ಸಂಡೂರು: ಪಟ್ಟಣದ ಎಸ್ಪಿಎಸ್ ಬ್ಯಾಂಕ್ ಹತ್ತಿರದ ರತ್ನದೀಪ ಸಭಾಂಗಣದಲ್ಲಿ ಎಸ್ಪಿಎಸ್ ಬ್ಯಾಂಕ್, ವೆಸ್ಕೊ ಸಂಸ್ಥೆ ಹಾಗೂ ಜಿಂದಾಲ್ ಸಂಜೀವಿನಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ತೋರಣಗಲ್ಲು ಸಹಯೋಗದಲ್ಲಿ ನಡೆದ ಉಚಿತ ಆರೋಗ್ಯ ಶಿಬಿರದಲ್ಲಿ ೧೪೦ ಜನರ ಆರೋಗ್ಯ ತಪಾಸಣೆ ನಡೆಸಲಾಯಿತು.
ಎಸ್ಪಿಎಸ್ ಬ್ಯಾಂಕ್ ಹಾಗೂ ವೆಸ್ಕೊ ಸಂಸ್ಥೆವತಿಯಿಂದ ಉಚಿತವಾಗಿ ಔಷಧಿಗಳನ್ನು ವಿತರಿಸಲಾಯಿತು.
ಗ್ರೀನ್ ಕಾರ್ಡ್ ವ್ಯವಸ್ಥೆ:ಜಿಂದಾಲ್ ಸಂಜೀವಿನಿ ಆಸ್ಪತ್ರೆಯ ನಿರ್ದೇಶಕ ಮಂಜುನಾಥ್ ಸುದ್ದಿಗಾರರೊಂದಿಗೆ ಮಾತನಾಡಿ, ಎಸ್ಪಿಎಸ್ ಬ್ಯಾಂಕ್ ಹಾಗೂ ಜಿಂದಾಲ್ ಸಂಜೀವಿನಿ ಆಸ್ಪತ್ರೆಯ ಸಹಯೋಗದಲ್ಲಿ ಇನ್ನು ಮುಂದೆ ಈ ಭಾಗದಲ್ಲಿ ಆರೋಗ್ಯದ ಕುರಿತು ಜಾಗೃತಿ, ತಪಾಸಣೆ ಹಾಗೂ ಚಿಕಿತ್ಸಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು, ಆರೋಗ್ಯ ಸೇವೆಯನ್ನು ಒದಗಿಸಲು ಯೋಜಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದ ವರ್ಗದ ಜನರಿಗೆ ಬ್ಯಾಂಕ್ ವತಿಯಿಂದ ಗ್ರೀನ್ ಕಾರ್ಡ್ ವಿತರಿಸಲಾಗುವುದು. ಗ್ರೀನ್ ಕಾರ್ಡ್ ತಂದವರಿಗೆ ಜಿಂದಾಲ್ ಸಂಜೀವಿನಿ ಆಸ್ಪತ್ರೆಯಲ್ಲಿ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗುವುದು ಎಂದರು.
ಎಸ್ಪಿಎಸ್ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷ ಕೆ.ಎಸ್. ನಾಗರಾಜ, ನಿರ್ದೇಶಕ ಸಿದ್ದಪ್ಪ ಅಂಕಮನಾಳ್, ಮುಖ್ಯ ಕಾರ್ಯನಿರ್ವಹಕಾಧಿಕಾರಿ ಎಂ.ಎಸ್. ರೇಣುಕಾ, ವ್ಯವಸ್ಥಾಪಕ ಕೆ. ಪ್ರಕಾಶ್, ಅಧಿಕಾರಿಗಳಾದ ಕುಮಾರ್, ಕೊಟ್ರೇಶ್ ಅಂಕಮನಾಳ್ ಮತ್ತಿತರ ಸಿಬ್ಬಂದಿ ಉಪಸ್ಥಿತರಿದ್ದರು. ಸಂಡೂರಿನಲ್ಲಿ ಎಸ್.ಪಿ.ಎಸ್ ಬ್ಯಾಂಕ್, ವೆಸ್ಕೊ ಸಂಸ್ಥೆ ಹಾಗೂ ಜಿಂದಾಲ್ ಸಂಜೀವಿನಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಹೃದಯ ರೋಗ ತಜ್ಞರಾದ ಡಾ. ತಿಪ್ಪೇಸ್ವಾಮಿ ಗೌಡ ಅವರು ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಿದರು.