ಕನ್ನಡಪ್ರಭ ವಾರ್ತೆ ಕೊಟ್ಟೂರು
ಆರ್ಸಿಬಿ ಐಪಿಎಲ್ ಕಪ್ ಗೆದ್ದ ಹಿನ್ನೆಲೆ ಪಟ್ಟಣದಲ್ಲಿ ತಂಡದ ಅಭಿಮಾನಿಗಳು ವಿಜಯೋತ್ಸವ ಆಚರಿಸಿದರು.ಮಂಗಳವಾರ ರಾತ್ರಿ ಪಟ್ಟಣದಲ್ಲಿನ ಬಸ್ ನಿಲ್ದಾಣ, ಉಜ್ಜಯನಿ ಸರ್ಕಲ್ ಬಳಿ ರಾತ್ರಿ 12ರ ಸುಮಾರಿಗೆ ಸಾವಿರಾರು ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದ ಯುವಕರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಬುಧವಾರ ಬೆಳಗ್ಗೆ ಈ ವಿಜಯೋತ್ಸವದ ನಿಮಿತ್ತ ಪಟ್ಟಣದ ಉಜ್ಜಯನಿ ರಸ್ತೆಯಲ್ಲಿನ ಆಂಜನೇಯ ದೇವಸ್ಥಾನದ ಬಳಿ ಇರುವ ವಿರಾಟ್ ಟೀ ಸ್ಟಾಲ್ ಮಾಲೀಕ ವೀರೇಶ ಅಭಿಮಾನಿಗಳಿಗೆ ಕೇಸರಿ ಬಾತ್, ಪಲಾವ್, ಚಿತ್ರನ್ನವನ್ನು ಉಚಿತವಾಗಿ ಉಣಬಡಿಸಿ ಅಭಿಮಾನ ಮೆರೆದು ಗಮನ ಸೆಳೆದರು.ಈ ವೇಳೆ ಚನ್ನ, ಸಂತೋಷ, ಮಣ್ಣಜಿ ಪ್ರಕಾಶ ಮತ್ತಿತರರಿದ್ದರು.ಸಂಡೂರಿನಲ್ಲಿ ಅಭಿಮಾನಿಗಳಿಂದ ವಿಜಯೋತ್ಸವ:
ಐಪಿಎಲ್ ಕ್ರಿಕ್ರೆಟ್ ಪಂದ್ಯಾವಳಿಯ ೧೮ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಆರ್ಸಿಬಿ ತಂಡ ವಿಜಯ ಸಾಧಿಸಿ ಚಾಂಪಿಯನ್ ಪಟ್ಟ ಗಳಿಸಿದ ಹಿನ್ನೆಲೆ ಮಂಗಳವಾರ ರಾತ್ರಿ ಸಂಡೂರಿನ ವಿಜಯವೃತ್ತದಲ್ಲಿ ಜಮಾಯಿಸಿದ್ದ ಆರ್ಸಿಬಿ ತಂಡದ ಅಭಿಮಾನಿಗಳು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.ಕೆಲವರು ಆರ್ಸಿಬಿ ಜರ್ಸಿ ಹಾಕಿಕೊಂಡು ಕುಣಿದು ಕುಪ್ಪಳಿಸಿದರು. ಆರ್ಸಿಬಿ ತಂಡ ಗೆಲವು ಸಾಧಿಸುತ್ತಿದ್ದಂತೆ, ಹುಡುಗರು ಹಾಗೂ ಯುವಕರು ಓಣಿಗಳಲ್ಲಿ ಕೇಕೆ ಹಾಕುತ್ತಾ, ಬೈಕ್ಗಳನ್ನು ಗುಯ್ ಗುಟ್ಟಿಸುತ್ತಾ ಅತ್ತಿಂದಿತ್ತ, ಇತ್ತಿಂದತ್ತ ಸಂಚರಿಸಿ ಸಂಭ್ರಮಿಸಿದ ದೃಶ್ಯ ಅಲ್ಲಲ್ಲಿ ಕಂಡು ಬಂದಿತು.ಆರ್ಸಿಬಿ ಗೆಲುವಿನ ಹಿನ್ನೆಲೆ ಸಂಭ್ರಮಾಚರಣೆ:
ಐಪಿಎಲ್ ನ 18ನೇ ಅವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ತಂಡ ಜಯಗಳಿಸಿದ್ದು, ಕಂಪ್ಲಿ ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲೆಡೆ ಸಂಭ್ರಮ ಮನೆ ಮಾಡಿತ್ತು. ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಜಮಾವಣೆಗೊಂಡು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸುವ ಜೊತೆಗೆ ತಾಷ ರಾಮ್ ಡೋಲ್ ಸದ್ದಿಗೆ ಹೆಜ್ಜೆ ಹಾಕಿದರು. ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲೆಡೆ ಅಭಿಮಾನಿಗಳು ಮನೆಗಳ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಿ ಆರ್ಸಿಬಿ ಪರ ಘೋಷಣೆ ಕೂಗಿದರು. ಒಟ್ಟಿನಲ್ಲಿ ಮಂಗಳವಾರ ರಾತ್ರಿ ಎಲ್ಲೆಡೆ ಹಬ್ಬದ ವಾತಾವರಣ ಮನೆ ಮಾಡಿತ್ತು. ಇನ್ನು ಬುಧವಾರ ಬೆಳಗ್ಗೆ ತನ್ನ ನೆಚ್ಚಿನ ತಂಡ ಜಯಗಳಿಸಿದ ಹಿನ್ನೆಲೆ ಅಭಿಮಾನಿಗಳು ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಸಿದರು.ಅನ್ನ ಸಂತರ್ಪಣೆ:ಪಟ್ಟಣದ ಹೊಸ ಬಸ್ ನಿಲ್ದಾಣದ ಬಳಿ ಆರ್ಸಿಬಿ ಅಭಿಮಾನಿ ಬಳಗ ಹಾಗೂ ಹೂಗಾರ್ ಸಮಾಜ ಕಂಪ್ಲಿ ವತಿಯಿಂದ ಅನ್ನ ಸಂತರ್ಪಣೆ ನಡೆಸಲಾಯಿತು. ಶೇಖರಪ್ಪ ಹೂಗಾರ, ಎಂ. ನಾರಾಯಣ ಸ್ವಾಮಿ, ರವಿ ಹೂಗಾರ, ರಮೇಶ್ ಹೂಗಾರ, ಜಂಗ ನಾಗರಾಜ್, ಗಣೇಶ್ ಹೂಗಾರ್, ಎಂ. ಮಲ್ಲಿಕಾರ್ಜುನ, ಅಯ್ಯಪ್ಪ ಹೂಗಾರ ಇದ್ದರು.