ಆಶಾ ಕಾರ್ಯಕರ್ತರ ಎಲ್ಲ ಬೇಡಿಕೆ ಶೀಘ್ರ ಈಡೇರಿಸಿ

KannadaprabhaNewsNetwork |  
Published : Feb 28, 2026, 01:30 AM IST
27ಕೆಡಿವಿಜಿ3, 4-ದಾವಣಗೆರೆಯಲ್ಲಿ ರಾಜ್ಯವ್ಯಾಪಿ ಕರೆಯ ಮೇರೆಗೆ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಕೇಂದ್ರ ಸರ್ಕಾರದ ಪ್ರೋತ್ಸಾಹಧನ ಹಾಗೂ ರಾಜ್ಯ ಸರ್ಕಾರದ ಗೌರವಧನ ಒಟ್ಟಿಗೆ ಸೇರಿಸಿ, ಮಾಸಿಕ ₹15 ಸಾವಿರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತರ ಸಂಘ ಎಐಯುಟಿಯುಸಿ ಸಂಯೋಜಿತ ನೇತೃತ್ವದಲ್ಲಿ ರಾಜ್ಯವ್ಯಾಪಿ ಕರೆ ಮೇರೆಗೆ ಆಶಾ ಕಾರ್ಯಕರ್ತೆಯರು ನಗರದಲ್ಲಿ ಶುಕ್ರವಾರ ಪ್ರತಿಭಟಿಸಿದ್ದಾರೆ.

- ಪ್ರತಿಭಟನೆಯಲ್ಲಿ ಎಐಯುಟಿಯುಸಿ ಮುಖಂಡ ಮಂಜುನಾಥ ಕುಕ್ಕವಾಡ ಆಗ್ರಹ । ಎಸಿ ಮುಖೇನ ರಾಜ್ಯ ಸರ್ಕಾರಕ್ಕೆ ಮನವಿ-

- - -

- ಕೇಂದ್ರ ಸರ್ಕಾರದ ಪ್ರೋತ್ಸಾಹಧನ, ರಾಜ್ಯ ಸರ್ಕಾರದ ಗೌರವಧನ ಒಟ್ಟಿಗೆ ಸೇರಿಸಿ ಮಾಸಿಕ ₹15 ಸಾವಿರ ನೀಡಬೇಕು.

- ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಆಶಾಗಳ ಗೌರವಧನ ₹5 ಸಾವಿರದಿಂದ ₹8 ಸಾವಿರಕ್ಕೆ ಹೆಚ್ಚಿಸಬೇಕು.

- ನಿವೃತ್ತ ಆಶಾಗಳಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಇಡುಗಂಟು ನೀಡಬೇಕು.

- ಗಂಭೀರ ಕಾಯಿಲೆಯ ಆಶಾಗಳಿಗೆ ಚೇತರಿಕೆ ಅವಧಿಯಲ್ಲಿ 3 ತಿಂಗಳು ಮಾಸಿಕ ನಿಶ್ಚಿತ ಗೌರವಧನ ಪಾವತಿಸಬೇಕು.

- ಹಲವಾರು ವರ್ಷಗಳಿಂದ ಬಾಕಿ ಇರುವ ವಿವಿಧ ಕಂಪೋನೆಂಟ್‌ಗಳು ಹಣ ಬಿಡುಗಡೆ ಮಾಡಬೇಕು. - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕೇಂದ್ರ ಸರ್ಕಾರದ ಪ್ರೋತ್ಸಾಹಧನ ಹಾಗೂ ರಾಜ್ಯ ಸರ್ಕಾರದ ಗೌರವಧನ ಒಟ್ಟಿಗೆ ಸೇರಿಸಿ, ಮಾಸಿಕ ₹15 ಸಾವಿರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತರ ಸಂಘ ಎಐಯುಟಿಯುಸಿ ಸಂಯೋಜಿತ ನೇತೃತ್ವದಲ್ಲಿ ರಾಜ್ಯವ್ಯಾಪಿ ಕರೆ ಮೇರೆಗೆ ಆಶಾ ಕಾರ್ಯಕರ್ತೆಯರು ನಗರದಲ್ಲಿ ಶುಕ್ರವಾರ ಪ್ರತಿಭಟಿಸಿದರು.

ಶ್ರೀ ಜಯದೇವ ವೃತ್ತದಿಂದ ಎಐಯುಟಿಯುಸಿ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಕುಕ್ಕವಾಡ ಇತರರ ನೇತೃತ್ವದಲ್ಲಿ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಘೋಷಣೆ ಕೂಗುತ್ತಾ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ, ಧರಣಿ ನಡೆಸಿದರು. ಬಳಿಕ ಎಸಿ ಕಚೇರಿ ಅಧಿಕಾರಿಗಳ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಿದರು.

