ಮದುವೆ ಕನಸಿಂದ ಚಿತೆಯವರೆಗೆ; ನಾಗೇಂದ್ರ ಬದುಕಿನ ದುರಂತ ಅಧ್ಯಾಯ

KannadaprabhaNewsNetwork |  
Published : Jun 30, 2026, 02:30 AM IST
ನಾಗೇಂದ್ರನ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ನಡೆಯಿತು.  | Kannada Prabha

ಸಾರಾಂಶ

ನನ್ನ ಮಗ ನಾಲ್ಕು ವರ್ಷಗಳ ಹಿಂದೆಯೇ ರಮ್ಯಾಳನ್ನು ಮರೆತಿದ್ದ. ಆಕೆಯ ತಂದೆ-ತಾಯಿ ಈ ಸಂಬಂಧವನ್ನು ಇಲ್ಲಿಗೇ ಬಿಡಿ ಎಂದು ಹೇಳಿದ ಬಳಿಕ ನಾವು ಕೂಡ ಮಗನಿಗೆ ಅದನ್ನೇ ತಿಳಿಸಿದ್ದೆವು.

ನನ್ನ ಮಗ ಅವಳನ್ನು ನಾಲ್ಕು ವರ್ಷಗಳ ಹಿಂದೆಯೇ ಮರೆತಿದ್ದ..: ತಂದೆಯ ಕಣ್ಣೀರಿನ ಮಾತು

ಪ್ರೇಮ ವೈಫಲ್ಯದ ಅಂತ್ಯ ಬಾಂಬ್ ಸ್ಫೋಟದಲ್ಲಿ; ಕುಟುಂಬಕ್ಕೆ ಉಳಿದದ್ದು ಕಣ್ಣೀರು

ರಾಘು ಕಾಕರಮಠ

ಕನ್ನಡಪ್ರಭ ವಾರ್ತೆ ಅಂಕೋಲಾ

ನನ್ನ ಮಗ ನಾಲ್ಕು ವರ್ಷಗಳ ಹಿಂದೆಯೇ ರಮ್ಯಾಳನ್ನು ಮರೆತಿದ್ದ. ಆಕೆಯ ತಂದೆ-ತಾಯಿ ಈ ಸಂಬಂಧವನ್ನು ಇಲ್ಲಿಗೇ ಬಿಡಿ ಎಂದು ಹೇಳಿದ ಬಳಿಕ ನಾವು ಕೂಡ ಮಗನಿಗೆ ಅದನ್ನೇ ತಿಳಿಸಿದ್ದೆವು. ಆ ನಂತರ ಆತ ಆಕೆಯ ಸಂಪರ್ಕಕ್ಕೂ ಹೋಗಿರಲಿಲ್ಲ. ತನ್ನ ಕೆಲಸ ಮಾಡಿಕೊಂಡು ಶಾಂತವಾಗಿ ಬದುಕುತ್ತಿದ್ದ. ಆದರೆ ಏಕಾಏಕಿ ಇಂತಹ ನಿರ್ಧಾರ ಯಾಕೆ ತೆಗೆದುಕೊಂಡ ಎನ್ನುವುದು ನಮಗೀಗಲೂ ಅರ್ಥವಾಗುತ್ತಿಲ್ಲ...

ಇದು ತುಮಕೂರಿನ ಜೋಗಿಹಳ್ಳಿ ಸಮೀಪ ಕಾರಿನಲ್ಲೇ ಬಾಂಬ್ ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ನಾಗೇಂದ್ರ ಗೌಡನ ತಂದೆ ತಿಮ್ಮಪ್ಪ ಗೌಡ ಮಾಧ್ಯಮದ ಎದುರು ಕಣ್ಣೀರಿನೊಂದಿಗೆ ಮನದಾಳದ ನೋವನ್ನು ಹೊರಹಾಕಿದ ಪರಿ.

ನಮ್ಮ ಊರಿನಲ್ಲಿ ಅವನ ವಿರುದ್ಧ ಯಾರೂ ಒಂದು ಕೆಟ್ಟ ಮಾತನ್ನೂ ಆಡಿರಲಿಲ್ಲ. ಯಾವುದೇ ಅಪವಾದವೂ ಇರಲಿಲ್ಲ. ಎಲ್ಲರೊಂದಿಗೆ ಒಳ್ಳೆಯವನಾಗಿಯೇ ಬದುಕುತ್ತಿದ್ದ. ಇಂತಹ ದುರಂತ ಹೇಗೆ ನಡೆಯಿತು ಎಂಬುದು ನಮಗೂ ನಂಬಲಾಗುತ್ತಿಲ್ಲ. ಈಗ ಏನು ಮಾಡಬೇಕು ಎನ್ನುವುದೇ ತೋಚುತ್ತಿಲ್ಲ ಎಂದು ಭಾವುಕರಾದರು.

