ಹರಪನಹಳ್ಳಿ: ವೀರಶೈವ ಲಿಂಗಾಯುತ ಸಮಾಜದ ಬಡ ಮಕ್ಕಳಿಗೆ ಸ್ಥಳೀಯ ತೆಗ್ಗಿನಮಠದಲ್ಲಿ ಉಚಿತ ಪ್ರಸಾದ ಹಾಗೂ ಶಿಕ್ಷಣದ ವ್ಯವಸ್ಥೆ ಮಾಡುವುದಾಗಿ ಸ್ಥಳೀಯ ತೆಗ್ಗಿನಮಠದ ವರಸದ್ಯೋಜಾತ ಶಿವಾಚಾರ್ಯರು ಘೋಷಿಸಿದರು.
ಸಮಾಜದಲ್ಲಿಯೂ ಸಾಕಷ್ಟು ಪ್ರತಿಭಾವಂತ ಮಕ್ಕಳಿದ್ದು, ಅಂತಹವರನ್ನು ಮುಂದಿನ ವರ್ಷದಿಂದ ಗುರುತಿಸಿ ಪ್ರತಿಭಾ ಪುರಸ್ಕಾರ ಮಾಡುವಂತಹ ಕಾರ್ಯವನ್ನು ನೂತನ ತಾಲೂಕು ಘಟಕ ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವೀರಶೈವ ಮಕ್ಕಳಿಗೆ ಸಂಸ್ಕಾರ ನೀಡಬೇಕು. ಲಿಂಗಧಾರಣೆ ಮಾಡಿಸಬೇಕು. ವೀರಶೈವ ಧರ್ಮ ಸಾವಿರಾರು ವರ್ಷದ ಇತಿಹಾಸ ಹೊಂದಿದೆ. ಸಮುದಾಯ ಎಲ್ಲ ಜಾತಿ, ಜನಾಂಗದವರ ಜೊತೆ ಹೊಂದಿಕೊಂಡು ಹೋಗುತ್ತಿದ್ದು, ಶೈಕ್ಷಣಿಕವಾಗಿ ಸಾಧನೆ ಮಾಡಿದೆ ಎಂದರು.ತಾಲೂಕು ಘಟಕದ ಅಧ್ಯಕ್ಷ ಎಂ.ರಾಜಶೇಖರ ಮಾತನಾಡಿ, ವೀರಶೈವ ಮಠಗಳು ರಾಜ್ಯದಲ್ಲಿ ಶೈಕ್ಷಣಿಕವಾಗಿ ಸಾಕಷ್ಟು ಕೊಡುಗೆ ನೀಡಿವೆ. ಆದರೂ ಸಮಾಜ ಇಂದಿಗೂ ಹಿಂದುಳಿದಿದೆ. ಹೆಚ್ಚು ಮುತುವರ್ಜಿ ವಹಿಸಿ ಸಮಾಜವನ್ನು ಸಂಘಟಿಸಬೇಕಿದೆ ಎಂದು ಹೇಳಿದರು.
ಪುರಸಭಾ ಮಾಜಿ ಅಧ್ಯಕ್ಷೆ ಪ್ರಭಾ ಅಜ್ಜಣ್ಣ ವೀರಶೈವ ಮಕ್ಕಳಿಗೆ ಸರ್ಕಾರದ ಸವಲತ್ತು ಸಿಗುತ್ತಿಲ್ಲ. ವೀರಶೈವ ಮಹಾಸಭಾ ಏಕತಾ ಮನೋಭಾವನೆಯಿಂದ ವೀರಶೈವರ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.
ಜಿಲ್ಲಾ ಘಟಕದ ಸದಸ್ಯರಾದ ಟಿ.ಎಚ್.ಎಂ. ಮಲ್ಲಿಕಾರ್ಜುನ, ಮಟ್ಟಿ ಮಂಜುನಾಥ, ಸಿ.ಎಂ. ಗುರುಪ್ರಸಾದ್ ಅವರನ್ನು ಸನ್ಮಾನಿಸಲಾಯಿತು.ವೀರಶೈವ ಮಹಾಸಭಾ ಚುನಾವಣೆಯ ಉಪಚುನಾವಣಾಧಿಕಾರಿ ಗೌರಿಶಂಕರ, ಸಹ ಚುನಾವಣಾಧಿಕಾರಿ ಕೌಟಿ ಶಿವಾನಂದ, ತಾಲೂಕು ಘಟಕದ ಪದಾಧಿಕಾರಿಗಳಾದ ಸಿ.ಎಂ. ಕೊಟ್ರಯ್ಯ, ಗೊಂಗಡಿ ನಾಗರಾಜ, ಪಿ.ಬಿ. ಗೌಡ, ಮಲ್ಲಿಕಾರ್ಜುನಸ್ವಾಮಿ ಕಲ್ಮಠ, ಕಾನಹಳ್ಳಿ ರುದ್ರಪ್ಪ, ಶಿವಕುಮಾರಸ್ವಾಮಿ, ಸುಮಾ, ಎಲ್.ಕೊಟ್ರೇಶ, ಕಲ್ಪನಾ, ಎಎಸ್ಎಂ ಗುರುಪ್ರಸಾದ್, ಕಡೇಮನಿ ಸಂಗಮೇಶ ಇದ್ದರು.