ಮಂಜುನಾಥ ಕುಕ್ಕವಾಡ ಮಾತನಾಡಿ, ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಸರ್ಕಾರದಿಂದ ಪ್ರೋತ್ಸಾಹಧನ ಹಾಗೂ ರಾಜ್ಯ ಸರ್ಕಾರದಿಂದ ಗೌರವಧನ ಎರಡನ್ನೂ ಸೇರಿಸಿ, ₹15 ಸಾವಿರ ಗೌರವಧನ ನೀಡುವವರೆಗೂ ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಆಶಾಗಳ ಗೌರವಧನವನ್ನು ₹5 ಸಾವಿರದಿಂದ ₹8 ಸಾವಿರಕ್ಕೆ ಹೆಚ್ಚಿಸಬೇಕು. ನಿವೃತ್ತ ಆಶಾಗಳಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಇಡುಗಂಟು ನೀಡಬೇಕು ಎಂದು ಒತ್ತಾಯಿಸಿದರು.

ತೀವ್ರತರನಾದ ರೋಗಗಳ ಚಿಕಿತ್ಸಾ ವೆಚ್ಚಕ್ಕಾಗಿ ಕಾರ್ಪಸ್ ಫಂಡ್ ಮಾಡಿ, ಚಿಕಿತ್ಸಾ ವೆಚ್ಚ ಮರುಪಾವತಿಗೆ ಅಂಗನವಾಡಿ ಮಾದರಿಯಲ್ಲಿ ವ್ಯವಸ್ಥೆ ಮಾಡಬೇಕು. ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಚೇತರಿಕೆ ಅವಧಿಯಲ್ಲಿ 3 ತಿಂಗಳು ಮಾಸಿಕ ನಿಶ್ಚಿತ ಗೌರವಧನ ಪಾವತಿಸಬೇಕು. ಕೇಂದ್ರದ ಮಾರ್ಗಸೂಚಿ ಉಲ್ಲಂಘಿಸಿ, ರಾಜ್ಯದಲ್ಲಿ ಆಶಾ ತರ್ಕಬದ್ಧಗೊಳಿಸುವ ಹೆಸರಲ್ಲಿ ಸಾವಿರಾರು ಆಶಾ ಕಾರ್ಯಕರ್ತೆಯರನ್ನು ಕೈಬಿಡುವ ಪ್ರಕ್ರಿಯೆ ತಕ್ಷಣ ನಿಲ್ಲಿಸಬೇಕು. ಆಶಾ ಸುಗಮಕಾರರನ್ನು ಸೂಕ್ತ ವೇತನದೊಂದಿಗೆ ಮುಂದುವರಿಸಬೇಕು ಎಂದು ಆಗ್ರಹಿಸಿದರು.

ಆಶಾ ಸುಗಮಕಾರರಿಗೆ 2024-25ರಲ್ಲಿ ಹೆಚ್ಚ‍ಳವಾದ ಗೌರವಧನ ₹7500, 1 ವರ್ಷದ ಬಾಕಿ ಮಾಸಿಕ ₹1500 ನಂತೆ ಎಲ್ಲ ಸುಗಮಕಾರರಿಗೆ ನೀಡಬೇಕು. ರಾಜ್ಯಾದ್ಯಂತ ಕೇಂದ್ರದ ಪ್ರೋತ್ಸಾಹಧನ ಆಶಾ ಕಾರ್ಯಕರ್ತೆಯರು ಕೆಲಸ ಮಾಡಿದಷ್ಟು ಸಿಗುತ್ತಿಲ್ಲ. ಈ ಸಮಸ್ಯೆ ಪರಿಹರಿಸಿ, ಆಶಾ ಮಹಿಳೆಯರಿಗೆ ಬಾಕಿ ಇರುವ ಪ್ರೋತ್ಸಾಹಧನ ನೀಡಬೇಕು. ಹಲವಾರು ವರ್ಷಗಳಿಂದ ಬಾಕಿ ಇರುವ ವಿವಿಧ ಕಂಪೋನೆಂಟ್‌ಗಳು ಹಣ ಬಿಡುಗಡೆ ಮಾಡಬೇಕು. ರಾಜ್ಯ ಸರ್ಕಾರದ ಗ್ಯಾರಂಟಿ ಸರ್ವೇ ಮಾಡಿದ್ದಕ್ಕೆ ನಿಗದಿಯಾಗಿದ್ದ ₹1 ಸಾವಿರ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.