ಕುಟುಂಬದ ಭವಿಷ್ಯದ ಕನಸುಗಳನ್ನು ನೆನಪಿಸಿಕೊಂಡ ಅವರು, ಆತನಿಗೆ ಮದುವೆಯಾಗಲು ಬೇರೆ ಹುಡುಗಿ ಕೂಡ ನೋಡುತ್ತಿದ್ದೆವು. ನಿನಗೆ ಯಾರಾದರೂ ಇಷ್ಟವಿದ್ದರೆ ಹೇಳು ಎಂದು ಹೇಳಿದ್ದೆವು. ನಮ್ಮ ಕಣ್ಣೆದುರೇ ಅವನ ಮದುವೆ ಮಾಡಿ, ತುಂಬು ಕುಟುಂಬ ನೋಡಬೇಕೆಂಬ ಆಸೆ ಇತ್ತು. ಆದರೆ ವಿಧಿ ಬೇರೆಯದ್ದನ್ನೇ ಮಾಡಿತ್ತು ಎಂದು ಕಣ್ಣೀರು ಹಾಕಿದರು.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದರಲ್ಲಿ ಯುವತಿಯ ತಪ್ಪಿದೆಯೋ ಇಲ್ಲವೋ ನಮಗೆ ಗೊತ್ತಿಲ್ಲ. ಆದರೆ ಯಾವುದೇ ಕಾರಣಕ್ಕೂ ಇಂತಹ ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದಾಗಿತ್ತು. ಈಗ ಅವನು ನಮ್ಮ ಜೊತೆಯಲ್ಲಿ ಇಲ್ಲ. ನಾವು ಇದ್ದೂ ಇಲ್ಲದಂತಾಗಿದ್ದೇವೆ ಎಂದು ದುಃಖ ತಡೆಯಲಾರದೆ ಮರುಗಿದರು.

ಕಣ್ಣೀರಿನ ನಡುವೆ ಅಂತ್ಯಕ್ರಿಯೆ

ಭಾನುವಾರ ತಡರಾತ್ರಿ ಸುಮಾರು 1.45ಕ್ಕೆ ನಾಗೇಂದ್ರನ ಮೃತದೇಹವನ್ನು ಸ್ವಗ್ರಾಮ ಹೆಬ್ಬುಳಕ್ಕೆ ತರಲಾಯಿತು. ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಹಾಗೂ ಬಂಧು-ಬಳಗದವರು ಮನೆ ಮುಂದೆ ಜಮಾಯಿಸಿ ಮುಚ್ಚಿದ ಪ್ಲಾಸ್ಟಿಕ್ ಚೀಲದಲ್ಲಿದ್ದ ನಾಗೇಂದ್ರನ ಅಂತಿಮ ದರ್ಶನ ಪಡೆದರು. ಬಳಿಕ ರಾತ್ರಿ ಸುಮಾರು 2.15ಕ್ಕೆ ತಂದೆ ತಿಮ್ಮಪ್ಪ ಗೌಡ ಕಣ್ಣೀರಿನಲ್ಲೇ ವಿಧಿವಿಧಾನ ನೆರವೇರಿಸಿ ಮಗನ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಅಲ್ಲಿದ್ದವರ ಮನಕಲಕುವ ದೃಶ್ಯ ಎಲ್ಲರ ಕಣ್ಣನ್ನೂ ತೇವಗೊಳಿಸಿತು.

ಕೊನೆಯ ಪ್ರಯಾಣ ಸಿಸಿಟಿವಿಯಲ್ಲಿ ಸೆರೆ

ಬೆಂಗಳೂರಿಗೆ ತೆರಳುವ ಮುನ್ನ ನಾಗೇಂದ್ರ ಹೆಬ್ಬಾಳದ ಆಸ್ವಾಸ್ ಹೋಟೆಲ್‌ನಲ್ಲಿ ಊಟದ ಪಾರ್ಸೆಲ್ ಪಡೆದು ಬಳಿಕ ಖಾಸಗಿ ಬಸ್ ಏರುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ದೃಶ್ಯಾವಳಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆಯ ಪ್ರಮುಖ ಸಾಕ್ಷ್ಯವಾಗಿ ಪರಿಶೀಲಿಸುತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗುರಿಯತ್ತ ದೃಷ್ಟಿ ನೆಟ್ಟರೆ ಯಶಸ್ಸು ದೂರವಿಲ್ಲ: ಡಾ.ಭೀಮೇಶ ಯರಡೋಣಿ
ಶಿಕ್ಷಣದಿಂದ ಮಾತ್ರ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಸಾಧ್ಯ: ನ್ಯಾ. ತೇಜಸ್ವಿನಿ ಸೊಗಲದ