ಸಿಗಲಿದೆ.ಆರಂಭಿಕವಾಗಿ ಮಂಡ್ಯ ಜಿಲ್ಲೆಯ ಯಾವುದೇ ತಾಲೂಕಿನಿಂದ ಮಿಮ್ಸ್ ಆಸ್ಪತ್ರೆಗೆ ಆಗಮಿಸಿದರೆ ಅಥವಾ ಮೈಸೂರಿಗೆ ಕರೆದೊಯ್ದರೆ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಉಚಿತ ಆ್ಯಂಬ್ಯುಲೆನ್ಸ್ ಸೇವೆ ಜಿಲ್ಲಾ ವ್ಯಾಪ್ತಿ ಮತ್ತು ಮೈಸೂರುವರೆಗೆ ಮಾತ್ರ ಸೀಮಿತವಾಗಿರುತ್ತದೆ. ಬೆಂಗಳೂರಿಗೆ ಕರೆದೊಯ್ಯುವುದಕ್ಕೆ ಇದು ಅನ್ವಯವಾಗುವುದಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ಕನ್ನಡಪ್ರಭಕ್ಕೆ ತಿಳಿಸಿದರು.
---
- ಡಾ.ಕೆ.ಮೋಹನ್, ಜಿಲ್ಲಾ ಆರೋಗ್ಯಾಧಿಕಾರಿ