ಕೇಂದ್ರ ಸರ್ಕಾರದ ಮಾರ್ಗಸೂಚಿ ಉಲ್ಲಂಘನೆ ಮಾಡುವುದನ್ನು ರಾಜ್ಯ ಸರ್ಕಾರ ನಿಲ್ಲಿಸಬೇಕು. ಆಶಾಗಳನ್ನು ಹೊರಗುತ್ತಿಗೆ ಗ್ರೂಪ್ ಡಿ ನೌಕರಿ ನೀಡುವುದಾಗಿ ತಿಳಿಸಿ, ಕೆಳಗಡೆ ನಿಯಮಾನುಸಾರ ನೇಮಕವೆಂದು ಹೇಳಿ, ಬಹುತೇಕ ಆಶಾಗಳನ್ನು ಕೈಬಿಡುವ ಹುನ್ನಾವ ನಿಲ್ಲಿಸಬೇಕು. 10 ವರ್ಷ ಕಾರ್ಯನಿರ್ವಹಿಸಿದ ಸುಗಮಕಾರರನ್ನು ಮರುನೇಮಕ ಮಾಡಿಕೊಳ್ಳಬೇಕು ಎಂದು ಮಂಜುನಾಥ ಕುಕ್ಕವಾಡ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾಧ್ಯಕ್ಷೆ ಲಲಿತಮ್ಮ, ಎಸ್.ಆರ್. ಇಂದಿರಾ ಮಲ್ಲಾಪುರ, ಲೀಲಾವತಿ ಬಿದರಕೆರೆ, ರೂಪಾ ಕೊಂಡದಹಳ್ಳಿ, ಅಂಜಲಿ ಸೇವಾ ನಗರ, ಕವಿತಾ ಸಂತೇಬೆನ್ನೂರು ಮಂಜಮ್ಮ ಚೀಲೂರು, ರಾಧಾ ಕೊಕ್ಕನೂರು, ಗೀತಾ ಗುತ್ತೂರು, ವೇದ ಹರಿಹರ ಇತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು. ನೂರಾರು ಆಶಾ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿದ್ದರು.

- - -

(ಬಾಕ್ಸ್‌) * ಏಕಪಕ್ಷೀಯ ಆದೇಶಗಳು ಕೈಬಿಡಬೇಕು ಜನೆವರಿ 2025ರಂದು 3 ದಿನ ನಡೆದಿದ್ದ ಆಶಾ ಅಹೋರಾತ್ರಿ ಹೋರಾಟದ ವೇಳೆ 4ನೇ ದಿನ ಸರ್ಕಾರ ನೀಡಿದ್ದ ₹10 ಸಾವಿರ ಮಾಸಿಕ ಗ್ಯಾರಂಟಿ ಗೌರವಧನದ ಭರವಸೆ ಇದುವರೆಗೆ ಈಡೇರಿಲ್ಲ. ಮಾರ್ಚ್ 2025ರಲ್ಲಿ ಬಜೆಟ್‌ನಲ್ಲಿ ಅಂಗನವಾಡಿ, ಬಿಸಿಯೂಟ ತಯಾರಕರಿಗೆ ಹೆಚ್ಚಿಸಿದಂತೆ ಎಲ್ಲ ಆಶಾ ಕಾರ್ಯಕರ್ತೆಯರಿಗೂ ₹1 ಸಾವಿರ ಹೆಚ್ಚಿಸಲಿಲ್ಲ. ಆರೋಗ್ಯ ಸಚಿವರು, ಉನ್ನತಮಟ್ಟದ ಅಧಿಕಾರಿಗಳು ಸಾಕಷ್ಟು ಸಭೆ ಮಾಡಿದ್ದರೂ ಫಲಿತಾಂಶ ಮಾತ್ರ ಶೂನ್ಯವಾಗಿದೆ. ಇಲಾಖೆಯಿಂದ ಆಶಾ ವಿರೋಧಿ ಹಲವಾರು ಏಕಪಕ್ಷೀಯ ಆದೇಶ ಹೊರಬೀಳುತ್ತಿದ್ದು, ಅವುಗಳನ್ನು ನಿಲ್ಲಿಸಬೇಕು ಎಂದು ಎಐಯುಟಿಯುಸಿ ಮುಖಂಡ ಮಂಜುನಾಥ ಕುಕ್ಕವಾಡ ಹೇಳಿದರು.

- - -

-27ಕೆಡಿವಿಜಿ3, 4: ದಾವಣಗೆರೆಯಲ್ಲಿ ರಾಜ್ಯವ್ಯಾಪಿ ಕರೆ ಮೇರೆಗೆ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರರಿಗೆ ಸಚಿವ ಸ್ಥಾನ ನೀಡಿ
56 ಸಾವಿರ ಹುದ್ದೆಗಳ ಭರ್ತಿ ಹೇಳಿಕೆ ಬಿಜೆಪಿ ಹೋರಾಟದ ಫಲ